ನನ್ನ 'ಸು' ಗೆ,
ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವಾಗ ನಿನ್ನ ಗೆಜ್ಜೆಗಳನ್ನೇ ಕೇಳುತ್ತಾ ನಿಂತಿದ್ದೆ ನಾನು...
ನಿನ್ನ ನಾ ಬಸ್ಸಲ್ಲೇ ನೋಡಿದ್ದೆ.. ಸುಮ್ಮನೆ ನೋಡುತ್ತಾ ನಿಂತಿರುತ್ತಿದ್ದೆ..ಕಂಡಕ್ಟರನ ಬಳಿ ಎರಡು ರೂಪಾಯಿ ಚಿಲ್ಲರೆಗೆ ಜಗಳವಾಡುವಾಗ, ಚಪ್ಪಲಿ ಮೆಟ್ಟಿ ನಿನ್ನ ಹಿಂದೆ ನಿಂತ ದಪ್ಪ ಹೆಂಗಸು ಮೈಮೇಲೆ ಬಿದ್ದಾಗ ನೀನು ದಬಾಯಿಸುವಾಗ, ಪಕ್ಕದ ಸೀಟಿನಲ್ಲಿ ಕುಳಿತ ಹೆಂಗಸಿನ ಪುಟ್ಟ ಮಗು ನಿನ್ನ ಉದ್ದ ಜಡೆ ಎಳೆಯುವಾಗ ನಾನಲ್ಲೇ ಇರುತ್ತಿದ್ದೆ.. ನೀನು ನನ್ನ ನೋಡಲಿಲ್ಲವೋ, ನೋಡಿದರೂ ನೋಡದಂತೆ ನಟಿಸಿದೆಯೋ ನಾಕಾಣೆ.. ಆದರೆ ಅಂದೇ ನೀನು ಆವರಿಸಿದ್ದೆ.. ಅದಾದ ಮೇಲೇ ನಾನು ಪೌಡರ್ ಹಚ್ಚಿಕೊಂಡು ಒಮ್ಮೆ ಕಾಲೇಜಿಗೆ ಬಂದದ್ದು..
ನೀನು ನನ್ನ ಕ್ಲಾಸಿನಲ್ಲೇ ಕುಳಿತಿದ್ದರೂ ನಿನ್ನನ್ನು ನಾನು ಮಾತಾಡಿಸಲಿಲ್ಲ.. ಆ ಸಂಕ್ರಾಂತಿಯ ದಿನ ನೀನು ಜರೀ ಲಂಗ ತೊಟ್ಟು ಬರುವವರೆಗೂ.. ನನ್ನ ಮುಂದೆ ಎಳ್ಳು ಬೆಲ್ಲ ತುಂಬಿದ ಬಟ್ಟಲು ಹಿಡಿಯುವವರೆಗೂ.. "ಎಲ್ಲಾ ನನಗೇನಾ? " ಅಂತ ಒಂದು ಕೈಮುಷ್ಠಿ ತುಂಬಾ ಎಳ್ಳು ಬೆಲ್ಲ ಬಾಚಿಕೊಂಡಿದ್ದೆ.. ನನ್ನ ಆ ಪ್ರಶ್ನೆ ಬರೀ ಎಳ್ಳುಬೆಲ್ಲಕ್ಕಾಗಿರಲಿಲ್ಲ... ನಿನ್ನ ಬಾಳಿನ ಎಳ್ಳು ಬೆಲ್ಲದ ಸಂದರ್ಭಗಳಲ್ಲಿ ಪಾಲು ಕೇಳಲಾಗಿತ್ತು.. ನೀನು ಏನೂ ಉತ್ತರಿಸದೆ ತಲೆ ತಗ್ಗಿಸಿ ಓಡಿ ಹೋದಾಗ ನನಗೆ ಗೆಲುವಿನ ಸೂಚನೆ ಸಿಕ್ಕಿತ್ತು.. ಮರುದಿನ ನೀನು ಇನ್ನೊಂದು ಬಟ್ಟಲು ತುಂಬಾ ಬೆಲ್ಲ ಮಾತ್ರ ತಂದು "ಎಲ್ಲಾ ನಿನಗೇನೇ.." ಅಂದೆ.. ಅಂದೇ ನಾ ಗೆದ್ದಿದ್ದೆ..
ಅದಾದ ಮೇಲೆ ನಾವು ಕಾಲೇಜಿಗೆ ಬಂಕ್ ಹೊಡೆದ ದಿನಗಳೆಷ್ಟೋ.. ಕಾಮತ ಹೋಟಲಿನ ತಂಪು ಕೋಣೆಯ ಒಳಗೆ ಕುಡಿದ ಬಿಸಿ ಕಾಫಿಗಳೆಷ್ಟೋ.. ಶರಾವತಿ ನದೀ ಬ್ರಿಡ್ಜ್ ಮೇಲೆ ನಿನ್ನ ನೋಡುತ್ತಾ ಸಿಪ್ಪೆ ತೆಗೆಯದೇ ಬಾಯಿಗೆ ಹಾಕಿದ ಕಡಲೇಕಾಯಿಗಳೆಷ್ಟೋ.. ಸಂಜೆಯ ಹೊತ್ತಿಗೆ ನಾವಿಬ್ಬರೂ ಸೇರಿ ಲೆಕ್ಕ ಮಾಡಿದ ಬಂದರದ ಹಡಗಿನ ಪತಾಕೆಗಳೆಷ್ಟೋ.. ಕೇವಲ ವಾರದೊಳಗೆ ನಾವು ನಮ್ಮೊಳಗೆ, ಒಬ್ಬರೊಳಗೊಬ್ಬರು ಬೆಳೆದಿದ್ದೆವು.. ಕಾಸರಕೋಡಿನ ಹಂಚಿನ ಕಾರ್ಖಾನೆಯ ಹೊಗೆ ನೋಡುತ್ತಿರುವಾಗಲೇ, ನೀ ಹೇಳಿದ ಮೇಲೇ ನನಗೆ ನೆನಪಾಗಿದ್ದು.. ನಾಡಿದ್ದು ಕೊಳಗದ್ದೆ ತೇರು ಎಂದು..
ಬಹುಶಃ ನನ್ನಲ್ಲಿಂದಲೇ ನಿನ್ನನ್ನು 'ಸು' ಎಂದು ಕರೆಯಲು ಪ್ರಾರಂಭಿಸಿದ್ದೆ ಅನಿಸುತ್ತದೆ.. ಯಾಕೆ ಅಂತ ನೀನು ಕೇಳಿದಾಗ ಉತ್ತರ ಹುಡುಕಲು ಹೋಗಿ ಸಿಗದೆ 'ಸು'ಮ್ಮನೆ- 'ಸು' , ನನ್ನ ಮನಸಿನ ಕೊನೆಯಕ್ಷರ .. ಅಂದರೆ ಓಡುವ ಮನ'ಸು' ನೆಲೆಕಂಡುಕೊಂಡು ನಿಂತಿದ್ದು ನಿನ್ನಲ್ಲೇ.. ಅಂತೆಲ್ಲಾ ಮಾತಾಡಿದ್ದೆ.. ಜಾತ್ರೆಯ ದಿನ ಅಮ್ಮನ ಜೊತೆಯಲ್ಲಿ ಬಂದು ಬಳೇ ಅಂಗಡಿಯ ಕನ್ನಡಿಯಲ್ಲೇ ನೀನು ನನ್ನನ್ನು ನೋಡುತ್ತಿದ್ದಾಗ ನಿನ್ನ ಅಮ್ಮ ಕಾವಲುಗಾರ ಗುಮ್ಮನಂತೆ ಕಂಡದ್ದು ಸುಳ್ಳಲ್ಲ..'ನಾನು ನೀನು ಐಸ್ ಕ್ರೀಂ ತಿನ್ನೋದು' ಅಂತ ಮೊದಲೇ ಹೇಳಿದ್ದು ನೀನೇ ತಾನೇ.. ಮತ್ಯಾಕೆ ಮರೆತೆ? ನನ್ನ ಜೊತೆ ಮಾತೂ ಆಡಲಿಲ್ಲ.. ಆಗ ಬಂದು ಸಣ್ಣ ಮುನಿಸು ಮಾಯವಾಗಿದ್ದು-ತೇರಿಗೆ ಬಾಳೆ ಹಣ್ಣು ಎಸೆಯುವ ನೆಪದಲ್ಲಿ ನೀನು ನೇರವಾಗಿ ನನಗೇ ಹೊಡೆದೆಯಲ್ಲಾ.. ಆಗ.
ಮಾರನೇ ದಿನವೇ ನನ್ನ ನಿನ್ನ ಮೊದಲ ಜಗಳ ಪ್ರಾರಂಭವಾಗಿತ್ತು.. ನಾನು ನಿನಗೆ 'ಅಮ್ಮನ ಬಾಲ' ಅಂತ ರೇಗಿಸಲು ಪ್ರಾರಂಭಿಸಿದಾಗ ನೀನು ಮುಖದೊಡ್ಡದು ಮಾಡಿಕೊಂಡು ಡ್ರೈವರ್ ಸೀಟಿನ ಪಕ್ಕದ ಸೀಟಿನಲ್ಲಿ ಹೋಗಿ ಕುಳಿತುಬಿಟ್ಟೇ.. ನಾನು ಹಿಂದಿನ ಬಾಗಲಲ್ಲೇ ಜೋತು ಬಿದ್ದಿದ್ದೆ.. ನನಗೆ ಗೊತ್ತು.. ಅದು ನಿನ್ನ ಗುಣ ಅಲ್ಲ ಅಂತ.. ದಿನವೂ ನನಗಾಗಿ ಸೀಟು ಹಿಡಿದಿಡುತ್ತಿದ್ದ ನೀನು, ಯಾರೇನೇ ಅಂದರೂ ತಲೆಕೆಡಿಸಿಕೊಳ್ಳದೆ ಸದಾ ವಟಗುಡುತ್ತಾ ತಲೆತಿನ್ನುವ ನೀನು ನನ್ನ ಕಾಡಬೇಕೆಂದೇ ಹಾಗೆ ಮಾಡಿದೆಯಲ್ಲಾ.. ಯಾಕೋ ಪ್ರಾರಂಭದಲ್ಲಿ ನಾನ್ಯಾಕ ಮಾತಾಡಿಸಲಿ ಎಂಬ ಅಪ್ರಬುದ್ಧ ಪ್ರೇಮದ ಹಟ ಮನಸ್ಸಿಗೆ ಬಂದು ನಾನೂ ಸುಮ್ಮನಿದ್ದೆ.. ಆ ಎರಡು ದಿನಗಳಲ್ಲಿ ಮಾತು ಕತೆಯೇ ಇರಲಿಲ್ಲ..
ಗೆಳತೀ.. ಪ್ರಕೃತಿಯಲ್ಲಿ ಮೌನ ಮಾತಾಡುತ್ತದೆ ಅನ್ನೋದು ನಿಜ ಅನಿಸಿದ್ದು ಆ ಎರಡು ದಿನ... ನಿತ್ಯವೂ ಅವಧಾನೀ ಮಾಸ್ತರರ ಕನ್ನಡ ಕ್ಲಾಸಿಗೆ ಬಂಕ್ ಹೊಡೆಯುತ್ತಿದ್ದ 'ನಾವು' ಅಂದು ಕೇವಲ 'ನಾನಾ'ದಾಗ ನನಗೆ ಸ್ವಲ್ಪ ಕಷ್ಟ ಅನಿಸಿತ್ತು.. ನಿನಗೂ ಹಾಗೇ ಅನಿಸಿರಬೇಕು.. ಜೊತೆಗೆ ಅವರ ಪಾಠ ಕೇಳಲು ಕೂಡಾ..!! ನನಗೆ ಆ ದಿನಗಳಲ್ಲಿ ಹೆಚ್ಚು ಕೇಳಿಸುತ್ತಿದ್ದುದು ನೀನು ತೇರಿಗೆ ಹೋದಾಗ ತಂದ ಬಿಳೀ ಬಣ್ಣದ ಕಿವಿಯೋಲೆಗಳ ಸದ್ದು.. ನಿನ್ನ ಬೆಳ್ಳಿ ಗೆಜ್ಜೆಯ ಝಣ ಝಣ ಸದ್ದು ಮಾತ್ರ.. ಆದರೆ ಅವೇ ಎಲ್ಲಾ ಮಾತಾಡಿದ್ದವು.. ನಾವು ಮತ್ತೆ ಮೊದಲಿನಂತೆ ಮಾತು ಪ್ರಾರಂಭಿಸಿದಾಗಲೂ ನಮ್ಮಿಬ್ಬರಲ್ಲಿ ಹೇಳಿಕೊಳ್ಳಲು ಹೊಸವಿಷಯವೇನೂ ಇರಲಿಲ್ಲ.. ಮಾತಾಡದ ದಿನಗಳಲ್ಲಿ ವಿಶೇಷವೇನೂ ನಡೆದೇ ಇರಲಿಲ್ಲವೆಂಬಂತೆ ಮಾತು ಪ್ರಾರಂಭಿಸಿದ್ದೆವು.. ಅಂದರೆ ಆ ಎರಡೂ ದಿನ ನನ್ನೊಳಗೆ ನೀನು, ನಿನ್ನೊಳಗೆ ನಾನು ಮಾತಾಡಿಕೊಂಡಿದ್ದೆವಲ್ಲವೇನೇ..?
ಅಲ್ಲ! ಆ ದಿನ ನಾನು ನಿಮ್ಮನೆಗೆ ಬಂದಾಗ ಯಾಕೇ ಹೊರಗೇ ಬರಲಿಲ್ಲ ನೀನು..? ನಿನ್ನ 'ನೋಟ್ಸ್' ಬೇಕಾಗಿತ್ತು ಅಂತ ನಿಮ್ಮಮ್ಮನ ಜೊತೆ ಹೇಳಿದ್ದೇನೋ ನಿಜ. ಆದರೆ ನಿನಗೆ ಗೊತ್ತಿತ್ತು.. ನನಗೆ ಬೇಕಾಗಿದ್ದು ನಿನ್ನ 'ನೋಟ' ಎಂದು.. ಅದಕ್ಕೇ ಬರಲಿಲ್ಲಾ ಅಲ್ಲಾ? ನಿಮ್ಮಮ್ಮನೋ ಯಾರ್ಯಾರದ್ದೋ ಮನೆ ಸುದ್ದಿನೆಲ್ಲಾ ನನಗೆ ಹೇಳತೊಡಗಿದ್ದಳು.. ಶಾಂತ ರೀತಿಯಲ್ಲಿ ಅದನ್ನೆಲ್ಲಾ ಸಹಿಸಿಕೊಂಡೆ.. ಆದರೆ ನೀನು ಮಾಡಿದ್ದು ಅಂತ ನನಗೆ ಬೆಳಗ್ಗೆ ಕಲಸಿದ ಅವಲಕ್ಕಿ ಕೊಟ್ರಲ್ಲ.. ತಿಂದೆ ನೋಡು.. ನೀನು ಮಾಡಿದ್ದು ಅಂತಾ.. ಅದು ಚೆನ್ನಾಗಿರ್ಲಿಲ್ವೇ.. ಪ್ಲೀಸ್ ಮುಂದೆಂದೂ ನನಗೆ ಅವಲಕ್ಕಿ ಮಾತ್ರ ಮಾಡಿಕೊಡಬೇಡ..
ತಿಂಗಳುಗಳು ಕಳೆದರೂ ನಮಗೆ ದಿನವೂ ಹೊಸದಿತ್ತಲ್ಲಾ..? ಅದೊಂದು ರಾತ್ರಿ ನಕ್ಷತ್ರ ಎಣಿಸುತ್ತಾ, ಆಕಾಶದಲ್ಲಿ ಚಿತ್ತಾರ ಮೂಡಿಸುತ್ತಾ ನಾವಿಬ್ಬರೂ ಲಾಂಗ್ ವಾಕ್ ಅಂತ ಹೋಗಿದ್ವಿ.. ಅದೇ ನೀನು ಬಿಳೀ ಬಣ್ಣದ ಲಂಗದಲ್ಲಿ ಬಂದಿದ್ದೆಯಲ್ಲಾ.. ನಾನು ಅದೇ ಹವಾಯಿ ಚಪ್ಪಲಿಯಲ್ಲಿ.. ಅದಕ್ಕೇ ಅಲ್ವೇ ನಿನ್ನಿಂದ ಬೈಸಿಕೊಂಡಿದ್ದು.. 'ಟೇಸ್ ಇಲ್ಲಾ' ಅಂತ.. ಟೇಸ್ಟ್ ಇದ್ದುದ್ದಕ್ಕೇ ನಿನ್ನನ್ನು ಹುಡೂಕಿದ್ದು ಹುಡುಗೀ... ಕತ್ತಲೆಯ ಕರೀ ಆಕಾಶದಲ್ಲಿನ ಮಿನುಗು ನಕ್ಷತ್ರಗಳಿಗಿಂತ ಬಿಳೀ ಮುಖದಲ್ಲಿನ ನಿನ್ನ ಕಣ್ಣುಗಳಿಗೇ ಹೆಚ್ಚು ಹೊಳಪಿತ್ತು. ಮಾತಾಡ್ತಾ ಮಾತಾಡ್ತಾ ನಿನ್ನ ಕೈ ಹಿಡಿದುಬಿಟ್ಟೆ.. ನೀನೇಕೆ ಹಾಗೆ ಗುರಾಯಿಸಿದ್ದು..? ರಸ್ತೆಯಲ್ಲಿ ಯಾವುದೋ ವಾಹನವೊಂದು ಬಂದು ನಮ್ಮ ಮೇಲೆ ಬೆಳಕು ಚೆಲ್ಲದಿದ್ದರೆ, ನಾ ನಿನ್ನ ಕೈಬಿಡದಿದ್ದರೆ ನೀನು ಹೊಡೆದೇ ಬಿಡುತ್ತಿದ್ದೆಯೋ ಏನೋ? ಸ್ವಲ್ಪ ದೂರದವರೆಗೂ ಮೌನ ಕತ್ತಲೆಯಷ್ಟೇ ಗಂಭೀರವಾಗಿತ್ತು.. ನಿಮ್ಮನೆ ಕಡೆ ತಿರುಗುವಾಗ ನೀನು ಕಣ್ಣಲ್ಲೇ 'ಪುಕ್ಕಲ' ಎಂಬಂತೆ ನನ್ನ ನೋಡಿ, ಕೆನ್ನೆ ಸವರಿ ಹೋಗುವಾಗ ಸಮಾಧಾನಟ್ವಾಯಿತು.. ಆದರೆ ಧೈರ್ಯ ಬರಲಿಲ್ಲ..
ಭಾನುವಾರವೂ ಸ್ಪೆಶಲ್ ಕ್ಲಾಸಿದೆ ಅಣ್ತ ಮನೆಯಿಂದ ಬಂದು ನಾವಿಬ್ಬರೂ ಅಪ್ಸರಕೊಂಡಕ್ಕೆ ಹೋಗಿದ್ದೆವಲ್ಲಾ.. ಬೆಳಗ್ಗೆಯಿಂದ ಸಂಜೆಯವರೆಗೂ ಬಂಡೇ ಮೇಲೆ, ಮರಳಿನಲ್ಲಿ ಕಾಲು ಚಾಚಿ, ಮತ್ತೆ ಬಂಡೆ ಮೇಲೆ ಸಮುದ್ರಮುಖಿಗಳಾಗಿ ಸುಮ್ಮನೆ ಕುಳಿತೇ ಇದ್ದೆವು.. ಸುಮ್ಮನೆ ನೀನು ನನ್ನ ಹೆಸರನ್ನು ಆಗಾಗ ಕರೆಯುತ್ತಿದ್ದೆ.. ಮತ್ತೆ ಪುನಃ ಮೌನ.. ಆ ಮೌನ ಅದೆಷ್ಟು ಸುಂದರ ... ಯಾವ ವಿಚಾರವನ್ನೂ 'ಹೀಗೆ ಇದು' ಅಂತ ಹೇಳದೆ ಎಲ್ಲಾ ವಿಷಯವನ್ನು ಹೇಳುತ್ತಾ, ಮನಸ್ಸಿಗೆ ಬೇಕಾದದ್ದನ್ನು ಅಂದುಕೊಳ್ಳಲು ಎಡೆಮಾಡಿಕೊಡುವ ಸುಮಧುರ ಭಾವ.. ಅದೇ ಮೌನದಲ್ಲಿ ಸಂಜೆಯಾಗಿತ್ತು..
ಸೂರ್ಯ ಕೆಂಪಗಾಗುತ್ತಿರುವ ನಿನ್ನ ಕಣ್ಣಲ್ಲಿ ನೀರು ಕಂಡಂತಾದರೂ, ಒಪ್ಪಿಕೊಳ್ಳಲು ಮನಸಾಗಲಿಲ್ಲ.. ಅದು ನನಗೆ ಸಮುದ್ರಕ್ಕೆ ಸವಾಲೆಸೆದು ಕಣ್ಣಲ್ಲೇ ನುಂಗಿದ ನಿನ್ನ ಕಣ್ಣಿನ ನೀರಂತೆಯೂ, ಮುಳುಗುವ ಸೂರ್ಯನ ನೋಡಿ ಮುಂಬರುವ ಕತ್ತಲೆಯ ಭಯದ ಕಣ್ಣೀರಂತೆಯೂ, ಕಡಲ್ಗಾಳಿ ತಂದ ಉಸುಕಿನ ಕಣಗಳು ಕಣ್ಣೀಗೆ ಬಿದ್ದು ಬಂದ ನೀರಂತೆಯೂ ಕಾಣಿಸಿತ್ತು... ಕಾರಣ ಕೇಳಲು ಮನಸಾಗಲಿಲ್ಲ.. ಆ ಸುಂದರ ಮೌನವನ್ನು ನಾ ಪ್ರೀತಿಸುತ್ತೇನೆ ಗೆಳತೀ.. ಅದನ್ನು ಹಾಳುಮಾಡಲು ಇಷ್ಟವಿರಲಿಲ್ಲ.. ಒಮ್ಮೆಗೇ ಹತ್ತಿರ ಬಂದು ಗಟ್ಟಿಯಾಗಿ ಅಪ್ಪಿಕೊಂಡು 'ನೀನಂಗೆ ಬೇಕು' ಅಂತ ಅತ್ತಾಗ ಏನು ಮಾಡಬೇಕೆಂಬುದೇ ಅರ್ಥವಾಗಲಿಲ್ಲ.. ಸುಮ್ಮನೇ ಇದ್ದೆ.. ಅಂತಹ ಮೌನವನ್ನು ನಾನು ಪ್ರೀತಿಸುತ್ತೇನೆ ಗೆಳತೀ...
ಅಪ್ಸರಕೊಂಡಕ್ಕೆ ಹೊರಡುವಾಗಲೇ ಹೇಳಿದ್ದೆ.. ನೀರು ಬಾಟಲಿ ತರಬೇಕು ಅಂತ.. ಸುಮ್ಮನೆ ಅಪ್ಸರೆಯಂತೆ ರೆಡಿಯಾಗಿ ಬಂದು ಬಿಟ್ಟೆಯಲ್ಲಾ ನೀನು.. ಅದಕ್ಕೇ ನಿನ್ನನ್ನು 'ಸು' ಎಂದು ಕರೆಯುವುದು ನಾನು.. ಆ ಸುಡು ಬಿಸಿಲಿನಲ್ಲಿ ಯಾರದ್ದೋ ಮನೆಬಾಗಿಲಲ್ಲಿ ನಿಂತು ತಂದ ನೀರನ್ನೂ , ಕಾಮತ ಹೋಟಲಿನ ಇಡ್ಲಿಯನ್ನೂ ಮರಳಿ ಬರುವಾಗ ಟೆಂಪೋದಲ್ಲಿ ನೀನು ವಾಂತಿ ಮಾಡಿಕೊಳ್ಳುತ್ತಿರುವಾಗ ನೀರು ತರಲು ಪಟ್ಟ ಕಷ್ಟಗಳೆಲ್ಲಾ ವ್ಯರ್ಥ ಅನಿಸಿತು.. ಎಲ್ಲಾ ಜನ ಮೊದಲ ಬಾರಿಗೆ ವಾಂತಿ ಮಾಡಿದೊಬ್ಬರನ್ನು ನೋಡುತ್ತಿರುವಂತೆ ನಮ್ಮನ್ನು ನೋಡುತ್ತಿರುವಾಗ 'ನಾನೇನು ಮಾಡ್ಲಿಲ್ಲ' ಅಂದು ಬಿಟ್ಟೆ.. ಆಗ ನೀ ಮತ್ತೆ ಅದೇ ತರ ಗುರಾಯಿಸಿದೆ.. ನನಗರ್ಥವಾಗಿ ಬಾಯಿ ಮುಚ್ಕೊಂಡೆ..
ಚಳಿಗಾಲದ ಆರಂಭದ ದಿನಗಳಲ್ಲಿ ನೀನು ಹೇಳಿದೆ ಅಂತ ನಾನೊಂದು ಉದ್ದ ಕೈಯಿರುವ ಸ್ವೆಟರಿನಂತಹ ನೀಲಿ ಬಣ್ಣದ ಅಂಗಿ ಕೊಂಡಿದ್ದೆನಲ್ಲ.. ಅದರಲ್ಲಿ ನೀನು ಕಸೂತಿ ಮಾಡ್ತೀನಿ ಅಂತ ತೆಗೆದುಕೊಂಡು ಹೋಗಿ ತೂತು ಮಾಡಿ ತಂದು ಕೊಟ್ಟೆಯಲ್ಲಾ.. ಅದು ಹಾಗೇ ಇದೆ... ಅಂಗಿಯೂ ರಂಧ್ರವೂ.. ನಾನೇ ಅದನ್ನು ತೊಳೆಯುತ್ತೇನೆ.. ದಿನವೂ ಹಾಕಿಕೊಂಡೇ ಮಲಗುತ್ತೇನೆ.. ಚಳಿಗಾಳಿ ರಂಧ್ರದಲ್ಲಿ ತೂರಿಬಂದು ನನ್ನ ಎದೆಯನ್ನು ಪ್ರತಿದಿನವೂ ಕೊರೆಯುತ್ತದೆ.. ಆಗೆಲ್ಲಾ ನಿನ್ನ ನೆನಪಾಗಿ ಸ್ವಲ್ಪ ಬೆಚ್ಚಗಾಗುತ್ತೇನಷ್ಟೇ...
ನೋಡು ಅದಾಗಲೇ ಒಂದು ವರ್ಷ ಕಳೆದಿದೆ.. ನಭೋಮಂದಲದಲ್ಲಿ ಗ್ರಹಗಳು ದಿಕ್ಕು ಬದಲಿಸುವ ಸಂಕ್ರಾಂತಿಯಂದು ನನ್ನ ದಿಕ್ಕು ಬದಲಿಸಿದ ನೀನು ಇಂದು ಇಲ್ಲಿಗೆ ತಂದು ನಿಲ್ಲಿಸಿರುವೆ.. ಈ ವರ್ಷವೂ ನೀನು ತರುವ ಹೊಸ ಎಳ್ಳು ಬೆಲ್ಲಕ್ಕಾಗಿ, ನಿನ್ನ ತೇರಿನ ಕಿವಿಯೋಲೆಗಳ ಸದ್ದಿಗಾಗಿ, ನೀನು ಹೊಸರೀತಿಯಲ್ಲಿ ಕಲಸುವ ಅದೇ ಅವಲಕ್ಕಿಗಾಗಿ, ಹೊಸ ಅಂಗಿಯೊಂದರಲ್ಲಿ ಮಾಡುವ ತಂಪಿನ ರಂಧ್ರಕ್ಕಾಗಿ, ಅಪ್ಸರಕೊಂಡದ ಆ ಅಪ್ಸರೆಗಾಗಿ ಕಾಯುತ್ತಿರುವ
ನಿನ್ನ
ಕಾಯ...
ವಿನಾಕಾರಣ
[ ಪ್ರಜಾವಾಣಿ ಪ್ರೇಮ ಪತ್ರ ಸ್ಪರ್ಧೆಗೆ ಕಳುಹಿಸಿದ ಪತ್ರ.. ಕೇಳದೇ ಹಾಕಿದ ಚಿತ್ರಗಳು ವೆಂಕಟುವಿದು ]
ನೋಡು, ಕೇವಲ ಮೂರನೇ ಪತ್ರದ ಹೊತ್ತಿಗೇ ನಾನು ಸಂಬೋಧನಾ ರಹಿತವಾಗಿ ಬರೆಯುವ ಸ್ಥಿತಿಗೆ ಬರುವಷ್ಟು ಬದಲಾಗಿಬಿಟ್ಟಿದ್ದೇನೆ. ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದೇನೆ. ಘೋರ ಕತ್ತಲೆಯೇನೂ ಇಲ್ಲ. ಬಸ್ಸಿನ ಒಳಗೆ ನೀಲಿ ಬೆಳಕು ಮಾತ್ರ ಇದೆ. ಗಾಳಿಗೆ ಪರದೆಗಳು ರಪರಪ ಬಡಿದುಕೊಳ್ಳುತ್ತವೆ. ರೊಯ್ಯೋಂ ಎಂದು ಕೂಗುತ್ತಾ ಬಸ್ಸು ಘಟ್ಟಗಳಲ್ಲಿ ತಿರುಗಿ ಮುರುಗಿ ಹೊರಳುವಾಗ ಮಾತ್ರ ಚಂದ್ರ ಕಿಟಕಿಯಲ್ಲಿ ಇಣುಕಿದಂತೆ ಕಾಣುತ್ತದೆ. ಯಾರಿದ್ದೀರಿ ಅಲ್ಲಿ ಎಂದು ಕಣ್ಣು ಹೊರಳಿಸುವಷ್ಟರಲ್ಲಿ ಮತ್ತೆ ಕಾಣಿಸುವುದೇ ಇಲ್ಲ. ಈಗ ನನ್ನ ಬಳಿ ನೀನಿರಬೇಕಿತ್ತು ನೋಡು. ನಾ ನಿನಗೆ ಈ ಮಾಯಾಚಂದ್ರನನ್ನು ತೋರಿಸುತ್ತಿದ್ದೆ. ಆ ಬೆಳಕಲ್ಲಿ ನಿನ್ನ ಮುಖ ಹುಡುಕುತ್ತಿದ್ದೆ. ಆ ಕಣ್ಣುಗಳಲ್ಲಿ ಮಿಂಚುವ ನಕ್ಷತ್ರದ ಬೆಳಕನ್ನು ಚಂದ್ರನಿಗೆ ತೋರಿಸಿ ನೀವಾಳಿಸುಸುತ್ತಿದ್ದೆ ಆ ಚಂದ್ರನನ್ನ.
ನೋಡಿದೆಯಾ.. ನಾನು ಈಗ ನಿನ್ನ ಹಾಗೆ ನಕ್ಷತ್ರವನ್ನು ಹುಡುಕುತ್ತಿದ್ದೇನೆ.. ನೆನಪಿರಬೇಕು. ನಾನು ಚಂದ್ರನ ಬಗ್ಗೆ ಮಾತಾಡಿದಾಗೆಲ್ಲಾ ನೀನು ನಕ್ಷತ್ರಗಳನ್ನೇ ಹೊಗಳುತ್ತಿದ್ದೆ. ಆಗೆಲ್ಲಾ ನನಗೆ ನಕ್ಷತ್ರಗಳು ಅಷ್ಟೆಲ್ಲಾ ಹಿಡಿಸುತ್ತಿರಲಿಲ್ಲ. ನನಗೆ ಚಂದ್ರ ನಿರಂತರ.. ನಿನಗೆ ನಕ್ಷತ್ರ ನಿಶ್ಚಲ. ನನಗೆ ಚಂದ್ರ ತಂಪು. ನಿನಗೆ ನಕ್ಷತ್ರ ಸ್ವಯಂಪ್ರಭೆ. ನಾನು ಚಂದ್ರನ ಬೆಳಕಲ್ಲಿ ನಿನ್ನ ಮುಖ ನೋಡಬಯಸಿದರೆ, ನೀನು ನನ್ನ ಕಣ್ಣಲ್ಲಿ ನಕ್ಷತ್ರವನ್ನ ನೋಡುತ್ತಿದ್ದೆ. ಚಂದ್ರ ಜಂಗಮ ನನಗೆ. ನಕ್ಷತ್ರ ಸ್ಥಾವರ ನಿನಗೆ. ಆದರೆ ಈಗಷ್ಟೇ ನನಗೂ ನಿನ್ನ ಕಣ್ಣುಗಳಲ್ಲಿ ನಕ್ಷತ್ರಗಳನ್ನು ತೋರಿಸಿ ಚಂದ್ರನಿಗೆ ಸವಾಲಾಗಬೇಕೆನ್ನಿಸಿತಲ್ಲ.. ನೋಡು ನಾನು ಬದಲಾಗುತ್ತಿದ್ದೇನೆ ಅಲ್ವೇ?
ಮೊನ್ನೆ ಮನೆ ರಿಪೇರಿಗೆಂದು ಆಚಾರಿ ಬಂದಿದ್ದ. ಅಮ್ಮನ ಹತ್ತಿರ ಜಗಳ ಮಾಡಿ ನನ್ನ ಕೋಣೆಯ ಮಾಡಿಗೆ ಒಂದು ದೊಡ್ಡ ಗಾಜನ್ನು ಹಾಕಿಸಿದ್ದೇನೆ. ’ ಅಯ್ಯೋ ಮಂಗ ಬಂದರೆ ಒಂದೇ ಸಲಕ್ಕೆ ಪಡ್ಚ.. ಈ ಕೋಣೆಗೊಂದು ಲಕ್ಷಣವೇ ಇಲ್ಲ’ ಅಂತೆಲ್ಲ ಅಮ್ಮ ಬಯ್ಯುತ್ತಿದ್ದರೂ ನನ್ನ ಈ ಹಾಳು ಚಂದ್ರನ ಆಸೆಯಿಂದ ಕೋಣೆ ತುಂಬಾ ಬೆಳಕು ಬರುವಷ್ಟು, ಇಡೀ ಆಕಾಶ ಕಾಣುವಷ್ಟು , ಅಷ್ಟು ದೊಡ್ಡ ಗಾಜನ್ನು ಹಾಕಿಸಿದ್ದೇನೆ. ರಾತ್ರಿ ಈಗ ಮಲಗಿದಾಗ ಚಂದ್ರ ಕಾಣುತ್ತಾನೆ. ಅವನನ್ನು ನೋಡುತ್ತಲೇ ನಿದ್ರಿಸಲೆತ್ನಿಸುತ್ತೇನೆ. ಆದರೆ ಅವ ನಿಶ್ಚಲವಲ್ಲವಲ್ಲ. ರಾತ್ರಿಯಿಡೀ ತಿರುಗುತ್ತಾನೆ. ನಾನೇನು ಕಮ್ಮಿ..? ನಾನೂ ತಿರುಗುತ್ತೇನೆ. ಚಂದ್ರ ಚಲಿಸಿದಂತೆಲ್ಲಾ, ನಾನೂ ಹಾಸಿಗೆಯಲ್ಲಿ ಹೊರಳುತ್ತೇನೆ. ಹಾಸಿಗೆಯ ತುಂಬ ತಿರುಗುತ್ತೇನೆ. ಚಂದ್ರ ಯಾವಾಗಲೂ ಕಾಣುತ್ತಿರಬೇಕು. ಚಂದ್ರನ ನಿರಂತರವೂ ನನಗೆ ಸಾಪೇಕ್ಷವಾಗಬೇಕು. ಯಾವ ಚಂದ್ರನ ಚಲನೆ ನನ್ನನ್ನು ಕಾಡಿತ್ತೋ ಈಗ ಆ ಚಂದ್ರನನ್ನು ಹಿಡಿದು ನಿಶ್ಚಲವಾಗಿಸಲು ಹೊರಟಿರುವ ಹುಂಬ ನಾನು. ನಾನು ನಿನ್ನನ್ನು ಪ್ರಿತಿಸುತ್ತೇನೆ. ಅದಕ್ಕೇ.
ಈ ರೀತಿಯ ಎಲ್ಲಾ ವಿಚಾರಗಳಲ್ಲಿ ಯಾಕೋ ನಿನ್ನನ್ನು ಎಳೆದು ತರುತ್ತೇನೆ, ಇತ್ತೀಚಿಗೆ. ಆಗ ಒಂಥರಾ ಸಮಾಧಾನ. ನೀ ನನ್ನ ಜೊತೆಗಿದ್ದ ಭಾವ. ಈ ಭಾವ ನಿರಂತರವೋ ನಿಶ್ಚಲವೋ ಕಾಣೆ. ನಿಶ್ಚಲವೂ ನಿರಂತರದ ಹಾಗೆ, ನಿರಂತರವೂ ನಿಶ್ಚಲದ ಹಾಗೆ ಕಾಣಲು ಶುರುವಿಟ್ಟಿದೆ. ನೀ ಬಂದಾಗಿನಿಂದ ನನ್ನ ಚಂದ್ರನ ನಿರಂತರದ ಬದುಕು ನಿಶ್ಚಲವಾದಂತೆ, ನಿನ್ನ ನಕ್ಷತ್ರದ ನಿಶ್ಚಲದ ಬದುಕು ನಿರಂತರವಾದಂತೆ, ನಾನು ಹೊಸ ಬದುಕು ಬದುಕಿದಂತೆ ಬದುಕಿ ಪುಳಕಗೊಂಡಿದ್ದೇನೆ.
ಮರ್ತೇ ಹೋಯ್ತು ನೋಡು, ಈ ಭಾಷಣದ ಮಧ್ಯೆ..ಘಟ್ಟ ಮುಗಿದಿದೆ ಈಗ. ಬರೀ ಬಯಲು. ಚಂದ್ರನೂ ಕಾಣುತ್ತಿಲ್ಲ. ಬಸ್ಸೂ ಜಂಪಾಗುತ್ತಿಲ್ಲ. ಅಕ್ಷರಗಳು ಸುಧಾರಿಸುತ್ತಿವೆ. ಆ ಸಲದ ಪತ್ರದ ಕೊನೆ ಪ್ಯಾರದಲ್ಲಿ ನೀ ನನಗೊಂದು ಪ್ರಶ್ನೆ ಹಾಕಿದ್ದೆ.. ಸಂಬಂಧವೆಂದರೇನು ನಿನಗೆ? ಅಂತ. ನಿನಗೆ ಹಳೆಯ ಗಣಿತ ಪುಸ್ತಕದಲಿ ವೆನ್ ನಕ್ಷೆಗಳು ಅಂತ ಒಂದು ಬಂದಿತ್ತು ನೆನಪಿಸಿಕೋ. ಅವೇ ಸಂಬಂಧಗಳು. ಅಲ್ಲಿ ಒಂದು ದೊಡ್ಡ ಆಯತದ ಒಳಗೆ ವೃತ್ತಗಳನ್ನು ಬಿಡಿಸಿ ಅದನ್ನು ವಿಶ್ವಗಣ ಎಂದು ಬರೆಯುವುದಿಲ್ಲವೇ ಆ ವೃತ್ತಗಳೇ ನಾವು. ನಮ್ಮ ಸ್ವಾರ್ಥ ವರ್ತುಲಗಳು ಅವು. ನಾವು ನಮಗೋಸ್ಕರ ನಮಗಾಗಿ ಮಾಡಿಟ್ಟುಕೊಂಡ ಕುಳಿಗಳು. ನಮ್ಮದೇ ಆದ ನಾಯಿಮರಿ, ಹೂವಿನಗಿಡ, ಹಾಡು, ತಿಂಡಿ, ಕೆಲಸ, ರಸ್ತೆ, ಬಸ್ಸು, ಕಾರು, ಮನೆ, ಮಠ, ಬಯಲು, ದೇಶ ಹೀಗೆ ನಮ್ಮದು ಎಂಬುವುದೆಲ್ಲ ತುಂಬಿರುವ ಬಾವಿಗಳು ಅವು. ಈ ವಿಶ್ವಗಣದಲ್ಲಿ ನನ್ನದೊಂದು ಬಾವಿ ನಿನ್ನದೊಂದು ಬಾವಿ . ನನ್ನ ವರ್ತುಲದಲ್ಲಿ ನಿನ್ನ ಲೋಕದ ಹಲವು ಅಂಶಗಳಿಲ್ಲ. ನಿನ್ನ ವರ್ತುಲದಲ್ಲಿ ನನ್ನ ಲೋಕದ ಹಲವು ಅಂಶಗಳಿಲ್ಲ. ಅಥವಾ ಇರಬಹುದು. ಅದಲ್ಲ ಮುಖ್ಯ. ಈಗ ನನ್ನ ವರ್ತುಲದಲ್ಲಿ ನೀ ಸ್ವಲ್ಪ, ನಿನ್ನ ವರ್ತುಲದಲ್ಲಿ ನಾ ಸ್ವಲ್ಪ ಬರಬೇಕು.. ಇಲ್ಲದವುಗಳ ಬಗ್ಗೆ ಯೋಚಿಸದೇ ಇರುವುದರಲ್ಲಿ ನಿನ್ನದನ್ನು ನನ್ನದಾಗಿಸಿ, ನನ್ನದನ್ನು ನಿನ್ನದಾಗಿಸಿಕೊಳ್ಳುವುದೇ ಸಂಬಂಧ. ವರ್ತುಲಗಳು ಚೂರಾಗದಂತೆ, ಆ ವರ್ತುಲಗಳ ಅಸ್ತಿತ್ವಕ್ಕೆ ಧಕ್ಕೆ ಬರದಂತೆ, ಒಂದರಳೊಗೊಂದು ಸೇರಿ ದೊಡ್ದ ಪರಿಶಿಯ ಲೋಕ ಸೃಷ್ಟಿಯಾಗುತ್ತದಲ್ಲ.. ಅದೇ ಸಂಬಂಧ.. ನಕ್ಷತ್ರದ ಜೊತೆಗೆ ಚಂದ್ರನಿರುತ್ತಾನಲ್ಲ,, ಅದೇ ಸಂಬಂಧ. ಗಗನವೇ ಸಂಬಂಧ. ಅದು ಸಂಯೋಗಗಣ, ವಿಶ್ವಗಣ.
ಬಯಲೂ ಮುಗಿಯಿತು...!! ಸಣ್ಣಗೆ ಮಳೆ ಬರುತ್ತಿರಬೇಕು. ಈ ಹಾಳು ಬಸ್ಸಿನ ಅವಾಜಿನಲ್ಲಿ ಏನೂ ಗೊತ್ತಾಗುತ್ತಿಲ್ಲ. ಈ ಪತ್ರ ಸಿಕ್ಕಿದ ಕೂಡಲೇ ಉತ್ತರ ಬರೆದುಬಿಡಬೇಡ ಮತ್ತೆ. ಕಾಯಿಸು. ಆ ಕಾಯುವುದರಲ್ಲಿ ಹಿತವಿದೆ. ಇನ್ನೂ ಒಂದು ತಿಂಗಳಾದರೂ ಏನೂ ಬರೆಯದಿರು. ಆ ಮೌನದಲ್ಲಿ ಮಜವಿದೆ. ಇಳಯರಾಜನ ಸಂಗೀತದ ಮಧ್ಯೆ ನಮ್ಮ ಬಾಲಸುಬ್ರಹ್ಮಣ್ಯಂ ಹಾಡುತ್ತಾ ಹಾಡುತ್ತಾ ಹಾಡಿನ ನಡುವೆಯೇ ನಗುತ್ತಾನಲ್ಲ..ಹಾಗಾಗಬೇಕು ನಿನ್ನ ಪತ್ರಗಳು. ಸಂಜೀವ ಅಭಯಂಕರರ ಚೀಜು ಮುಗಿದಮೇಲೆ ಶುರುವಾಗುವ ತರನಾದಂತಿರಬೇಕು. ಕಾಯ್ಕಿಣಿ ಸೄಷ್ಟಿಸಿದ ಅಸಾವರಿ ಲೋಖಂಡೆಯಂತೆ ಕಾಡಬೇಕು ನಿನ್ನ ಪತ್ರಗಳು.
ಹೋದ ಶನಿವಾರ ಬಿ.ಬಿ.ಸಿ ಯಲ್ಲಿ ಬರುವ ಶೆರ್ಲಾಕ್ ಹೋಮ್ಸ್ ನೋಡುತ್ತಿದ್ದೆ. ಎಂಥಾ ಅದ್ಭುತ ಮನುಷ್ಯ ಮಾರಾಯ್ತಿ ಅಂವ. ಎಲ್ಲವುದಕ್ಕೂ ಎನೋ ಒಂದನ್ನು ಗುಣಿಸಿ, ಭಾಗಿಸಿ, ಮಣಿಸಿ, ತಾಳೆ ಹಾಕಿ ಏನನ್ನೋ ಹುಡುಕಿ ತೆಗೆದುಬಿಡುತ್ತಾನೆ. ಅವನ ಪ್ರತಿ ಹೆಜ್ಜೆಗೆ ಒಂಥರಾ ಲಿಂಕ್ ಇರುತ್ತದೆ. ಆಧಾರವಿರುತ್ತದೆ. ಎಲ್ಲಾ ಮುಗಿದಮೇಲೆ ಕಾರಣ ಕೊಡುತ್ತಾನೆ ಆತ. ಯಾಕೆ ಹೀಗೆ ಅಂತ. ನಾನೂ ಯೋಚನೆ ಮಾಡಿದೆ, ಈ ಪ್ರೀತಿ ಶೆರ್ಲಾಕ್ ಹೋಮ್ಸ್ ತರ ಅಲ್ಲ , ಹಾಗೆಲ್ಲ ಆಧಾರ ಸಹಿತ ವಿವರಿಸುವುದಕ್ಕಾಗುವುದಿಲ್ಲ. ಅದು ವಿನಾಕಾರಣ ಮತ್ತು ಅದರಷ್ಟಕ್ಕದೇ ಚಂದ.
ಹಾರುವ ಬೇರುಗಳು - ಮೂರು : ಒಂದೇ ಗೂಗಲ್ಲಿಗೆ ಎರಡು ಹಕ್ಕಿ - ಎರಡನೇ ದಿನದ ಉದ್ಯಾನ ಪ್ರಸಂಗ
ಬಿಳಿಯ ಚಾದರದ ಬಿಳಿಯ ಹಾಸಿನ ಆ ಸುಪ್ಪತ್ತಿಗೆಯಿಂದ ಎದ್ದು ಕಣ್ಣುಬಿಡುವಷ್ಟರಲ್ಲಿ ಬೆಳಿಗ್ಗೆ ೯ ಗಂಟೆ. ಮೊದಲ ಸಲದ ಯುರೋಪಿನ ಸೂರ್ಯನ ದರ್ಶನ ಕಿಟಕಿಯ ಪರದೆ ಸರಿಸಿದಾಗ ಆಯಿತು. ಅದೇ ಬೆಳಕು, ಅದೇ ಸೂರ್ಯ, ಆದರೆ ಆಗಸದ ನೀಲಿ ಮಾತ್ರ ನಿಚ್ಚಳವಾಗಿತ್ತು. ಶುಭ್ರತೆ ಎದ್ದು ಕಾಣುತ್ತಿತ್ತು. ಜರ್ಮನಿಯ ಆಕಾಶವೆಲ್ಲಾ ಅದೇ ತರಹ ಇರಬೇಕು. ನಾನೇಳುವ ಮೊದಲೇ ಎದ್ದು ಕೂತ ಉಳಿದವರಲ್ಲಿ ಒಬ್ಬ ಏರ್ಪೋರ್ಟಿಗೆ ಯಾರನ್ನೋ ಬಿಟ್ಟುಬರಲು ಹೋಗಿದ್ದ. ಇನ್ನಿಬ್ಬರು ಹಾಸಿಗೆಯ ಮೇಲೆ ಕುಳಿತು ಬ್ರೆಡ್ಡಿಗೆ ಜಾಮ್ ಮೆತ್ತುತ್ತಿದ್ದರು. ಬಹುಶಃ ವಿದೇಶದಲ್ಲಿರುವವರಿಗೆ ಸ್ವದೇಶಿಗಳು ಬಹುಬೇಗ ಹೊಂದಿಕೊಂಡುಬಿಡುತ್ತಾರೆ ಅನಿಸುತ್ತದೆ. ಯಾವುದೇ ಮುಲಾಜಿಲ್ಲದೇ ಅವರ ಬ್ರೆಡ್ಡಿಗೆ ಕೈ ಹಾಕುವ ಧೈರ್ಯ ನನಗೆ ಅದಾಗಲೇ ಬಂದಿತ್ತು. ತಿಂದೆ.. ಸಪ್ಪೆಯಿದ್ದರೂ ಆಗ ಅದು ರುಚಿ. ತಿಂದು ಕೈತೊಳೆದು, ಬೆಳಗಿನ ಔಪಚಾರಿಕ ಕಾರ್ಯಗಳನ್ನೆಲ್ಲಾ ಮುಗಿಸಿ ಟಿ ವಿ ನೋಡಲು ಕೂತದ್ದಾಯಿತು. ಆ ಟಿ.ವಿಯಲ್ಲೋ ಜರ್ಮನ್ ಭಾಷೆಯ ಚಾನೆಲ್ಲುಗಳನ್ನು ಬಿಟ್ಟರೆ ಬೇರೆ ಬರುವುದು ಎಂದರೆ ನ್ಯೂಸ್ ಚಾನೆಲ್ಲೊಂದೆ. ಏನೋ ಒಂದು ಎಂದು ನೋಡುತ್ತಾ ಕುಳಿತರೆ, ಚರ್ಚೆ ನಿನ್ನೆ ನೋಡಬೇಕೆಂದ ಸಿನಿಮಾದ ಬಗ್ಗೆ ತಿರುಗಿತು.
ಭಾರತದ ದಕ್ಷಿಣದಿಂದ ತೇಲಿ ಯುರೋಪಿನ ಮಧ್ಯದ ಆ ಜರ್ಮನಿಯ ಸ್ಟುಟ್ಗಾರ್ಟಿನಲ್ಲಿ ಬಂದಿಳಿದ ಗಲಾಟೆ ಮತ್ತು ಬೋಪ್ಸರದ ಆ ಚಹದಂಗಡಿಯ ಯಾನದಿಂದ ಬಳಲಿದ್ದ, ನಾನು ನಿನ್ನೆ ರಾತ್ರಿ ಹಾಸಿಗೆ ಸಿಕ್ಕ ಕೂಡಲೇ ಮಲಗಲು ಸಿದ್ಧವಿದ್ದರೂ ಉಳಿದವರೆಲ್ಲಾ ’ಈಗ ಒಂದು ಮೂವಿ ನೋಡುವ’ ಎಂಬ ನಿರ್ಧಾರ ಮಾಡಿದ್ದರು. ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಎಂದೆಲ್ಲಾ ಬದಬಡಿಸಿ ಕೊನೆಗೆ ಸರ್ವಾನುಮತದಿಂದ ಈ ಸಿನಿಮಾ ನಮ್ಮಿಂದ ನೋಡಿಸಿಕೊಳ್ಳಲು ಯೋಗ್ಯತೆ ಪಡೆದಿದೆ ಎಂದು ಆಯ್ಕೆ ಮಾಡಲಾಗಿತ್ತು. ಅತ್ತ ಅವರು ಸಿನಿಮಾ ಶುರು ಮಾಡಿದ ಮೇಲೆಯೇ ನಾನು ನಿದ್ದೆ ಮಾಡಿದ್ದು. ಆದರೆ ಬೆಳಿಗ್ಗೆ ಅದರ ಬಗ್ಗೆ ಪ್ರಶ್ನಿಸಿದಾಗಲೆ ಗೊತ್ತಾಗಿದ್ದು- ನನಗಿಂತ ಮೊದಲೇ ಟಿ ವಿ ಮುಂದೆಯೋ ನಿದ್ದೆ ಮಾಡಿದ್ದ ಕಥಾ ಪ್ರಸಂಗ. ನಾನು ಕೇಳಿದ ಪ್ರಶ್ನೆಯೋ ಅಥವಾ ಅರ್ಥವಾಗದ ಆ ಜರ್ಮನಿಯ ಟಿವಿ ಕಾರ್ಯಕ್ರಮಗಳೋ, ಅವರನ್ನು ಮತ್ತೆ ಮೂವಿ ಆರಂಭಿಸುವುದಕ್ಕೆ ಪ್ರೇರೇಪಿಸಿತು. ಅವರ ಜೊತೆಗೆ ನಾನೂ ಕೂತು ಸಿನಿಮಾದ ಒಳಗೆ ಕಣ್ಣಿಟ್ಟೆ.
ಸಿನಿಮಾ ಸ್ವಲ್ಪ ವಿಲಕ್ಷಣವಾಗಿತ್ತು. ಇಬ್ಬರು ಮಕ್ಕಳು ಸಣ್ಣವರಿದ್ದಾಗಲೇ ಹೇಗೋ ಒಂದು ದ್ವೀಪ ಸೇರುತ್ತಾರೆ. ಅವರದ್ದು ಏನೂ ಅರಿಯದ ವಯಸ್ಸು. ಜಗತ್ತಿನ ನೀತಿ ನಿಯಮಗಳು, ಓರೆ ಕೋರೆಗಳು ಯಾವುದೂ ಗೊತ್ತಿಲ್ಲದೇ ನೇರವಾಗಿ ಬೆಳೆಯುತ್ತಾರೆ. ಮಾನವ ಸಂಪರ್ಕವೇ ಇಲ್ಲದ ಅವರು ಎಲ್ಲವನ್ನೂ ಹೊಸದಾಗಿ ಕಂಡುಹಿಡಿಯುತ್ತಾ ತಮಗೆ ಬೇಕಾದ ಹಾಗೆ ವಿಕಾಸ ಹೊಂದುತ್ತಾರೆ. ಯೌವನದಲ್ಲಿ ಅವರ ದೈಹಿಕ ಬದಲಾವಣೆಗಳಿಗೆ ಅವರವರೇ ನಾಚಿಕೊಳ್ಳುತ್ತಾ ಹೊಸ ಜೀವ ಸೃಷ್ಟಿಗೂ ಕಾರಣವಾಗುತ್ತಾರೆ. ಅವರಲ್ಲಿರುವ ಭಯವೇ ಅವರಿಗೆ ದೇವರಾಗುತ್ತದೆ. ದಿನವೂ ಕಾಣುವ ಸೂರ್ಯನೇ ನೆರೆಮನೆಯವನಾಗುತ್ತಾನೆ. ಹರಿಯುವ ನದಿಯೇ ಗಡಿಯಾಗುತ್ತದೆ. ಅವರದ್ದೇ ಆದ ಜಗತ್ತು, ಅವರದ್ದೇ ಆದ ವಹಿವಾಟುಗಳನ್ನು ಸಹಜವಾಗಿಯೇ ಚಿತ್ರಿಸಿದ್ದರು ಸಿನಿಮಾದಲ್ಲಿ. ಕೊನೆಯಲ್ಲಿ ಮಗು ಏನೋ ವಿಷದ ಹಣ್ಣುಗಳನ್ನು ತಿಂದು, ಉಪಾಯವಿಲ್ಲದೇ ತಾವೂ ಅದನ್ನೇ ತಿಂದು ಸಾಯುವ ಕ್ಲೈಮಾಕ್ಸ್ ನಲ್ಲಿ ಹೊರಜಗತ್ತಿನ ಹಡಗೊಂದು ಅವರನ್ನು ಸಮೀಪಿಸುತ್ತದೆ. ಹೀಗೆ ಆಧುನಿಕ ಜಗತ್ತಿನಲ್ಲೊಂದು ಮಾನವ ವಿಕಾಸದ ಮತ್ತು ಅದೇ ಆಧುನಿಕ ಪ್ರಪಂಚದ ಅಂಚಿನಲ್ಲಿ ಅದರ ಅಳಿವನ್ನು ಚಿತ್ರಿಸುತ್ತಾ ಸಿನಿಮಾ ಕಥೆ ಸಾಗುತ್ತದೆ. ಸ್ವಲ್ಪಹಳೆಯ ಜಾಯಮಾನದ ಕಥೆಯಾದರೂ ಏನೋ ಒಂಟಿತನದ ಭಾವವನ್ನು ಮೂಡಿಸುತ್ತಾ ಸಿನಿಮಾ ಮುಗಿಯಿತು.
ಇದೇ ಸಮಯದಲ್ಲಿ ತರಕಾರಿಗಳು ಒಂದಾದ ಮೇಲೊಂದು ತಾವು ಮುಂದು ತಾವು ಮುಂದು ಎಂದುಕೊಂಡು ತಮ್ತಮ್ಮ ಮೈಗಳನ್ನು ಕುಯ್ಯಿಸಿಕೊಂಡಿದ್ದರು. ಮೂವಿ ಮುಗಿಯುತ್ತಿದ್ದಂತೇ ಅನ್ನಕ್ಕಿಟ್ಟು ಒಬ್ಬರಾದ ಮೇಲೆ ಒಬ್ಬರು ಸ್ನಾನ ಮಾಡುವುದೆಂದು ನಿಶ್ಚಯವಾಯಿತು. ಇದೇ ಸರಿಯಾದ ಸಮಯವೆಂದು ಕ್ಯಾಮರಾ ಹಿಡಿದು ಮೆಟ್ಟಿಲಿಳಿದು ಹೋದೆ. ಜಾಸ್ತಿ ಗೊತ್ತಿಲ್ಲದ ಊರು ಎಂಬ ಸಹಜ ಭಯದಿಂದ ಮನೆಯಿಂದ ಜಾಸ್ತಿ ದೂರ ಹೋಗದೆ ಅಲ್ಲಲ್ಲೇ ರಸ್ತೆ ಬಸ್ ಸ್ಟಾಂಡುಗಳನ್ನು ಸುತ್ತು ಹಾಕುತ್ತಾ ತಿರುಗಿದೆ. ಚರ್ಚಿನ ಎತ್ತರದ ಗೋಪುರದ ಮೇಲಿದ್ದ ಗಡಿಯಾರ ಮುಳ್ಳುಗಳನ್ನು ಯಾವುದೋ ಅಂಕೆಗಳ ಮಧ್ಯೆ ಇಟ್ಟು ಮುಂದೆ ಹೋಗುವುದನ್ನೇ ಕಾಯುತ್ತಿತ್ತು. ಎರಡು ರಸ್ತೆಗಳಾದ ಮೇಲೆ ಫೋಟೊಗಳೆಲ್ಲಾ ಒಂದೇ ತರಹ ಕಾಣ ತೊಡಗಿದವು. ಖರೇ ಹೇಳ ಬೇಕೆಂದರೆ ಜರ್ಮನಿಯ ಕಟ್ಟಡಗಳೆಲ್ಲಾ ಒಂದೇ ತರಹ. ರಚನೆಯಾಗಲೀ ಇಕ್ಕೆಲಗಳಾಗಲೀ ತದ್ರೂಪಿಗಳಂತೆ ಸೃಷ್ಟಿಯಾಗಿದ್ದು. ಇದೂ ಒಂಥರಾ ಏಕತಾನತೆಗೆ ಕಾರಣವಾಗಿರಬಹುದು.
ಈ ಫೋಟೋ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ಮನೆಗೆ ಬಂದರೆ ಅನ್ನ ರೆಡಿಯಾಗಿತ್ತು. ಊಟ ಮಾಡಿ ಅದೂ ಇದು ಹರಟೆ ಹೊಡೆಯುತ್ತಾ ಕುಳಿತರೆ ಹೊರಗಿನ ಅಂಗಳದಲ್ಲಿ ವಿಚಿತ್ರವೊಂದು ಆಗ ತಾನೇ ಜನಿಸಿತ್ತು. ಯಾವನೋ ಒಬ್ಬ ಶಿಸ್ತಾಗಿ ಆರಾಮ ಖುರ್ಚಿ ಹಾಸಿಕೊಂಡು ಅಂಡರ್ವೇರ್ನಲ್ಲಿ ಕಣ್ಣಿಗೆ ಕರಿಗಾಜಿಟ್ಟುಕೊಂಡು ಮಲಗಿಬಿಟ್ಟಿದ್ದ. ಆ ಪರಿಯಲ್ಲಿ ತನ್ನ ಬೇಸಿಗೆಯನ್ನೂ, ಅದರಲ್ಲೂ ತನ್ನ ಭಾನುವಾರದ ರಜೆಯನ್ನು ಸಂಭ್ರಮಿಸುತ್ತಿದ್ದ. ಅವರವರ ಬಾಲ್ಕನಿಯಲ್ಲಿ ಪ್ರತಿ ವಾರ ಮಾಡುವ ಈ ಕಾರ್ಯವನ್ನು ಇವತ್ತು ಅಂಗಳಕ್ಕೆ ವರ್ಗಾಯಿಸಿದ್ದ ಅಷ್ಟೆ. ಈ ತರಹದ ವಿಚಿತ್ರಗಳನ್ನು ಇನ್ನೆರಡು ತಿಂಗಳುಗಳ ಕಾಲ ನೋಡುತ್ತಾ ಕಳೆಯುವುದಕ್ಕೆ ಇದನ್ನು ಪೂರ್ವಭಾವಿಯಾಗಿ ಸ್ವೀಕರಿಸುತ್ತಾ ಮತ್ತೆ ಟಿ.ವಿ. ನೋಡಿದಂತೆ ಮಾಡಿದೆವು. ಅದೇ ಜರ್ಮನಿಯ ಜಾಹೀರಾತುಗಳು ಅದೇ ಧ್ವನಿವಿನ್ಯಾಸದಲ್ಲಿ ಬರುತ್ತಿರಲು, ಬೋಪ್ಸರದ ಗುಡ್ಡದ ಮೇಲಿಂದ ಕಂಡ ಪಾರ್ಕೊಂದು ಜ್ಞಾಪಕಕ್ಕೆ ಬಂತು. ಬಂದದ್ದೇ ತಡ, ಅಲ್ಲಿಗೇ ಹೋಗೋಣ ಎಂಬ ಮಾತೂ ಜೊತೆಗೂಡಿತು. ಏನೋ ತೀರ್ಮಾನವಾಗುವ ಲಕ್ಷಣ ಗೋಚರಿಸುತ್ತಿದ್ದಂತೆ ನನಗೆ ನನ್ನ ಕ್ಯಾಮರಾದ ಬ್ಯಾಟರಿಯ ಮೇಲೆ ಅನುಮಾನ ಬಂತು. ಅದನ್ನು ಚಾರ್ಜಿಗಿಟ್ಟು ಅವರ ಅಥವಾ ನಮ್ಮ ಆ ಪಾರ್ಕು ಪ್ರಯಾಣದ ಚರ್ಚೆಗೆ ಕಿವಿಯಿಟ್ಟೆ. ಒಂದೇ ಗೂಗಲ್ಲಿಗೆ ಎರಡು ಹಕ್ಕಿ ಎಂಬ ಹೊಸ ಗಾದೆಯಂತೆ ಇಂಟರ್ನೆಟ್ ನಲ್ಲಿ ಆ ಪಾರ್ಕಿನ ಮಾಹಿತಿಯ ಜೊತೆಗೆ ಇಂದಿನ ವಿಶೇಷ ಎಂಬ ಮಾಹಿತಿಯೂ ಇತ್ತು. ಅದೇನೆಂದು ಒಳಹೊಕು ಜಾಲಾಡಲು, ಕಿಲ್ಸ್ ಬರ್ಗ್ ಎಂಬ ಆ ಜಾಗದಲ್ಲಿ ಸಂಸ್ಕೃತಿ ಉತ್ಸವವೊಂದು ನಡೆಯುತ್ತಿತ್ತು. ನಮಗೆ ಯಾವುದಾದರೇನಂತೆ ಎಂದು ಕಿಲ್ಸ್ ಬರ್ಗಿನ ಪಯಣಕ್ಕೆ ಅಡಿಯಿಟ್ಟೆವು.
ಅದು ಜಾತ್ರೆ ಹೌದೆಂದು ರೈಲಿನಲ್ಲಿನ ಸಂದಣಿಯೇ ಹೇಳುತ್ತಿತ್ತು. ಗೌಜಿ ಗದ್ದಲ, ಅವರ ವೇಷ ಭೂಷಣ ಇತ್ಯಾದಿಗಳು ಇದು ದಿನದ ವ್ಯವಹಾರವಲ್ಲ ಎಂದು ಅವರ ಜೊತೆಗೇ ಕೂಗುತ್ತಿತ್ತು. ಅವರಂತೆ ನಾವೂ ಆ ಕೂಗಿನಲ್ಲಿ ಒಂದಾದಗಲೇ, ಆ ಹಬ್ಬಕ್ಕೊಂದು ಕಳೆ ಬಂದಂತೆ ನಮಗೂ ಅನಿಸಿತ್ತು. ತಲೆಗೆ ಹಸಿರು ಬಣ್ಣ, ಹಳದಿ ಬಣ್ಣ, ಕೆಂಪು ಬಣ್ಣ ,ಜಗಮಗದ ಬಣ್ಣ ಹೀಗೆ ಎಲ್ಲವನ್ನೂ ಬಳಿದುಕೊಂಡು ಆ ಆರು ಗಂಟೆಯ ಹೊತ್ತಿಗೆ ಹಗಲು ವೇಷಗಳು ರೈಲು ನಿಲ್ದಾಣದಲ್ಲಿ ಓಡಾಡುತ್ತಿರಲು, ನೋಡುವ ನಮಗೆ ಮಜವೆನಿಸುತ್ತಿತ್ತು. ಕಿಲ್ಸ್ ಬರ್ಗಿನ ಆ ಪಾರ್ಕು ಬಹಳ ದೊಡ್ಡದಿರಬೇಕು. ರೈಲಿನಿಂದ ಇಳಿದ ಜನ ಲಗುಬಗೆಯಿಂದ ಹೆಜ್ಜೆ ಹಾಕಿ ಪಾರ್ಕಿನ ದೊಡ್ಡ ಕಮಾನಿಗೆ ಬರುವಷ್ಟರಲ್ಲಿ ಕರಗಿ ಹೋಗುತ್ತಿದ್ದರು. ಉತ್ಸವಕ್ಕೆ ತಯಾರಿಯಾಗಿ ಕೆಲವರು ಮೈಗೆಲ್ಲಾ ಪ್ಲಾಸ್ಟಿ ಸುತ್ತಿಕೊಂಡು ಕುಣಿಯುತ್ತಿದ್ದರೆ,ಇನ್ನೂ ಕೆಲವರು ಪತಾಕೆಗಳನ್ನು ಹಿಡಿದು ಓಡಾಡುತ್ತಿದ್ದರು. ಉಳಿದವರಲ್ಲಿ ಬಹುತೇಕರು ಕೇಕೆ ಹಾಕುತ್ತಾ ದಾರಿಯಲ್ಲಿ ಬಂದವರಿಗೆಲ್ಲಾ ಹಾಯಿಗಳನ್ನೂ ಬಾಯಿಗಳನ್ನೂ ಹೇಳುತ್ತಾ, ಆಗಾಗ ಕಿಲ ಕಿಲ ನಗುತ್ತಾ, ತಮ್ಮ ತಮ್ಮ ಮಕ್ಕಳನ್ನು ಹೊತ್ತ ತಳ್ಳುಗಾಡಿಯನ್ನು ತಳ್ಳುತ್ತಾ ಅವರದೇ ಆದ ಗುಂಗಿನಲ್ಲಿದ್ದರು.
ಹೀಗೆ ಜನಪ್ರವಾಹದೊಂದಿಗೆ ಬೆರೆತು ಸಾಗುತ್ತಿದ್ದ ನಮ್ಮ ಪಯಣ ಪಾರ್ಕಿನ ಗೇಟಿನ ಹತ್ತಿರ ಬರುತ್ತಿದ್ದಂತೆ ಗಕ್ಕನೆ ನಿಂತು ಬಿಟ್ಟಿತು. ಸೆಕ್ಯೂರಿಟಿ ಗಾರ್ಡುಗಳಂತೆ ವೇಷ ತೊಟ್ಟಿದ್ದ ದಾಂಡಿಗರು ಒಬ್ಬೊಬ್ಬರನ್ನೇ ಬಿಡುತ್ತಿದ್ದರು. ಯಾವಾಗಲೂ ಈ ತರಹದ ಕಟ್ಟಲೆಗಳಿಲ್ಲದ ಆ ಪಾರ್ಕಿಗೆ ಇವತ್ತೇನಿದು ಹೊಸ ಪದ್ಧತಿ ಎಂದು ನೋಡಲು, ಇವತ್ತಿನ ವಿಶೇಷ ಉತ್ಸವಕ್ಕೆ ಪ್ರವೇಶ ಶುಲ್ಕ ನಿಗದಿಯಾಗಿತ್ತು...!! ಸರಿ ಎಷ್ಟು ಎಂದು ಪಕ್ಕದ ಬೋರ್ಡ್ ನೋಡಿದರೆ ಒಬ್ಬೊಬ್ಬರಿಗೆ ಹದಿನಾರು ಯೂರೋಗಳು..!! ಭಾರತೀಯ ಮನಸ್ಸು ಹದಿನಾರನ್ನು ಅರವತ್ತರಿಂದ ಥಟ್ಟನೆ ಗುಣಿಸಿ ಬೋರ್ಡಿನಲ್ಲಿದ್ದ ಹದಿನಾರನ್ನು ಒಂಭೈನೂರಾ ಅರವತ್ತಾಗಿ ತೋರಿಸಿತು.. ಏನೋ ಉತ್ಸಾಹದಲ್ಲಿ ಮುನ್ನುಗುತ್ತಿದ್ದ ನಮ್ಮ ತಂಡಕ್ಕೆ ಈ ವಿಚಾರ ಸರಿಬರಲಿಲ್ಲ. ಕೇವಲ ಪಾರ್ಕ್ ನೋಡಲು ಇಷ್ಟು ಮೊತ್ತ ನೀಡಲು ಯಾರೂ ಸಿದ್ಧವಿರಲಿಲ್ಲ. ಸುಂದರವೆನಿಸಿದ್ದ ಪಾರ್ಕು ಒಂದು ಬೋರ್ಡಿನಿಂದಾಗಿ ಅಂದಗೆಟ್ಟಿತ್ತು. ಇಂಥಾ ಗಲಾಟೆ ಪಾರ್ಕಿಗೆ ಹದಿನಾರು ಯುರೋ ಯಾರೋ ಕೊಡ್ತಾರೆ ಅಂತ ವಾಪಾಸು ರೈಲ್ವೇ ಸ್ಟೇಷನ್ನಿಗೆ ಹೊರಟೆವು. ಇಂದಿನ ಪಯಣ ಹೀಗಾಯಿತಲ್ಲ, ಎಂದು ಯೋಚಿಸುವಷ್ಟರಲ್ಲೇ, ಇನ್ನೊಂದು ಪ್ಲಾನು ರೆಡಿಯಿತ್ತು..
ಕೊನೆಗೂ ಆ ದಿನ ಪಾರ್ಕಿಗೆ ಹೋದೆವು.
ಹಾರುವ ಬೇರುಗಳು : ಎರಡು- ಬೋಪ್ಸರದ ಚಹದಂಗಡಿ ಮತ್ತು ಧ್ಯಾನಸ್ಥ ನಗರ
ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟುಟ್ಗಾರ್ಟಿನ ಫುಟ್ಪಾತಿಗೆ ಹೊಂದಿಕೊಳ್ಳುತ್ತಾ ನಡೆಯತೊಡಗಿದೆ. ಸ್ವಚ್ಛ ರಸ್ತೆಯ ಮೇಲೆ ಓಡಾಡುವ ಅಷ್ಟೇ ಚೊಕ್ಕ ಟಯರಿನ ಕಾರುಗಳ ಮಧ್ಯೆ ಆಗಾಗ ಓಡಾಡುವ ದೊಡ್ಡ ಆವಾಜಿನ ಬೈಕುಗಳು, ಅವುಗಳ ವೇಗ ಭಯ ಹುಟ್ಟಿಸುವಂತಿದ್ದವು. ಪಾದ ಸಂಚಾರಿಗಳೂ ಅಷ್ಟೇ ಮಹತ್ವ ಕೊಟ್ಟು ರಚಿಸಿದ ಪುಟ್ಪಾತುಗಳು ಸೈಕಲ್ ಸವಾರರಿಗೂ ದಾರಿಯಾಗಿತ್ತು. ಶಿಸ್ತಿನ ಜನಕ್ಕೆ ಮಾಡಿಟ್ಟ ವ್ಯವಸ್ಥೆಗಳವು.
ರೈಲು ನಿಲ್ದಾಣಕ್ಕೆ ಹೋಗಿ ಕಂಬಕ್ಕೆ ಕಟ್ಟಿದ್ದ ಪುಟ್ತ ಯಂತ್ರದಿದ ಬಂದ ಎರಡೂವರೆ ಯೂರೋ ಟಿಕೆಟ್ ಹಿಡಿದು S6 ಅಂಕಿತದ ಉಗಿಬಂಡಿಗಾಗಿ ಕಾಯುತ್ತಾ ಕುಳಿತೆವು. ಕ್ಷಮಿಸಿ.. ಉಗಿಬಂಡಿಗಳಲ್ಲ ಅವು, ವಿದ್ಯುತ್ ವೇಗಿಗಳೆನ್ನಬಹುದು. ಸರಾಸರಿ ವೇಗವೇ ನಮ್ಮಲ್ಲಿನ ಗರಿಷ್ಠ ವೇಗಕ್ಕಿಂತ ಜಾಸ್ತಿ ಇರುವ ಉದ್ದುದ್ದದ ಜನವಾಹಿನಿಗಳು. ನಿಲ್ದಾಣ ಜರ್ಮನಿಗೆ ಹೇಳಿ ಮಾಡಿಸಿದ ಹಾಗೆ ಸುಸಜ್ಜಿತವಾಗಿತ್ತು. ಅದೊಂದು ಲೋಕಲ್ ನಿಲ್ದಾಣವಾಗಿದ್ದರೂ ಸಹ ಸರ್ವ ಮಾಹಿತಿಗಳೂ ಲಭ್ಯವಿದ್ದವು. ನಮಗೆ ಬೇಕಾದ ಟ್ರೈನಿನ ವಿವರಗಳು ನನ್ನ ಜೊತೆಗಾರರಿಗೇ ಜಾಸ್ತಿ ಗೊತ್ತಿದುದರಿಂದ ಅವುಗಳ ಬಗ್ಗೆ ವಿಚಾರವನ್ನೂ ಮಾಡದೆ ಕಾಯುತ್ತಿದ್ದೆ. ಏನು ಬೇಕು ಎಂದು ಗೊತ್ತಿಲ್ಲದೇ, ಆ ಗೊತ್ತಿಲ್ಲದ ಕಾರಣಕ್ಕಾಗಿ ಕಾಯುವುದೇ ಜೀವನವಿರಬೇಕು. ಬೋರ್ಡು ತೋರಿದ ಸಮಯಕ್ಕೆ ಆಚೀಚೆ ಆಗದಂತೆ ತನ್ನ ಸಮಯಕ್ಕೆ ಸರಿಯಾಗಿ ಕೆಂಪು ಬಣ್ಣದ ಟ್ರೈನೊಂದು ಹಾಜರಾಯಿತು. ತನ್ನಿಂದ ತಾನೇ ತೆರೆದುಕೊಂಡ ಬಾಗಿಲನ್ನು ಪ್ರವೇಶಿಸಿ ಬೋಗಿಯನ್ನು ಹೊಕ್ಕಾಗ ಮೊದಲ ಬಾರಿಗೆ ಜರ್ಮನಿಯ ಜನ ಗುಂಪಾಗಿ ಕಾಣಿಸಿಕೊಂಡರು. ಏರ್ಪೋರ್ಟಿನಲ್ಲಿ, ಹೋಟೆಲಿನಲ್ಲಿ ಜನರಿದ್ದರೂ ಗುಂಪಾಗಿರಲಿಲ್ಲ. ಆಗಾಗ ಅಲ್ಲಲ್ಲಿ ಕಾಣ ಸಿಗುವ ವಿರಳ ಮುಖಳೀಗ ಗುಂಪ್ನಲ್ಲಿ ಸಿಕ್ಕಾಗ ನಾವು ಬೇರೆ ಅಂತ ಅನಿಸದಿರಲಿಲ್ಲ.
ಅದು ಅವರಿಗನಿಸಿತೋ ಇಲ್ಲವೋ ಗೊತ್ತಿಲ್ಲ. ಯಾರಿಗೂ ಜಾಸ್ತಿ ಗಮನ ಕೊಡದ ಜೀವಿಗಳಂತಿದ್ದರು. ಅವರು, ಅವರವರ ಜೋಡಿಗಳು, ಅವರಿಳಿಯುವ ಜಾಗಗಳು.. ಹೀಗೆ ಅವರದ್ದೇ ಆದ ವರ್ತುಲದಲ್ಲಿ ಬದುಕುತ್ತಾರೆ ಅನಿಸಿತು. ನಾವೂ ಅವರಂತೆ ಅವರ ಬಗ್ಗೆ ಜಾಸ್ತಿ ಗಮನ ಕೊಡದಂತೆ ನಟಿಸಿದರೂ, ಆಗಾಗ ಅವರಿವರನ್ನು ಗಮನಿಸುತ್ತಿದ್ದೆವು. ಮುಂದಿನ ಎರಡೋ ಮೂರೋ ನಿಲ್ದಾಣಗಳು ದಾಟಿದ ನಂತರ ಮುಖ್ಯ ನಿಲ್ದಾಣವಂತೆ. ಅಲ್ಲಿಂದ ಇನ್ನೊಂದು ಟ್ರೈನು ಹಿಡಿದು ಇನ್ನೆರಡು ನಿಲ್ದಾಣ ಕಳೆದರೆ ಅಪಾರ್ಟ್ಮೆಂಟ್ ಸಿಗುತ್ತದೆಯಂತೆ. ಅಂದರೆ ನಮ್ಮ ಹೊಟೆಲಿಂದ ಈಗ ಹೊರಟಿರುವ ಜಾಗ ಐದಾರು ಸ್ಟೇಶನ್ ಗಳ ಅಂತರ. ಆದರೂ ಹತ್ತರಿಂದ ಹದಿನೈದು ನಿಮಿಷಗಳ ಒಳಗೆ ಅಪಾರ್ಟ್ಮೆಂಟಿನಲ್ಲಿದ್ದೆವು ಎಂದರೆ ಆಶ್ಚರ್ಯವಾಗುತ್ತದೆ.
ಹೋದತಕ್ಷಣವೇ ಅಡುಗೆಗೆ ಅಕ್ಕಿ ಇಟ್ಟು,ಎಂಥದೋ ಬಾತು ಮಾಡಿ ತಿಂದಾಯಿತು. ಮೊಬೈಲಿನಲ್ಲಿ ಹಿಂದಿ ಹಾಡೊಂದನ್ನು ಹಾಕಿ ಕೂತ ಗೆಳೆಯರ ಮಾತಿನ ಓಘ ಮತ್ತು ವೇಗ ಆಫೀಸಿನ ಕೆಲಸದಿಂದ ಶುರುವಾಗಿ, ತಮ್ಮ ಹಳೆಯ ಕ್ಲಾಸ್ ಮೇಟ್ಗಳ ವಿವರಣೆಯವರೆಗೆ ಬಂದು ನಿಂತಿತ್ತು. ಗಂಟೆ ಎಂಟಾದರೂ ಬೆಳಕೋ ಬೆಳಕು. ಅಲ್ಲೆರಡು ಫೋಟೋಗಳನ್ನು ಕ್ಲಿಕ್ಕಿಸಿ ಅವರ ತೆಲಗು ಸಂಭಾಷಣೆಗಳಿಗೆ ಇಂಗ್ಲೀಷಿನ ಸಾಲುಗಳನ್ನು ಸೇರಿಸುತ್ತಾ ನನಗಾದಷ್ಟನ್ನು ಮಾತನಾಡುತಿದ್ದೆ. ನಾನೀವರೆಗೆ ಬೆರೆತ ಜನರಿಗಿಂತ ತುಸು ಬೇರೆಯದೇ ಆದ ಪ್ರವೃತ್ತಿಯುಳ್ಳ ಜನರೋದಿಗೆ ಹೊಂದಿಕೊಳ್ಳುತ್ತಿರುವಾಗಲೇ ಮುಂದಿದ್ದ ಕಡಲೇ ಬೀಜಗಳು ಖಾಲಿಯಾಗುತ್ತಾ ಬಂತು.
ಬೋಪ್ಸರ ಎಂಬ ಆ ಪಟ್ಟಣಭಾಗದ ಸಮೀಪ ಸ್ಟುಟ್ಗಾರ್ಟಿನ ಅತೀ ಎತ್ತರದ ಜಾಗವೊಂದಿದೆ. ಹೆಸರಿಗೆ ಟೀ ಹೌಸ್ ಎಂದು ಕರೆದರೂ ಅದು ಪ್ರೇಮಿಗಳ ಜಾಗವಾಗಿ ಬಲು ಪರಿಚಿತ. ಒಂಬತ್ತು ಗಂಟೆಯ ಆ ನಸುಗತ್ತಲಲ್ಲಿ ರಸ್ತೆ ಬೆಳಕಿಗೆ ಅಭಿಮುಖವಾಗಿ ನಡೆಯತೊಡಗಿದಾಗ ಇವತ್ತು ಇಲ್ಲೇ ಎಲ್ಲೋ ಮಲಗುವುದು ಸ್ಪಷ್ಟವಾಗತೊಡಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಸೈಕಲ್ ಹತ್ತಿ ಟ್ರಿಣ್ ತ್ರಿಣ್ ಮಾಡುವವರನ್ನು ಬಿಟ್ಟರೆ ಕಾಡಿಗೆ ಪ್ರವೇಶದಂತಿದ್ದ ಆ ಏರು ದಾರಿಯಲ್ಲಿ ಮತ್ಯಾರೂ ಇರಲಿಲ್ಲ. ಜೊತೆಯಲ್ಲಿದ್ದವರು ಬೀರಿನ ಮಹಿಮೆಯಿಂದ ಬಹಳ ಜಾಸ್ತಿ ಮಾತನಾಡತೊಡಗಿದ್ದರು. ಅಥವಾ ಅವರು ಬಿಯರು ಕುಡಿದ ವಿಷಯ ತಿಳಿದ ನನಗೆ ಅವರ ಸಹಜ ಮಾತುಗಳೂ ವಿಚಿತ್ರವಾಗಿ ಕಂಡಿರಬಹುದು. ಆ ಟೀ ಹೌಸೆಂಬ ಹಳೇ ಕಟ್ಟಡದ ಎದುರಿಗೆ ನಮ್ಮ ದೇವಸ್ಥಾನದಲ್ಲೆಲ್ಲಾ ನಿಲ್ಲಿಸಿರುತ್ತಾರಲ್ಲಾ ಆ ತರಹದ್ದು ಒಂದು ಗರುಡಗಂಬ.. ಯಾವುದೋ ವಿಶ್ವವಿದ್ಯಾಲಯದಂತೆ ಕಾಣುವ ಉದ್ದದ ಮೆಟ್ಟಿಲುಗಳು.. ಅವುಗಳ ಮೇಲೆ ಸಾಲು ಕಂಬಗಳು..ರಾತ್ರಿಯಲ್ಲಿ ಕಂಬದ ಮೇಲಿನ ಕೆತ್ತನೆಗಳೆಲ್ಲಾ ಸರಿಯಾಗಿ ಕಾಣಲೂ ಇಲ್ಲ..ನೋಡಲೂ ಇಲ್ಲ..
ನಿಜ. ಸ್ಟುಟ್ಗಾರ್ಟ್ ಸಿಟಿ ಸಂಪೂರ್ಣವಾಗಿ ಕತ್ತಲೆಗೆ ಹೊರಳಿಕೊಂಡಿತ್ತು.. ಆಗಸದಲ್ಲಿ ಅಲ್ಲಲ್ಲಿ ಹಾರುವ ವಿಮಾನಗಳ ಬೆಳಕು ಬಿಟ್ಟರೆ ಯಾವುದೇ ನಕ್ಷತ್ರಗಳಿರಲಿಲ್ಲ.. ಆ ಜಾಗದಿಂದ ಇಡೀ ಸಿಟಿ, ಧ್ಯಾನಸ್ಥ ಯೋಗಿಯಂತೆ ತಟಸ್ಥವಾಗಿ ಕಾಣುತ್ತಿತ್ತು.. ಕಾರುಗಳ ಭರಾಟೆ, ಯುವಜನರ ಕೂಗಾಟ, ವೀಕೆಂಡಿನ ಜಂಜಾಟಗಳ ಸಿಟಿ ಇದೇನಾ ಎಂದು ಕೇಳುವಷ್ಟು ಸುಂದರ ನಿರ್ಲಿಪ್ತತೆ ಅಲ್ಲಿತ್ತು.. ಕುಡಿಯುವವರು ಕುಡಿಯುತ್ತಿದ್ದರು.. ನುಡಿಯುವವರು ಕಲ್ಲುಬೆಂಚಿನ ಮೇಲೆ ನುಡಿಯುತ್ತಿದ್ದರು.. ಮಿಡಿಯುವವರು ಮರದ ಮರೆಯಲ್ಲಿದ್ದರು.. ಅವರಷ್ಟಕ್ಕೆ ಅವರು ತಮ್ಮದೇ ಆದ ಅದೇ ವರ್ತುಲಗಳಲ್ಲಿ ಅವರದೇ ಕೇಂದ್ರದಲ್ಲಿ ಮುಳುಗಿದ್ದರು. ಕ್ಯಾಮರಾಕ್ಕೆ ಕೈ ಕಾಲು ಸಿಕ್ಕಿಸಿ ಕೆಲ ಚಿತ್ರಣಗಳನ್ನು ತೆಗೆದೆ.. ಆಮೇಲೆ ಸುಮ್ಮನೆ ಕತ್ತಲನ್ನು ದೃಷ್ಟಿಸುತ್ತಾ ಕುಳಿತೆ. ಎಲ್ಲರೂ ಹೊರಟಾಗ ಅವರೊಂದಿಗೇ ಹೊರಟೆ..
ಈಗ ಮಲಗುವ ದಿನಾಂತದ ಸಮಯ.. ನಾವಂತೂ ನಮ್ಮ ಹೊಟೇಲಿಗೆ ಮರಳುವ ಸಾಧ್ಯತೆ ಬಹಳ ಕಡಿಮೆಯಿತ್ತು. ಮೊದಲೇ ಹೇಳಿದಂತೆ ಬಟ್ಟೆ ಬರೆಯೇನನ್ನೂ ತಂದಿರಲಿಲ್ಲ.. ಬ್ರಹ್ಮಚಾರಿಗಳಿಗೆ ಎಲ್ಲಿದ್ದರೇನಂತೆ ಎಂದು ಜೊತೆ ಬಂದ ಇಬ್ಬರಲ್ಲಿ ಒಬ್ಬ ಸಹೋದ್ಯೋಗಿಯ ಮನೆಯಲ್ಲಿ ಪಾಚುವ ವ್ಯವಸ್ಥೆಯಾಯಿತು. ಏನೋ ಸಿನಿಮಾ ನೋಡುವ ಎಂದು ಆ ಅಪರಾತ್ರಿ ಟಿ,ವಿ, ಹಚ್ಚಿದರೂ ವಿಮಾನ ನಿಲ್ದಾಣದಿಂದ ಈ ಟೀ ಹೌಸಿನ ವರೆಗಿನ ಎಲ್ಲಾ ಕೆಲಸಗಳು ನೆನಪಾಗಿ ನಿದ್ದೆ ಒಂದೇ ಸರಿಯಾದ ಆಯ್ಕೆ ಎಂದು ಬಣಬಣಿಸುತ್ತಿತ್ತು. ಅವರ ಮನೆಯ ಬಿಳೀ ಹಾಸಿಗೆಯ ಬಿಳೀ ಚಾದರದಡಿಯಲ್ಲಿ ಕಾಲು ನೀಡಿ ಮಲಗಿದಾಗ ಕಿಡಕಿಯಿಂದ ತಂಗಾಳಿಯಾಗಿ ತೂರಿ ಬಂದ ನಿದ್ರಾದೇವಿ ಕಣ್ಣಿನ ರೆಪ್ಪೆಗಳನ್ನು ಜೋಡಿಸಿ ಹೊಲಿಯತೊಡಗಿದಳು..
ಹಾರುವ ಬೇರುಗಳು : ಒಂದು - ಜರ್ಮನಿಯ ಅಭಿಯಂತರಿಸಿದ ವಿನ್ಯಾಸ
ಸಣ್ಣ ಸಣ್ಣ ಚಡ್ಡಿಯ ಜನಸಂದಣಿಯಿದ್ದ ಫ್ರಾನ್ಸಿನ ಆ ಏರ್ ಪೋರ್ಟು ಮೊದಲ ನೋಟಕ್ಕೆ ತುಂಬಾ ವರ್ಣಮಯವಾಗಿಯೇ ಕಾಣುತ್ತದೆ.ಯಾರಿಗೆ ಯಾರೂ ಪರಿಚಯದವರೇ ಅಲ್ಲದಂತೆ ಸರ್ವರೂ ಓಡಾದುತ್ತಿರುವಾಗ ಸದ್ದಿಲ್ಲದೇ ಹೊಸ ವ್ಯವಸ್ಥೆಯ ವಾಸನೆ ಬಂದಿತ್ತು. ಹೊರಗೆ ಸ್ವಲ್ಪವೇ ಅನಿಸುವಂತ ತಂಗಾಳಿಯು ನಿಲ್ದಾಣದ ಒಳಗೆ ಬಂದು ಬೆಚ್ಚಗಾಗಿತ್ತು. ವ್ಯವಸ್ಥೆಗಳು, ಜನಮನಗಳು ಹೊಸತಾದರೂ ಪರದೇಶವೆನ್ನುವಷ್ಟು ಬದಲಾದ ವಾತಾವರಣ ಅದಾಗಿರಲಿಲ್ಲ. ಅದೇ ಏರ್ಪೋರ್ಟಿನ ಸೆಕ್ಯೂರಿಟಿ ಚೆಕ್ಕುಗಳು, ಕಾಯುವವರಿಗೆ ಕಾಯುತ್ತಿದ್ದ ಸೀಟುಗಳು, ಟ್ಯಾಕ್ಸ್ ಇಲ್ಲದೇ ಬೀರು,ಚಾಕಲೇಟುಗಳನ್ನು ಮಾರುವ ಅಂಗಡಿಗಳು, ಆಗಾಗ ಗುಂಯ್ಗುಟ್ಟಂತೆ ಧಾಳಿಯಿಡುವ ನಾಗರೀಕ ಧ್ವನಿಯ ಅನೌನ್ಸ್ ಮೆಂಟುಗಳು.. ಹೀಗೆ ಎಲ್ಲವುಗಳ ಮಿಶ್ರಣ ಗೊತ್ತಿದ್ದ ವಿಷಯವನ್ನೇ ಹೊಸ ಧ್ವನಿಯಲ್ಲಿ ವಿವರಿಸಿದಂತಿತ್ತು. ಟ್ರಾನ್ಸಿಟ್ಟಿನ ಎರಡು ತಾಸು ಕಾಯುವಿಕೆಯನ್ನು ಆರಾಮಾಗಿ ಕಳೆಯಲು ನನಗೆ ಬೇಕಾದಷ್ಟು ಹೊಸತಿದ್ದವು ಬಿಡಿ..
ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ರಾನ್ಸಿನ ಜನರಲ್ ಆಗಿದ್ದ ಚಾರ್ಲ್ಸ್ ದಿ ಗೌಲ್ ಎಂಬವನ ಹೆಸರಿಟ್ಟುಕೊಂಡ ಆ ನಿಲ್ದಾಣದ ಒಳಗೆ ಸುತ್ತುವುದು ಒಂದು ಸಮಸ್ಯಾಪೂರ್ತಿ ಮಾಡಿದಂತೆ. ಆಗ ತಾನೇ ಸಿಕ್ಕ ವಿಚಿತ್ರ ಸ್ವಾತಂತ್ರ್ಯಾನುಭೂತಿಯಲ್ಲಿ ಆ ಬಾಗಿಲಿನಿಂದ ಈ ಬಾಗಿಲಿಗೆ, ಸಿ ಟರ್ಮಿನಲ್ಲಿನಿಂದ ಡಿ ಟರ್ಮಿನಲ್ಲಿಗೆ ತಿರುಗುತ್ತಾ ಒಂದು ತಾಸು ಕಳೆದು ಹೋಗಿತ್ತು. ಇನ್ನೊಂದು ತಾಸನ್ನು ಮುಂದಿನ ವಿಮಾನ ಬರುವ ಬಾಗಿಲ ಎದುರು ಕೂತು ಕಳೆಯಲು ನಿರ್ಧರಿಸಿ ವಿರಮಿಸಿದೆವು. ಸ್ವಲ್ಪವೇ ಚಾರ್ಜ್ ಉಳಿದಿದ್ದ ನನ್ನ ಫೋನಿನ ಸಂಗೀತ ಆ ಸಮಯದಲ್ಲಿ ಜೊತೆಯಾದರೂ ಹೊಸ ಜಾಗ ಎಂದೇನೋ ತನ್ನ ಮೊದಲಿನ ಆಪ್ತತೆಯನ್ನು ತೋರಲಿಲ್ಲ.
ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳೆಂದರೆ ಮೆಜೆಸ್ಟಿಕ್ಕಿನಂತೆ. ಬಸ್ಸಿನ ಬದಲು ಉಕ್ಕಿನ ರೆಕ್ಕೆಯ ಹಕ್ಕಿಗಳು.. ಒಂದರ ಹಿಂದೆ ಸಾಲಾಗಿ ನಿಂತು ಪಾಳಿಗಾಗಿ ಕಾಯುತ್ತಾ, ಪುರ್ರನೆ ಹಾರುವ ಈ ವಿಮಾನಗಳಿಗೆ ಅವುಗಳ ಮೂಲದ ಆಧಾರದ ಮೇಲೆ ವಿಧ ವಿಧ ಬಣ್ಣಗಳು.. ಮೈಬಣ್ಣ ಎಲ್ಲವೂ ಬೆಳ್ಳಗಿದ್ದರೂ ಬಾಲ, ರೆಕ್ಕೆಗಳ ಭಾಗ ಆಯಾ ದೇಶದ ಆಯಾ ಕಂಪನಿಯ ಲಾಂಛನಗಳನ್ನು ಹೊತ್ತು ಮೆರೆಯುತ್ತಿದ್ದವು. ನಮ್ಮ ವಿಮಾನ ಈಗ ಹಾರುವಾಗ ಹಗಲು ಮತ್ತು ನನಗೆ ಸಂಪೂರ್ಣ ಎಚ್ಚರವಿತ್ತು. ಕಿಟಕಿ ಅಷ್ಟೇ ಸಣ್ಣದಿದ್ದರೂ ಈಗೇನೋ ಹೊಸದು ಕಾಣಲಿದೆ ಎಂದು ಮನಸ್ಸಿಗೆ ಅನ್ನಿಸಿ ಬಿಟ್ಟಿತ್ತು. ವಿಮಾನ ತನ್ನ ರೆಕ್ಕೆಗಳನ್ನು ಅಲುಗಾಡಿಸುತ್ತಾ ಬಾನಿಗೆ ಜಿಗಿದು ಸುಧಾರಿಸಿಕೊಳ್ಳುವಷ್ಟರಲ್ಲಿ ಕಿಟಕಿಯಿಂದ ಹಳೇ ದೈವೀ ಸಿನಿಮಾಗಳಲ್ಲಿ ನಾರದರು ತಂಬೂರಿ ಮೀಟುತ್ತಾ ಹಾಡಿಕೊಂಡು ಹೋಗುವಂತಾ ಸ್ವರ್ಗ ಕಿಟಕಿಯ ಪಕ್ಕದಲ್ಲಿತ್ತು. ಆ ಮೋಡಗಳ ಮಧ್ಯೆ ಆಗಾಗ ತೂರಿ ಹಾರುವ ಇತರ ವಿಮಾನಗಳ ಹಿಂದೆ ಬೀಳುವ ಬೆಳ್ಳಿ ರೇಖೆ ಆಗಸದಲ್ಲಿ ರಂಗೋಲಿ ಬಿಡಿಸುತ್ತಿತ್ತು. ಹತ್ತಿಯ ಚೀಲಗಳಂತ ಮೋಡಗಳು ನೆಲ ಕಾಣುವಂತೆ ಅಲ್ಲಲ್ಲಿ ಹರಿದಿದ್ದರೆ, ಆ ಹರಿದ ಭಾಗದಲ್ಲಿ ಫ್ರಾನ್ಸಿನದ್ದೋ ಜರ್ಮನಿಯದ್ದೋ ನದಿಯೊಂದು ವಕ್ರಾವಕ್ರವಾಗಿ ಹರಿದಿತ್ತು. ಒಂಭತ್ತೋ ಹತ್ತನೆಯದೋ ಇಯತ್ತೆಯ ನಕಾಶೆ ಪುಸ್ತಕದಲ್ಲಿ ಬಿಡಿಸಿದ್ದ ಫ್ರಾನ್ಸಿನ ಅಂಚುಗಳು ಆಲ್ಲಿ ಮಿಂಚುತ್ತಿದ್ದಂತೆ ಕಂಡಾಗ ಮೈ ಜುಮ್ಮೆಂದಿತ್ತು. ಮತ್ತು ಸಖಿಯೋರ್ವಳು ಕೊಟ್ಟ ಜ್ಯೂಸ್ ರೀತಿಯ ಕಹಿ ದ್ರಾವಣ ತಣ್ಣಗಿತ್ತು.
ಮಧ್ಯಾಹ್ನ ಎರಡರ ಹೊತ್ತಿಗೆ ಸ್ಟುಟ್ಗಾರ್ಟ್ ನಲ್ಲಿ ಇಳಿದಾಗಿತ್ತು. ಇನ್ನೆರಡು ತಿಂಗಳು ಇಲ್ಲೆಲ್ಲೋ ಅಸುಪಾಸಲ್ಲೇ ಇರಬೇಕು ಎಂಬ ಪೂರ್ವಾಗ್ರಹದಿಂದಲೋ ಏನೋ , ಈ ಜಾಗ ಫ್ರಾನ್ಸಿಗಿಂತಲೂ ಇಷ್ಟವಾಗಿತ್ತು. ರನ್ವೇಗೆ ತಲುಪುವ ಕೆಲಕ್ಷಣಗಳ ಮುಂಚೆ ಕಂಡ ಬಾಷ್ ಹೆಸರಿನ ಜಗತ್ತಿನ ಅತೀ ದೊಡ್ಡ ಲೋಗೋ ನೋಡಿ ಮೂಡಿದ ಅಭಿಮಾನ ಅದಕ್ಕೆ ಪೂರಕವಾಗಿತ್ತು ಎನ್ನಬಹುದು. ಅಷ್ಟೇನೂ ದೊಡ್ದದಲ್ಲದ ನಿಲ್ದಾಣ - ತನ್ನಿಂದ ತಾನೇ ಮುಚ್ಚುವ ತೆರೆಯುವ ಬಾಗಿಲುಗಳು, ಹೊಸಬರಿಗೂ ದಾರಿ ತಪ್ಪದ ರೀತಿಯಲ್ಲಿ ಬರೆದ ದಾರಿ ಸೂಚಕಗಳು, ಜಾಸ್ತಿ ಕಾಯಿಸದ ಸೆಕ್ಯೂರಿಟಿಗಳು ಇತ್ಯಾದಿಗಳಿಂದ ಸುಸಜ್ಜಿತವಾಗಿತ್ತು. ಬ್ಯಾಗುಗಳು ಪ್ರದಕ್ಷಿಣೆ ಹಾಕಿ ಬಂದು ನಮ್ಮ ಕೈ ಸೇರಿದಾಗ ವಿಮಾನ ನಿಲ್ದಾಣದ ಋಣ ತೀರಿದಂತಾಯಿತು. ಏರ್ಪೋರ್ಟಿನ ಹೊರಗೆ ಬಂದು ಟ್ಯಾಕ್ಸಿ ಹತ್ತಿ ಹೋಟೆಲಿಗೆ ಹೊರಟಾಗ ಇಪ್ಪತ್ತು ನಿಮಿಷಗಳು ಎಂದು ಮೊದಲೇ ತಿಳಿಸಿಬಿಟ್ಟ ಚಾಲಕ.
ಜರ್ಮನಿಯನ್ನು ಸುಮ್ಮನೆ ಕಟ್ಟಿದ್ದಲ್ಲ. ಅಭಿಯಂತಿರಿಸಿದ ವಿನ್ಯಾಸವದು. ಇಂಜಿನಿಯರ್ಡ್ ಡಿಸೈನ್. ರಸ್ತೆಗಳಾಗಲಿ, ಅದರ ಡಿವೈಡರ್ಗಳಾಗಲೀ ಚಿತ್ರದಂತೆ ರಚಿಸಿದ್ದು. ಬದಿಯ ಮರಗಳು, ಗಿಡಗಳು ಪೊದೆಗಳು, ಅಲ್ಲಲ್ಲಿ ಅರಳಿದ ಹೂವುಗಳು ಎಲ್ಲವೂ ಬಲು ಆತ್ಮವಿಶ್ವಾಸದಿಂದ ಬೆಳೆದದ್ದು. ರಸ್ತೆಯ ಭವಿಷ್ಯ ನಿರ್ಧರಿಸುವ ಬೋರ್ಡುಗಳು ಅಳತೆಯಿಟ್ಟು ಬರೆದಿದ್ದು. ಬುರು ಬುರು ತಿರುಗುವ ಕಾರುಗಳ ಹೊಳಪುಗಳು ಕನ್ನಡಿಯ ಪ್ರತಿಫಲನದಿಂದ ಆಗಿದ್ದು. ಇದನ್ನೆಲ್ಲಾ ನೋಡುತ್ತಾ ನಮ್ಮಲ್ಲಿ ಈತರಹ ಯಾಕಿಲ್ಲ ಎಂಬ ಯೋಚನೆ ಬರಲೇ ಇಲ್ಲ. ಬದಲಿಗೆ ನಿದ್ದೆ ಬಂತು. ಮರ್ಸಿಡಿಸ್ ಟ್ಯಾಕ್ಸಿಯ ಆ ಪಯಣ ಮೊದಲು ತಿಳಿಸಿದಂತೇ ಇಪ್ಪತ್ತೇ ನಿಮಿಷದಲ್ಲಿ ಮುಗಿದಿತ್ತು.
ಯಾವುದೋ ಕಾಡಿನ ಮಧ್ಯೆ ಇರುವಂತೆ ಬಿಂಬಿಸಿದ ನಾವಿರಲಿರುವ ಹೋಟೆಲು ಇಂಟರ್ನೆಟ್ನಲ್ಲಿ ನೋಡಿದಂತೆಯೇ ಇತ್ತು. ಹೀಗಾಗಿ ಇದು ಪರಿಚಯವಿತ್ತು ಅನ್ನಬಹುದು. ರಿಸೆಪ್ಷನ್ನಲ್ಲಿ ಸಹಿ ಹೊಡೆದು ಕೀ ತೆಗೆದುಕೊಂಡು ರೂಮಿನ ಬಾಗಿಲು ತೆಗೆದರೆ ನಿರಾಸೆ. ಅಡುಗೆ ಮನೆ ಇಲ್ಲ. ಇಂಟರ್ನೆಟ್ ನಲ್ಲಿ ಬುಕ್ ಮಾಡುವಾಗ ಇದ್ದ ಅಡುಗೆ ಮನೆ ಈಗ ಮಾಯ.. ಅದನ್ನು ನಂಬಿ ಅಡ್ಜಸ್ಟ್ ಮಾಡಿ ಹೊತ್ತು ತಂದ ಅಕ್ಕಿ, ಬೇಳೆ, ಸಾಂಬಾರು ಪುಡಿಗಳ ಜೊತೆಗೆ ನಮಗೂ ಗಾಯ. ರೊಂಯ್ಯನೆ ರಿಸೆಪ್ಷನ್ನಿಗೆ ಹೋಗಿ ಅರುಹಿದಾಗ, ಆಡುಗೆಮನೆ ಸಹಿತ ರೂಮುಗಳು ಸಧ್ಯಕ್ಕಿ ಲಭ್ಯವಿಲ್ಲ ಎಂಬ ದೈನ್ಯದ ಉತ್ತರ. ಬೇರೇನೂ ಹೇಳಲಾಗದ ಅಸಹಾಯಕ ಸ್ಥಿತಿಯಲ್ಲಿ ಸರಿ ಎಂದಷ್ಟೇ ಹೇಳಿ ರೂಮಿಗೆ ವಾಪಾಸಾಗಿ ಮುಖ ತೊಳೆದುಕೊಂಡು ಜರ್ಮನಿಯೆಂಬ ಜರ್ಮನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೂತದ್ದಾಯಿತು.
ಮೊದಲ ದಿನ ಮೌನ ಎಂಬೋ ಹಾಡಿನ ಗುಂಗು ಹತ್ತಿರ ಬಂದು ಮನಸ್ಸನ್ನು ಹೊಕ್ಕುತ್ತಿದ್ದಂತೆ ಅದಕ್ಕಡ್ಡಬಂದವರು ಸಹೋದ್ಯೋಗಿಗಳಿಬ್ಬರು. ಧುತ್ತನೆ ಪ್ರತ್ಯಕ್ಷರಾದ ಅವರು ಜರ್ಮನಿಯಲ್ಲಿದ್ದುದು ಗೊತ್ತಿತ್ತಾದರೂ ಆ ಕ್ಷಣದಲ್ಲಿ ಅವರನ್ನು ನಾವಿರುವ ಜಾಗದಲ್ಲೇ ಕಂಡಿದ್ದು ಆಶ್ಚರ್ಯವನ್ನುಂಟು ಮಾಡಿತ್ತು. ಹಲೋಗಳನ್ನೂ ಹಾಯಿಗಳನ್ನೂ ಮುಳುಗಿಸಿ ತೇಲಿಸಿದ ನಂತರ ಸಧ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ನಮಗಿಲ್ಲದ ಅಡುಗೆ ಮನೆ ಸೌಲಭ್ಯ ಅವರವರ ರೂಮಿನಲ್ಲಿತ್ತಾದ್ದರಿಂದ ಅವರ ರೂಮಿಗೆ ಹೋಗಿ ಊಟ ಮಾಡಿ ಮುಂದಿನ ದಿನವನ್ನು ಕಳೆಯಲು ತೀರ್ಮಾನಿಸಲೂ ಆಯಿತು. ಸೊಂಟಕ್ಕೊಂದು ಬೆಲ್ಟಿನಂತ ಚೀಲ ಕಟ್ಟಿಕೊಂಡು ಅದರೊಳಗೆ ಪಾಸ್ ಪೋರ್ಟು ತುರುಕಿಕೊಂಡು, ಬಗಲಿಗೆ ಕ್ಯಾಮರಾ ನೇತುಕೊಂಡು ರೈಲು ನಿಲ್ದಾಣವೆಂಬ ಹೊಸ ಜಾಗಕ್ಕೆ ನಡೆಯುತ್ತಾ ಇರುವಾಗ ಇದು ಖರೇ ಯುರೋಪಿನಂತೆ ಅನಿಸಿತು. ಆಗ ಉಳಿದ ಅರ್ಧ ದಿನದ ಕತೆ ಏನೆಂದು ಅಸ್ಪಷ್ಟ ಚಿತ್ರಣವೂ ಇರಲಿಲ್ಲ. ಯಾವುದಕ್ಕೂ ಏನೂ ತಯಾರಿಯಿಲ್ಲದೆ ಸುಮ್ಮನೆ ಹೊರಟಿದ್ದೆ.
ಹಾರುವ ಬೇರುಗಳು : ಸೊನ್ನೆ - ಜರ್ಮನಿ ಪ್ರಯಾಣದ ತತ್ಕಾಲ ವೈರಾಗ್ಯ
ಇದು ಹೀಗೆಲ್ಲಾ ಅಗುತ್ತದೆ ಎಂದು ಗೊತ್ತಿಲ್ಲದಿದ್ದರೂ ಇದನ್ನು ಬಿಟ್ಟು ಬೇರೇನೋ ಆಗುತ್ತದೆ ಎಂದೇನೂ ಅಂದುಕೊಂಡಿರಲಿಲ್ಲ. ಒಂದೂವರೆ ಎರಡು ತಿಂಗಳ ಹಿಂದೆಯೇ ಜರ್ಮನಿಗೆ ಹೋಗುವುದು ನಿಶ್ಚಿತವಾಗಿದ್ದರೂ ಹಲವಾರು ಕಾರಣಗಳಿಂದ ಇವತ್ತಿನವರೆಗೆ ಬಂತು. ಚೀಲದಲ್ಲಿ ಬಟ್ಟೆ ಬರೆ, ಊಟ ತಿಂಡಿ, ಬ್ರಷ್ಶು ಪೇಸ್ಟುಗಳನ್ನೆಲ್ಲಾ ತುಂಬಿ, ಹತ್ತಿರದ ತೂಕದವನಿಂದ ತೂಗಿಸಿ, ಅದು ಎರಡು ಕೇಜಿ ಜಾಸ್ತಿ ಬಂದು, ಅದರೊಳಗಿದ್ದ ಎರಡು ಪುಸ್ತಕಗಳನ್ನು ಇನ್ನೊಂದು ಬ್ಯಾಗಿಗೆ ಹಾಕಿ, ಆ ಬ್ಯಾಗು ತೂಗಲಾಗಿ ಅದು ಮತ್ತೆ ಒಂದು ಕೆ.ಜಿ. ಜಾಸ್ತಿಯಾಗಿ, ಅದರಿಂದೆರಡು ಬಟ್ಟೆ ತೆಗೆದು ಇದಕ್ಕೆ ಹಾಕಿ, ಎರಡೂ ಬ್ಯಾಗಿನಲ್ಲಿ ಒಂದೊಂದು ಕೆಜಿ ಜಾಸ್ತಿ ತುಂಬಿ, ಮಧ್ಯಾಹ್ನವೇ ಬುಕ್ ಮಾಡಿಟ್ಟಿದ್ದ ಟ್ಯಾಕ್ಸಿಯವನ ಹಾರ್ನಿಗೆ ಓಗೊಟ್ಟು, ಹಳೆ ಶೂವಿಗೆ ಹೊಸ ಲೇಸು ಕಟ್ಟಿ, ಕ್ಯಾಮರವನ್ನು ನೇತು ಹಾಕಿಕೊಂಡು, ಲಗೇಜನ್ನು ಡಿಕ್ಕಿಯಲ್ಲಿಟ್ಟು, ಮುಂದಿನ ಸೀಟಿನಲ್ಲಿ ಕೂತು ಕಿಡಕಿ ಗಾಜು ಕೆಳಗಿಳಿಸುವಷ್ಟರಲ್ಲಿ ಹತ್ತೂವರೆ. ವಿಮಾನ ಒಂದೂ ಐವತ್ತಕ್ಕೆ.
ಮನೆ ಮುಂದೆಯೇ ಆದ ಟ್ರಾಫಿಕ್ ಜ್ಯಾಮು ನೋಡಿ ಒಮ್ಮೆ ಗಾಬರಿಯಾದರೂ ಗಂಟೆ ನೋಡಿ ಇನ್ನೂ ಟೈಮಿದೆ ಅಂದುಕೊಂಡೆ. ಡ್ರೈವರ್ ಆಗಲೇ ಬೆಂಗಳೂರು ಸಿಟಿಗೆ ಬಯ್ಯುವುದರೊಂದಿಗೆ ನಿದಾನಕ್ಕೆ ಮಾತಿಗಿಳಿದಿದ್ದ. ನಾನೂ ಸರಿ ಎಂದು ಸಣ್ಣಗೆ ಪರಿಚಯ ಭಾಷಣ ಮಾಡಿ ಓಂ ಸ್ವಸ್ತಿ ಅಂದೆ. ಮನೆಗೆ, ಅವರಿವರಿಗೆ, ಮತ್ತಿತರರಿಗೆ ಫೋನಾಯಿಸುತ್ತಾ ನನ್ನ ಜೊತೆ ಹೊರಟ ಸಹೋದ್ಯೋಗಿಗಳಿಗೆ ನನ್ನ ಮಾಹಿತಿ ಕೊಡುತ್ತಾ ಟ್ರಾಫಿಕ್ ತಪ್ಪಿ ಮಹಾನಗರಿಯ ವರ್ತುಲ ರಸ್ತೆಯಲ್ಲಿ ಗುಯ್ಯಂನೆ ಹೋಗುವಾಗ ತಂಪುಗಾಳಿ ಕಿವಿಯನ್ನು ಹೊಕ್ಕಿತು. ಕಿಡಕಿಯ ಗಾಜನ್ನು ಸ್ವಲ್ಪ ಮೇಲೆರಿಸಿದೆ. ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಒಂದು ಡೈಲಾಗಿದೆ. ಶಶಿ ಸೂರ್ಯನಿಗೆ ’ಮನುಷ್ಯನಿಗೆ ರೆಕ್ಕೆಗಳಿರಬೇಕು’ ಅಂದರೆ ’ರೆಕ್ಕೆಗಳಲ್ಲ ಬೇರುಗಳು ಬೇಕು’ ಎನ್ನುತ್ತಾನೆ ಸೂರ್ಯ. ಅದೆಲ್ಲಾ ನೆನಪಾಗಿ ನಾನು ಯಾಕೆ ಅಥವಾ ಏನನ್ನು ಅರಸಿ ಅಲ್ಲಿಗೆ ಹೋಗುತ್ತಿದ್ದೇನೆ? ಎಂಬ ಪ್ರಶ್ನೆ ಕಾಡಿದರೂ ಹೊಸ ಅನುಭವವೊಂದಕ್ಕೆ ಇದು ಸರಿ ಸಮಯವೆಂದೂ ಮತ್ತು ಯೋಚನೆ ಮಾಡಲು,ಅಂದರೆ ಈ ರೀತಿ ಯೋಚನೆ ಮಾಡಲು ಇದು ಸರಿಯಾದ ಸಮಯವಲ್ಲವೆಂದೂ ಸುಮ್ಮನಾದೆ. ಈಗ ಬರೆಯಬೇಕಾದರೆ ಅನಿಸುತ್ತಿದೆ. ಈ ತಾತ್ಕಾಲಿಕ ವೈರಾಗ್ಯಗಳು ಒಮ್ಮಿಂದೊಮ್ಮೆಗೆ ನುಗ್ಗಿ ಮನಸ್ಸನ್ನು ದ್ವಂದ್ವದಲ್ಲಿ ಸಿಕ್ಕಿಸಿ ಮಜ ಮಾಡುತ್ತವೆ. ಅದನ್ನೆಲ್ಲ ಲೆಕ್ಕಿಸದೆ ಈ ಕ್ಷಣದ ಸತ್ಯ ಇದೆಂದು ಅದನ್ನೇ ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯಬೇಕು. ಯೋಚಿಸಿದರೆ ಮತ್ತೆ ಯಾವುದೋ ಮುರಳಿ ನಾದ ದೂರ ತೀರಕ್ಕೆ ಕರೆಯುತ್ತದೆ..
ವಿಮಾನದ ಡಿಲೇ ಗಳು ಸಹಜ ಮತ್ತು ಸುಂದರ. ಯಾಕೆ ತಡವಾಗಿದೆ ಎಂದು ಯಾರಿಗೂ ಸುಳುಹು ಕೊಡದೇ ತಡವಾಗಿದೆ ಎಂದು ಸರಳವಾಗಿ ನಗುತ್ತಾ ಹೇಳುತ್ತಾ ಅಡ್ಡಾಡಿಕೊಂಡಿರುವ ಏರ್ ಫ್ರಾನ್ಸ್ ಅಧಿಕಾರಿಗಳನ್ನು ನೋಡೀ ಅನಿಸಿದ್ದು ಇದು. ಎರಡು ಗಂಟೆ ತಡ ಎಂದು ಹೇಳಿ ನಮ್ಮ ಬ್ಯಾಗೇಜುಗಳ ಮೇಲೆ ಪಟ್ಟಿ ಸುತ್ತಿ ಬಿಸಾಡಿದ ಮೇಲೆ ಕೈಯಲ್ಲಿ ಉಳಿದಿದ್ದು ತಡವಾಗಿದ್ದಕ್ಕೆ ಪರಿಹಾರವಾಗಿ ಕೊಟ್ಟ ಕಾಫಿ ಡೇ ಡ್ರಿಂಕ್ಸು ಮತ್ತು ಒಂದು ಕ್ಯಾಬಿನ್ ಬ್ಯಾಗು. ಒಂದ್ನಾಲ್ಕು ಫೋಟೋ ತೆಗೆದೆ. ಒಂದೆರಡು ಬೋರ್ಡುಗಳನ್ನು ಶ್ರದ್ಧೆಯಿಂದ ಓದಿದೆ. ಸೆಕ್ಯೂರಿಟಿ ಚೆಕ್ ಮುಗಿದ ಮೇಲೆ ಲ್ಯಾಪ್ ಟಾಪ್ ತೆರೆದು ಕೂತೆ. ಹಾಗೂ ಹೀಗೂ ಎರಡು ತಾಸು ಕಳೆಯಿತು. ಏರ್ ಪೋರ್ಟಿನ ಆ ಗೌಜಿ, ಕೂತವರ ತೂಕಡಿಕೆಗಳು, ಕೆಲವರ ಆಕಳಿಕೆಗಳು ಒಂಥರಾ ಆಪ್ತಭಾವವನ್ನುಂಟುಮಾಡಿತ್ತು.ಮುಂದಾಗಲಿರುವ ಯಾವುದೋ ಭಯಂಕರ ಖುಷಿಕೊಡುವ ಸಮಾರಂಭಕ್ಕೆ ತಯಾರಿ ಮಾಡಿದಂತಿತ್ತು.
ಕ್ಯೂದಲ್ಲಿ ಮೊದಲು ಕೈಲಾಗದವರು, ಮುದುಕರು, ಮಕ್ಕಳು, ಕುಟುಂಬ ಸಮೇತ ಆಗಮಿಸಿದವರು ಇವರೆಲ್ಲ ನಿರ್ಗಮನ ದ್ವಾರದಿಂದ ಹೊರಬಿದ್ದ ಮೇಲೆ ನಮ್ಮ ಸರದಿ. ವಿಮಾನದ ಒಳ ಬಿಡುವ ಕೊಳವೆ ಮಾರ್ಗವಾಗಿ ಹೋಗುತ್ತಿರಲು ಬಾಗಿಲಲ್ಲಿ ನಿಂತ ಸಖಿಯರಿಂದ ಆ ನಾಲ್ಕು ಗಂಟೆ ಬೆಳಗಿನಜಾವದಲ್ಲಿ ಗುಡ್ ಮಾರ್ನಿಂಗ್ ಕೇಳಿದಾಗ ನಿದ್ದೆ ಇನ್ನೂ ಜಾಸ್ತಿ ಆದಂತನಿಸಿತು. ಗುಡ್ ನೈಟ್ ಹೇಳಿ ಒಳಹೋಗುವ ಅಂತಿದ್ದ ನಮಗೆ ಗುಡ್ ಮಾರ್ನಿಂಗ್ ಹೇಳುವಂತೆ ಮಾಡಿದ ಆ ಏರ್ ಫ್ರಾನ್ಸಿನ ಸಿಬ್ಬಂದಿಗಳಿಗೆ ನಮಸ್ಕಾರ. ರಾಜಹಂಸ ಬಸ್ಸಿರುತ್ತಲ್ಲ. ಅಂತದ್ದೇ ಸೀಟು. ಜಾಸ್ತಿ ಬಗ್ಗಿಸುವ ಹಾಗೂ ಇಲ್ಲ. ಕಿಡಕಿ ಬದಿ ಸೀಟು ಬೇಕು ಎಂದು ಮೊದಲೇ ಆರಿಸಿದ್ದ ನನಗೆ ಕಿಡಕಿ ಸೈಜ್ ನೋಡಿ ನಿರಾಸೆ ಆಯಿತು. ಆ ರಾತ್ರಿ ಏನೂ ಕಾಣುತ್ತಿರಲಿಲ್ಲ ಎನ್ನುವುದು ಬೇರೆ ಮಾತಾದರೂ ಅಷ್ಟು ದೊಡ್ಡ ವಿಮಾನಕ್ಕೆ ಆ ಸಣ್ಣ ಸಣ್ಣ ಪುಟಾಣಿ ಕಿಡಕಿಗಳು ಇರಬಾರದಿತ್ತು.
ವಿಮಾನ ಹಾರುವಾಗ ಅಲುಗಾಡುತ್ತದೆ ಎಂಬ ವಿಷಯವನ್ನು ನನ್ನ ರೂಮ್ ಮೇಟುಗಳು ಹಲವು ಸಾರಿ ಹೇಳಿದ್ದುದರಿಂದ ಹಾಗೆ ಅಲುಗಾಡಿದಾಗ ಅದು ಹೌದು ಅನ್ನಿಸಿತು. ಯಾವ್ಯಾವುದೋ ಭಾಷೆಯಲ್ಲಿ ಪೈಲಟ್ ಒಂದು ಬಾರಿ, ಗಗನಸಖಿ ಒಂದು ಬಾರಿ ಏನೇನೋ ಹೇಳುತ್ತಿರುವಾಗಲೇ ವಿಮಾನ ಹಾರಿ ಗಗನದಲ್ಲಿತ್ತು. ಹಾಂ.. ಅದಕ್ಕೂ ಮೊದಲು ಗಗನ ಸಖ ಸಖಿಯರು ನಡೆಸಿದ ನಾಟಕದಂತಿದ್ದ ಸುರಕ್ಷಾ ತಾಲೀಮು ಮಜ ಇತ್ತು. ವಿಮಾನ ಮೇಲಿರುವಾಗ ಕಿಟಕಿಯಿಂದಿಣುಕಿದರೆ ಕಾಣುವುದು ಮಿಣುಕು ಲೋಕ. ಭೂಮಿಯಿಂದ ಆಕಾಶ ನೋಡಿದಾಗ ಕಾಣುವ ಹಾಗೆ. ನಕ್ಷತ್ರಗಳೆಲ್ಲಾ ಭೂಮಿಗೆ ಬಿದ್ದ ಹಾಗೆ. ಆ ಬೆಳಕುಗಳಿಗೆ ನಮ್ಮದೇ ಕಲ್ಪನೆಯ ಹೆಸರು ಕೊಡುತ್ತಾ ಆಕಾರ ಕೊಡುತ್ತಾ ಮೇಲೆ ಮೇಲೆ ಹಾರುವುದು ಒಂಥರಾ ಹಿತ. ಎದುರಿಗಿದ್ದ ಟಿ ವಿಯಲ್ಲಿ ಮ್ಯಾಪ್ ನೋಡುತ್ತಾ, ಓಹೋ ಈಗ ಕಾಣುವ ಬೆಳಕು ಆಲಮಟ್ಟಿ ಡ್ಯಾಮಿನದ್ದು, ಈಗ ಕಾಣುವುದು ಗೋವಾ ಚರ್ಚಿನದ್ದು ಎಂದೆಲ್ಲ ಮನಸ್ಸಿಗೆ ಬಂದ ಹಾಗೆ ಅಂದುಕೊಳ್ಳುವುದರಲ್ಲೂ ಸುಖವಿದೆ. ಆ ಆಲೋಚನೆಗಳು ಎಂದಿಗೂ ಸುಳ್ಳಾಗುವುದಿಲ್ಲ. ಯಾರನ್ನಾದರೂ ಕರೆದು ಇದು ಅದೇ ಎಂದರೆ ಅಲ್ಲ ಎಂದು ಹೇಳುವ ಧೈರ್ಯ ಅವರಿಗೂ ಇರುವುದಿಲ್ಲವಲ್ಲ ಅದಕ್ಕೆ. ತತ್ಕಾಲ ಸತ್ಯಗಳು..
ಮದ್ಯ್ಹೆ ಯಾವಗಲೋ ಊಟಕ್ಕೆ ತಂದಿರಬೇಕು ನನಗೆ ಎಚ್ಚರವಿರಲಿಲ್ಲ. ಪಕ್ಕದಲ್ಲಿದ್ದ ಫ್ರೆಂಚ್ ಮಹಿಳೆಯಂತೂ ವಿಮಾನ ಹತ್ತಿದಾಗಿನಿಂದ ಪಂಚೇಂದ್ರಿಯಗಳಿಗೂ ಏನನ್ನೋ ತುರುಕಿ ತನ್ನ ಮತ್ತು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಂಡ್ ಗಪ್ಪನೆ ನಿದ್ದೆ ಮಾಡುತ್ತಿದ್ದಳು. ನನಗೆ ಎಚ್ಚರವಾದಾಗ ಎರಡನೇ ಹೊತ್ತಿನ ಊಟ ಬಂದಿತ್ತು. ಬೆಳಕಾಗಿದೆ ಎಂದು ತಿಳಿಯಿತು. ಇನ್ನೇನು ಒಂದೂವರೆ ಗಂಟೆಯಲ್ಲಿ ಫ್ರಾನ್ಸಿನಲ್ಲಿರುತ್ತೇವೆ ಎಂದು ಪೈಲಟ್ ಬಿತ್ತರಿಸಿದ. ಕಿಟಕಿ ತೆರೆದು ಬೆಳ್ಳಿ ಮೋಡಗಳನ್ನು ಕಣ್ನಲ್ಲೇ ನುಂಗುತ್ತಾ ಕುಳಿತೆ. ಎದ್ರುಗಿದ್ದ ಟಿವಿಯಲ್ಲಿ ರವಿಶಂಕರನ ಸಿತಾರಿನ ಒಂದು ಅಲ್ಬಮ್ ಇತ್ತು.. ಕಿವಿಗಿಟ್ಟು ಮತ್ತೆ ತೂಕಡಿಸಿದೆ. ವಿಮಾನ ಫ್ರಾನ್ಸ್ ನಲ್ಲಿ ಇಳಿಯುವಾಗ ವಂಡರ್ ಲಾ ದ ಅನುಭವವಾಯಿತು, ಡುಬಕ್ ಡುಬಕ್ ಎಂದು ಮೋಡಗಳ ಮಧ್ಯೆ ಇಳಿಯುವಾಗ ಎದೆಯಲ್ಲಿ ನಿರ್ವಾತ ಸೃಷ್ಟಿಯಾಗಿತ್ತು. ಅಂತೂ ಇಂತೂ ವಿಮಾನ ನೆಲ ಮುಟ್ಟಿತು. ರನ್ ವೇಯಲ್ಲಿ ಓಡುವಾಗ ಮಂಗಳೂರ ಅಪಘಾತ ಯಾಕೆ ನೆನಪಾಯಿತೋ ಗೊತ್ತಿಲ್ಲ. ಮತ್ತೆ ಬಾಗಿಲಲ್ಲಿ ನಿಂತ ಸಖಿಯೋರ್ವಳು ನಮಸ್ತೇ ಎಂದು ಹಿಂದಿಯಲ್ಲಿ ಹೇಳಿದಾಗ ವಿಮಾನದ ಒಳಗೆ ಹಿಂದಿಯಲ್ಲಿ ಅತ್ಯಂತ ಕೆಟ್ಟದಾದ ಉಚ್ಛಾರಣೆ ಮಾಡಿ ಸೂಚನೆ ಕೊಡುತ್ತಿದ್ದವಳು ಇವಳಲ್ಲ ಎಂಬುದು ಖಾತ್ರಿಯಾಯಿತು. ವಿಮಾನದ ಬಾಗಿಲಿಗೆ ಜೋಡಿಸಿದ್ದ ಏಣಿಯನ್ನು ಇಳಿಯುತ್ತಾ ಮುಂದೆಲ್ಲಪ್ಪಾ ಎಂದು ನೋಡುಷ್ಟರಲ್ಲಿ, ಈಗ ನಾನಿರುವುದು ಫ್ರಾನ್ಸ್ ನಲ್ಲಿ ಎಂಬದು ವರ್ತಮಾನಕಾಲವಾಯಿತು.
ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ..
ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ್ಲಿ ಕುಳಿತಿದೆ. ಅಪ್ಪ ಜಗಳ ಮಾಡಿ ವಿಜಯಿಯಾದ ಉತ್ಸಾಹದಲ್ಲಿ ಕಿಡಕಿಯ ಹೊರಗೆ ನಿಂತು ನಿಂತು ಇಣುಕುತ್ತದೆ..ಅವರ ಹಿಂದಿನ ಸೀಟಿನಲ್ಲಿ ಸುಮ್ಮನೆ ಹೊರಗೆ ಕಣ್ಣು ಎಸೆದು ತಮಗೆ ಇದ್ಯಾವುದೂ ಸಂಬಂಧವಿಲ್ಲದವರಂತೆ ಕಿವಿಯಲ್ಲಿ ಮೊಬೈಲಿನ ತಂತಿ ಸಿಕ್ಕಿಸಿ ಯಾರೋ ಕುಳಿತಿದ್ದಾರೆ....ಥಟಕ್ಕನೆ ಮಗು ಕಿರುಚುತ್ತದೆ.. "ಅಪ್ಪಾ ಅಲ್ನೋಡು.. ಆನೆ".. ಹಿಂದಿದ್ದವನು ಆಗಷ್ಟೆ ನಿದ್ದೆಯಿಂದ ಎಚ್ಚರ ಆದಂತೆ, ತಪಸ್ಸಿನ ಧ್ಯಾನ ಭಂಗವಾದಂತೆ "ಎಲ್ಲಪ್ಪ ಆನೆ" ಅಂತ ಕಣ್ಣರಳಿಸುತ್ತಾನೆ"..
ಅರೆ ಹೌದು.. ಆನೆ.. ಅರೆ ಪಕ್ಕದಲ್ಲಿ ಜಿಂಕೆ.. ನವಿಲು.. ಏನದು.. ಅಲ್ಲೇ ರಸ್ತೆ ಬದಿಯಲ್ಲಿ ಶಿಲಾಬಾಲಿಕೆ ನಿಂತಿದ್ದಾಳೆ.. ಕನ್ನಡಿಯಲ್ಲಿ ಮುಖ ನೋಡುತ್ತಾ ಮೈ ಮರೆತಿದ್ದಾಳೆ. ಪಕ್ಕದಲ್ಲೇ ಹಸಿರು ವನ.. ಅದರೊಳಗೆ ಒಬ್ಬ ರಾಕ್ಷಸನ ಮುಖ.. ಅವನ ಕಣ್ಣಿನ ಕಪ್ಪು ಕಾಡಿಗೆಯಲ್ಲಿ ವಿಚಿತ್ರ ಚಿತ್ತಾರ.. ಅವನು ಭಯ ಹುಟ್ಟಿಸುವುದಿಲ್ಲ. ಮಗು ರಾಕ್ಷಸನನ್ನು ನೋಡಿ ಬೆಚ್ಚುವುದಿಲ್ಲ.. ಸ್ವಲ್ಪ ಮುಂದೆ ಯಕ್ಷಗಾನದ ಕಿರೀಟ.. ನೋಡುಗರಿಗೆ ಅರ್ಥವಾಗಲಿ ಎಂದು ಅದರ ಕೆಳಗೆ ಯಕ್ಷಗಾನ ಎಂದು ಬರೆಯಲಾಗಿದೆ. ಅದನ್ನು ಓದಲು ಮಗು ಅಪ್ಪನ ಸಹಾಯ ಪಡೆದಿದೆ..ಚೂಪು ಚೊಂಚಿನ ಹಕ್ಕಿಯೊಂದು ಕುಳಿತ ಕೊಂಬೆಯ ಮರ ಕಾಂಪೌಂಡು ಮುಗಿದ ಕಾರಣದಿಂದ ಅರ್ಧಕ್ಕೆ ನಿಂತುಬಿಟ್ಟಿದೆ. ಅದಕ್ಕೇನೂ ಬೇಸರ ಮಾಡಿಕೊಳ್ಳದೆ ಸಂಗೀತಗಾರನೊಬ್ಬ ವೀಣೆ ನುಡಿಸುತ್ತಲೇ ಇದ್ದಾನೆ. ಅವನ ಮುಖದಲ್ಲಿನ ಗಂಭೀರತೆ ನೋಡಿದ ನಾಟ್ಯರಾಣಿ ಹೆಜ್ಜೆ ತಪ್ಪಿದಂತೆ ಕಾಣುತ್ತಾಳೆ. ಅಪ್ಪ ಮಗನ ಎದುರು ಸೀಟಿನಲ್ಲಿ ಕೂತ ದಪ್ಪ ಕನ್ನಡಕದ ಯುವಕನೊಬ್ಬ ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹುದುಗಿಸಿದ ಮುಖ ತೆಗೆದು ಆಚೀಚೆ ನೋಡಿ ಮತ್ತದರಲ್ಲೇ ಹುದುಗಿಸಿದ್ದಾನೆ.
ಹಾದಿ ಪಕ್ಕದ ಭಿತ್ತಿಗಳಲ್ಲಿ ಪತ್ರಗಳಿಲ್ಲ.. ಚಿತ್ರಗಳಿವೆ.. ಬೆಂಗಳೂರನ್ನು ಬೃಹತ್ಗೊಳಿಸಲು ಹೊರಟಿರುವ ಮಹಾನಗರಪಾಲಿಕೆ ಮೆಜೆಸ್ಟಿಕ್ಕಿನ ರಸ್ತೆಯ ಇಕ್ಕೆಲಗಳಲ್ಲಿ ಆರ್ಟ್ ಗ್ಯಾಲರಿಯೊಂದರ ನಿರ್ಮಾಣದ ಹಂತದಲ್ಲಿದೆ. ಕೆಂಪೇಗೌಡ ಬಸ್ ನಿಲ್ದಾಣ ತಲುಪುವ ಹಲವು ಹಾದಿಗಳ ಇಬ್ಬದಿಯ ಗೋಡೆಗಳ ಮೇಲೆ ಸೃಜನಾತ್ಮಕ ಕಲಾಕೃತಿಗಳನ್ನು ಬಣ್ಣಗಳಿಂದ ಬರೆಯಿಸಲಾಗಿದೆ.. ಬರೆಯಿಸಲಾಗುತ್ತಿದೆ. ಮೊದಲೆಲ್ಲಾ ಸುಣ್ಣ ಬಳಿದಿದ್ದ ಗೋಡೆಗಳು ಉಗುಳುವವರ,ಅಂಟಿಸುವವರ, ಗೀಚುವವರ ಕಾರಣ ಅಂದಗೆಟ್ಟಿದ್ದವು.. ಈಗ ಸ್ವಚ್ಛತೆಯ ಜೊತೆಗೆ ಸುಂದರತೆಯೂ ಇರಲೆಂದು ಪಾಲಿಕೆ ಈ ಕಾರ್ಯ ಕೈಗೊಂಡಿದೆ. ಹೊರಗಿನಿಂದ ಅಪರೂಪಕ್ಕೆ ಬರುವವರಿಗೆ ’ಹಿಂದಿನ ಸಲ ಬಂದಾಗ ಇದಿರಲಿಲ್ಲ’ ಅನಿಸಿದರೆ, ಬೆಂಗಳೂರಲ್ಲೇ ಇದ್ದು ಆ ಕಡೆ ಹೋದವರಿಗೆ ’ಏನೋ ಒಂದ್ ಒಳ್ಳೆ ಕೆಲ್ಸ ಆಗ್ತಾ ಇದೆ’ ಅನಿಸುತ್ತದೆ. ಉದ್ಯಾನ ನಗರಿಯ ಅಂದ ಸವಿಯಲು ಬಂದವರಿಗೆ ರಸ್ತೆಯ ಎರಡೂ ಬದಿಗಳು ಸ್ವಾಗತಿಸುತ್ತವೆ.. ಸಚಿತ್ರವಾಗಿ...
ಆ ಗ್ಯಾಲರಿಗಳಲ್ಲಿ ಕರ್ನಾಟಕವಿದೆ.. ಕನ್ನಡವಿದೆ.. (ಕೆಲವೊಂದು ಕಡೆ ಸರಿಯಾಗಿಲ್ಲ!)..ಏನೇನೂ ಸಂಬಂಧವಿರದ ಹಲವು ಚಿತ್ರಗಳು ಅಕ್ಕ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತವೆ. ರಾಜಸ್ಥಾನದ ಒಂಟೆಗಳೂ ಮಂಡ್ಯದ ಕುರಿಮರಿಯೂ ಒಂದೇ ಕೆರೆಯ ನೀರು ಕುಡಿಯುತ್ತವೆ.. ಸರಣಿ ಚಿತ್ರಗಳು ರಸ್ತೆಯ ಪಕ್ಕದಲ್ಲಿ ಮಾರಾಟಕ್ಕೆ ಕೂತವರ ಆಸೆ ಕಂಗಳಂತೆ ನಮ್ಮನ್ನೇ ನೋಡುತ್ತವೆ.. ಈಗ ಒಣ ಗೋಡೆಗಳಲ್ಲಿ ಸಂತೋಷವಿದೆ.. ಪಯಣಿಗರಲ್ಲಿ, ದಾರಿಹೋಕರಲ್ಲಿ ಇವೆಲ್ಲಾ ಇಷ್ಟುದಿನ ಎಲ್ಲಿದ್ದವು ಎಂಬ ಕುತೂಹಲವಿದೆ... ಕಾರಿನ ಕಪ್ಪು ಗಾಜಿನಲ್ಲಿ ನೋಡುವ ಜನಕ್ಕೆ ಟೂರಿಗೆ ಹೋಗಿ ಇವನ್ನೆಲ್ಲಾ ನೋಡಿ ಮಜಾ ಮಾಡಲು ರಜೆ ಮಂಜೂರು ಮಾಡದಿರುವ ಮ್ಯಾನೇಜರ್ ಮೆಲೆ ಸಿಟ್ಟಿದೆ.. ಇವನ್ನೆಲ್ಲಾ ಇಂಟರ್ ನೆಟ್ ನಲ್ಲಿ ಒಂದು ಕ್ಲಿಕ್ಕಿನಲ್ಲಿ ನೋಡಬಹುದೆಂಬ ಹುಂಬತನವಿದೆ..
ಚಿತ್ರಗಳು ಮುಗಿಯುತ್ತಲೆ ಇಲ್ಲ.. ಮಗು ಕಣ್ಣುಗಳನ್ನು ದೊಡ್ಡದು ಮಾಡುತ್ತಲೇ ಇದೆ.. "ಅಪ್ಪಾ ಅದು ಆ ನೀಲಿ ಹಸಿರು ಬಣ್ಣದ ಹಕ್ಕಿ ಹೆಸರೇನು ?" ಜೀವನದಲ್ಲಿ ಕಾಗೆಯೊಂದನ್ನೇ ನೋಡಿ ಜಗತ್ತೇ ಕಪ್ಪು ಬಿಳುಪು ಎಂಬ ನಿರ್ಧಾರಕ್ಕೆ ಬಂದವನ ಹಾಗೆ ಮುಖ ಮಾಡಿ " ಯಾವ್ದೋ ಕಾಡು ಹಕ್ಕಿ" ಎನ್ನುತ್ತಾನೆ.. ಮಗು ಆ ಕಾಡು ಹಕ್ಕಿಯ ಮರೆತು ಜೋಡಿ ಚಿರತೆಗಳ ಚಿತ್ರದಲ್ಲಿ ಎರಡು ಬಾಲ ಎಲ್ಲಿದೆ ಎಂದು ಹುಡುಕತೊಡಗುತ್ತದೆ.. ಆ ಪ್ರಶ್ನೆ ಕೇಳಿಸಿಕೊಂಡ ಡ್ರೈವರ್ ಹಿಂದಿನ ಸೀಟಿನ ಹಿಂದಿನ ಇನ್ನೊಬ್ಬ ಈಗ ಆ ಹಕ್ಕಿ ಹೆಸರೇನಿರಬಹುದು ಎಂದು ಯೋಚಿಸುತ್ತಿದ್ದಾನೆ.. ಗೊತ್ತಾಗುವುದಿಲ್ಲ.. ನಾಳೆ ಆಫೀಸಿನಲ್ಲಿ ಗೂಗಲ್ ಮಾಡಿದರಾಯ್ತು ಎಂದು ಸಮಾಧಾನ ಮಾಡಿಕೊಳ್ಳುತಾನೆ ..ಕಂಡಕ್ಟರ್ ಹಿಂದಿನ ಬಸ್ ಸ್ಟಾಪಿನಲ್ಲಿ ಸರಿಯಾಗಿ ಸೀಟಿ ಊದಲಿಲ್ಲ ಎಂದು ಹೆಂಗಸೊಬ್ಬಳು ಗೊಣಗುತ್ತಾ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾಳೆ. ಅವಳ ಕಂಕುಳಲ್ಲಿದ್ದ ಮಗನೂ ಭಿತ್ತಿಚಿತ್ರಗಳನ್ನು ನೋಡುವುದರಲ್ಲಿ ಮಗ್ನನಾಗಿದ್ದಾನೆ
ಮೊದಲು ಅಲ್ಲೆಲ್ಲಾ ಬೇರೆಯೇ ಇತ್ತು. ಯಾರ್ಯಾರದ್ದೋ ಹುಟ್ಟುಹಬ್ಬಕ್ಕೆ ಯಾರ್ಯಾರೋ ಶುಭಾಶಯ ಕೋರಿದ ವಿವರಗಳು.. ಅಜ್ಞಾತ ಚಿತ್ರದ ಅಜ್ಞಾತ ನಾಯಕಿಯ ಭಂಗಿಗಳಿದ್ದವು.. ಅಖಿಲ ಒಕ್ಕೂಟಗಳ ಸಕಲ ಕಾರ್ಯಕಲಾಪಗಳು, ಧರಣಿಗಳು ಗೋಡೆ ತುಂಬಿದ್ದವು.. ಹೊಸದಾಗಿ ಬಂದವರಿಗೆ ಯಾವುದೋ ಕಾಲೇಜಿನ ಕೀಲಿ ಕಳೆದು ಹೋದ ಹಳೇ ನೋಟೀಸ್ ಬೋರ್ಡಿನ ಹಾಗೆ ಕಾಣುತಿದ್ದವು.. ’ಇಲ್ಲಿ ಭಿತ್ತಿಪತ್ರ ಅಂಟಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂಬ ವಾಕ್ಯವೇ ಸಾಕಾಗಿತ್ತು ಗೋಡೆಯ ಅಂದ ಹಾಳು ಮಾಡಲು.. ಕೆಲವಂತೂ ದೇವರ ಚಿತ್ರಗಳನ್ನು ಹೊತ್ತು ’ಹಾದಿಮೂತ್ರಿಕ’ರ ವಿರುದ್ಧ ಹೋರಾಡುತ್ತಿದ್ದವು. ಈಗ ಅದೇ ಗೋಡೆಗಳು ಹೊಸ ಮದುವೆಯಾದವರಂತೆ ಫಳಗುಡುತ್ತಿವೆ.. ತಮ್ಮ ಬಣ್ಣಗಳನ್ನು ನೋಡಿ ತಾವೇ ನಾಚಿವೆ.. ಹೋಗಿಬರುವವರೆಲ್ಲಾ ತಮ್ಮನ್ನು ನೋಡಲಿ ಎಂದು ರಸ್ತೆಯ ಅಂಚಿನವರೆಗೆ ಎದೆ ಉಬ್ಬಿಸಿ ನಿಂತಿವೆ.. ಅವುಗಳಿಗೀಗ ಪಾಲಕರಿಗೆ ತೇರಿನಲ್ಲಿ ಕಳೆದು ಹೋದ ಮಗ ಮನೆಗೆ ಬಂದಷ್ಟೇ ಸಂತಸವಾಗಿದೆ.
ಗೋಡೆಯ ಮೇಲಿನ ಚಿತ್ರಗಳು ಸ್ಥಬ್ದವಾಗಿದ್ದರೂ ನಮ್ಮೊಡನೆ ಅವು ಚಲಿಸುತ್ತಿರುವಂತೆ ಭಾಸವಾಗುತ್ತಿದೆ. ಚಿತ್ರಮಂದಿರದ ಸಿನಿಮಾ ರೀಲುಗಳಂತೆ ಗಿರಿ ಗಿರಿ ತಿರುಗುವಂತೆ ಕಾಣುತ್ತಿವೆ. ಈಗಷ್ಟೇ ಕೆತ್ತಿಟ್ಟಿರುವ ಪ್ರತಿಮೆಗಳ ಹೊಳಾಪಿದೆ ಅವಕ್ಕೆ.. ಕೆಲವು ಅಪೂರ್ಣ ಚಿತ್ರಗಳು ಕಲಾವಿದನಿಗಾಗಿ ಕಾಯುತ್ತಿರುವಂತೆ ಕಂಡರೆ ಇನ್ನೂ ಕೆಲವು ತಮ್ಮಷ್ಟಕ್ಕೆ ತಾವೇ ಪೂರ್ಣಗೊಳ್ಳುವ ಲಕ್ಷಣಗಳನ್ನು ತೋರುತ್ತಿವೆ... ಈಗ ಬಸ್ಸು ಮೇಲ್ಸೇತುವೆ ಹತ್ತುತ್ತಿದೆ.. ಅರೆ ಇಲ್ಲಿ ಮತ್ತೆ ಚಿತ್ರಗಳು.. ಗೋಲಗುಮ್ಮಟದ ಪಕ್ಕದಲ್ಲೇ ಮೈಸೂರು, ಐಹೊಳೆಯ ಪಕ್ಕದಲ್ಲಿ ನಾಗರ ಹೊಳೆ.. ಹುಲಿಯ ಪಕ್ಕದಲ್ಲೇ ಗಿಳಿ.. ಮಗುವಿನ ಜೊತೆ ಇನ್ನೂ ಹಲವರು ಕಿಡಕಿಯ ಹೊರಗೆ ಇಣುಕುತ್ತಿದ್ದಾರೆ.. ಸರಿಯಾಗಿ ಕಾಣದ ಒಂದಿಬ್ಬರು ಕತ್ತುದ್ದ ಮಾಡುತ್ತಾ ಕಿಡಕಿಯ ಬಳಿ ಕೂತಿದ್ದವರ ಮೈಮೇಲೆ ಬಿದ್ದು ಬೈಸಿಕೊಂಡಿದ್ದಾರೆ.. ಈಗ ಕನ್ನಡದ ಕವಿಗಳು ಮದುವೆ ಮನೆಯ ಪಂಕ್ತಿ ಊಟಕ್ಕೆ ಕೂತವರಂತೆ ಸಾಲಿನಲ್ಲಿ ಆಸೀನರಾಗಿದ್ದಾರೆ. ಬೇಂದ್ರೆ ಅಜ್ಜನ ನೆರೆತ ಕಿವಿಯ ಕೂದಲುಗಳು ಕಾರ್ನಾಡರ ಮುಖಕ್ಕೆ ಕಚಗುಳಿಯಿಡುತ್ತಿವೆ.. ಇದ್ದಕ್ಕಿದ್ದಂತೆ ಅಲ್ಲಿ ಸಿದ್ಧಿ ಜನಾಂಗದ ಮಹಿಳೊಯೊಬ್ಬಳ ಆರ್ತ ಮುಖ ಪ್ರತ್ಯಕ್ಷವಾಗುತ್ತದೆ.. ರೈತನೊಬ್ಬ ಮೇಕೆಗೆ ಹುಲ್ಲು ತಿನಿಸುವ ದೃಶ್ಯ, ಜನಪದ ವಾದ್ಯವೊಂದರ ಗುಂಗಿನಲ್ಲಿ ಹೊಳೆಬದಿ ಕೂತ ಹುಡುಗನೊಬ್ಬನ ನೋಟ, ಸುಗ್ಗಿ ಕುಣಿತದ ಹಳದಿ ಕೆಂಪು ತುರಾಯಿಗಳ ತುರುಬುಗಳು ’ನಮ್ಮನ್ನು ಕಾಪಾಡಿ’ ಎಂದು ಗೋಗರೆಯುತ್ತವೆ. ಒಟ್ಟಿನಲ್ಲಿ ಫ್ಲೈ ಓವರ್ ದಾಟುವಷ್ಟರಲ್ಲಿ ಬೇರೆ ಬೇರೆ ಕಿರುಚಿತ್ರಗಳ ತುಣುಕು ಪ್ರದರ್ಶನವೊಂದರಲ್ಲಿ ಭಾಗವಹಿಸಿ ಬಂದ ಅನುಭವವಾಗುತ್ತದೆ.
ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ.. ಅಲ್ಲಿ ಕನಸಿನ ಹಂಬಲವಿದೆ.. ಹೊಸ ಹುರುಪಿದೆ.. ಕಲ್ಲಾವಿದನ ಕಣ್ಣಿನ ಬಣ್ಣಗಳವು.. ಅವರ ಬದುಕಿನ ರೇಖೆಗಳು.. ಅಲ್ಲಿ ಸುಂದರ ನಗರದ ಕಲ್ಪನೆಯಿದೆ... ಸಾಮ್ರಾಜ್ಯಗಳ ವೈಭವವಿದೆ.. ತೇರಿನ ಗಲಾಟೆಯಿದೆ.. ಹಸಿರಿದೆ.. ಆ ಹಸಿರಲ್ಲಿ ಉಸಿರಾಡುವ ನಾವಿದ್ದೇವೆ.. ಬದುಕಿನ ಚಕ್ರದಡಿಯ ಗೊಂದಲಗಳಲ್ಲಿ ಕೊಸರಾಡುತ್ತಿದ್ದೇವೆ.. ಇನ್ನೂ ಉಸಿರಾಡುತ್ತಿದ್ದೇವೆ.. ಉಸಿರು ಅಮರವಾಗಲೆಂಬ ಪುಟ್ಟ ಆಶಯವಿದೆ...ಆ ಬಣ್ಣಗಳಲ್ಲಿ ಸುವಾಸನೆ ಇದೆ.. ಪೇಂಟರ್ ನ ಹಳೇ ಬ್ರಷ್ಶಿನ ಜುಮುರಿದೆ... ಅವು ಅಂಟಿಗೊಳ್ಳುತ್ತವೆ... ಗೋಡೆಯ ಬಿರುಕನ್ನೂ ತಾಜಮಹಲಿನ ಕಮ್ಮಾನು ಮಾಡುವ ಶಕ್ತಿಯಿದೆ.. ಅವು ನಮ್ಮದೇ ಆಕೃತಿಗಳು..ನಮ್ಮದೇ ಗುಣವಿದೆ ಅವಕ್ಕೆ.. ಅವು ನಮ್ಮ ಪ್ರತಿಬಿಂಬಗಳಾಗುತ್ತವೆ.. ಗೋಡೆಗಳು ಕನ್ನಡಿಗಳಾಗುತ್ತವೆ.... .. ಈ ಚಿತ್ರಗಳು ಜೀವಂತ ರೂಪಕಗಳು..
ಎಲ್ಲರೂ ಬಸ್ಸು ಇಳಿಯುವ ಆತುರದಲ್ಲಿದ್ದಾರೆ.. ಓಡುವ ಬಸ್ಸಿನಿಂದ ಇಳಿದು ಮುಗ್ಗರಿಸಿದಂತಾಗಿ, ಅಲ್ಲೇ ಸುಧಾರಿಸಿಕೊಂಡು ಯಾರಾದರೂ ನೋಡಿಬಿಟ್ಟರೋ ಎಂದು ಸುತ್ತ ಮುತ್ತ ಕಣ್ಣಾಯಿಸಿ ತಮ್ಮ ಪಾಡಿಗೆ ಹೋಗುತ್ತಿದ್ದಾರೆ.. ಅವರೆಲ್ಲರೂ ಇನ್ಯಾವುದೋ ಬಸ್ ಹತ್ತಿ ಮನೆಗೆ ಹೋಗುವ ತರಾತುರಿಯಲ್ಲಿದ್ದಾರೆ.. ಹಾಗೆ ಹೋಗುವಾಗ ಮತ್ತೆ ಈ ಚಿತ್ರಸಂತೆಯಲ್ಲಿ ಓಡಾಡುವ ಖುಷಿಯಲ್ಲಿದ್ದಾರೆ.. ಕೆಲವರು ಟಿಕೆಟಿನ ಹಿಂಬದಿಯ ಕಂಡಕ್ಟರ ಬ್ರಹ್ಮ ಲಿಪಿ ಓದಲಾಗದೆ ಅವನು ಕೊಟ್ಟಷ್ಟು ಕಿಸೆಯಲ್ಲಿ ಹಾಕಿಕೊಂಡು ಬಡಬಡ ನಡೆಯುತ್ತಿದ್ದಾರೆ. ಅದನ್ನೂ ಮರೆತ ಇನ್ನೂ ಕೆಲವರು ಹತ್ತಿರದ ಎ.ಟಿ.ಎಂ ಗೆ ನುಗ್ಗಿ ಮಿನಿ ಸ್ಟೇಟ್ ಮೆಂಟ್ ತೆಗೆದು ಪದೇ ಪದೇ ಓದುತ್ತಿದ್ದಾರೆ.. ಅಪ್ಪ ಮಗ ಇಬ್ಬರೂ ಓವರ್ ಬ್ರಿಡ್ಜಿನ ಮೆಟ್ಟಿಲೇರುತ್ತಿದ್ದಾರೆ. ಕೆಂಪು ಲಂಗ ತೊಟ್ಟ ಹೆಂಗಸೊಬ್ಬಳು ಧಡಾರನೆ ಅವರ ಮುಂದೆ ಬಿದ್ದು ಒದ್ದಾಡುತ್ತಾಳೆ.. ’ಅಯ್ಯಾ ಅಮ್ಮಾ’ ಎಂದು ಕೈ ಮುಂದೆ ಮಾಡುತ್ತಾಳೆ.. ಬ್ರಿಡ್ಜಿನ ಆ ತುದಿಗೆ ಕಲಾವಿದನೊಬ್ಬ ಈಗಷ್ಟೇ ಬಂದು ಕೂತು ಹೊಸ ಚಿತ್ರದ ರಚನೆಯಲ್ಲಿದ್ದಾನೆ.. ಅವನ ಕುಂಚಗಳಲ್ಲಿ ಈಗ ಆ ಹೆಂಗಸಿನ ಮುಖ ಮೂಡಬಹುದೆಂಬ ಆಸೆಯಿಂದ ಆ ಪೋರ ಅರ್ಧದಾರಿಯಲ್ಲೇ ನಿಂತು ಮಿಕಿ ಮಿಕಿ ನೋಡುತ್ತಿದ್ದಾನೆ.
ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ
ರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ..
ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲಿ ಹಾರುತ್ತೇನೆ ಎಂಬ ಹಕ್ಕಿಯನ್ನು ಬಾನಿಗೆ ಬಿಟ್ಟ ಕಾದಂಬರಿ - 'ಬರೀ ಎರಡು ರೆಕ್ಕೆ'. ಒಂದಿಪ್ಪತ್ತೈದು ಪಾತ್ರಗಳು, ದೈನಂದಿನ ಹಪಿಹಪಿಯನ್ನು ತಮಗೆ ಬಂದಂತೆ ನಿಭಾಯಿಸುತ್ತಲೇ ಸಾಮಾಜಿಕ ಬದಲಾವಣೆಯೊಂದಕ್ಕೆ ಕಾರಣವಾಗುವ ಅತೀ ಸಹಜ ಕಥೆಯಿದು. ಇಲ್ಲಿ ಯಾರಿಗೂ ತುಡಿತವಿಲ್ಲ.. ಹೊಸದೊಂದನ್ನು ಮಾಡಬೇಕೆಂಬ ಆಕಾಂಕ್ಷೆಯಿಲ್ಲ.. ತಾವಾಯಿತು ತಮ್ಮ ಬದುಕಾಯಿತು ಎಂತಿಪ್ಪ ಬದುಕುಗಳು, ತಮ್ಮ ಸ್ವಾರ್ಥಕ್ಕೆ ತಮ್ಮ ಹಿತ ಕಾಯುವುದಕ್ಕೆ ಮಾಡಬೇಕಾದುದನ್ನು ಮಾಡಿಕೊಂಡರೂ, ಅನಾಥ ಕ್ರಾಂತಿಯೊಂದು ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡಿರುತ್ತದೆ.. ಸರಳೀಕೃತ ಸಮಾಜವೂ ಸಹ ಹೇಗೆ ಕಾಲದೊಂದಿಗೆ ಬೆರೆತು, ತನ್ನ ಜನರನ್ನೂ ಮೀರಿ ಬೆಳೆಯುತ್ತದೆ ಎಂಬುದನ್ನು ಬಹು ಸಮರ್ಥವಾಗಿ ನಿಭಾಯಿಸಿದ್ದಾರೆ- ಸುನಂದಾ ಕಡಮೆ.
ಯಾವ ಕಾಲಕ್ಕೂ ಹೊಂದಿಕೊಳ್ಳುವ ಮದುವೆ, ಮಕ್ಕಳು, ಜಾತ್ರೆ, ಓಡಿ ಹೋಗುವವರು, ಮರಳಿ ಬರುವವರು ಇತ್ಯಾದಿ ಪಾತ್ರಗಳ ಪ್ರಪಂಚ ಈ ಕಾದಂಬರಿ. ಗಂಡನ ವೈಕುಂಠ ಸಮಾರಾಧನೆಯ ದಿನವೇ ಮಗಳ ಮದುವೆ ಮಾಡುವ ಬಗ್ಗೆ ಆಲೋಚಿಸುವ ಹೆಣ್ಣೊಬ್ಬಳ ಸ್ತ್ರೀ ಸಹಜ ಜಂಜಾಟದಿಂದ ಕಾದಂಬರಿ ಆರಂಭವಾಗುತ್ತದೆ. ಮೊದಲ ಅಧ್ಯಾಯದಲ್ಲಿ ಮಧ್ಯಮ ವರ್ಗದ ಕುಟುಂಬವೊಂದನ್ನು ಪರಿಚಯಿಸುತ್ತಾ, ಒಂದು ಮದುವೆಗೆ ಮುಹೂರ್ತ ಇಡಲಾಗುತ್ತದೆ. ಹದಿನೆಂಟು ವರ್ಷದ ಹಿಂದೆ ಅಕ್ಕ ಸರೋಜಿನಿಯ ಮಾಡುವೆ ಮಾಡುವ ಬಗ್ಗೆ ಅಮ್ಮನಿಗೆ ವಚನವಿತ್ತ ದಿಗಂಬರ, ಈಗ ತಾನೇ ಮದುವೆಗೆ ಸಿದ್ಧನಾಗುತ್ತಾನೆ. ಸರೋಜಿನಿ ಮದುವೆಯಾಗದೆ ದೂರದ ಊರಿನಲ್ಲಿ ಶಿಕ್ಷಕಿಯಾಗಿಯೇ ಉಳಿದುಬಿದುತ್ತಾಳೆ. ಮದುವೆಯಾಗಿ ಅತ್ತೆ-ಸೊಸೆ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಹೆಣಗಾಡುವ ದಿಗಂಬರ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುವುದನ್ನು ಜಾಸ್ತಿ ಮಾಡುತ್ತಾನೆ. ಆಗಾಗ ಭೇಟಿ ಕೊಡುವ ಅಕ್ಕ ಸರೋಜಿನಿ- ಪ್ರತಿ ಸಲ ಬಂದಾಗಲೂ ಹೊಸದೊಂದು ವಿಷಯ ಹೊತ್ತು ತರುವುದನ್ನು ಒಳ್ಳೆಯ ಬೆಳವಣಿಗೆ ಅನ್ನಬೇಕೋ, ಕೆಟ್ಟದ್ದು ಅನ್ನಬೇಕೋ ಎನ್ನುವುದನ್ನು ತಿಳಿಯದೇ ಬಾಯಲ್ಲಿ ಎಲೆ-ಅಡಿಕೆ ತುಂಬಿಕೊಂಡು ಓಡಾಡುವುದನ್ನು ಕಲಿತು ಅಸಹಾಯಕತೆಯನ್ನು ಮೆರೆಯುತ್ತಾನೆ ..
ಇನ್ನೊಂದೆಡೆಯಲ್ಲಿ ಅವರ ಮನೆಯ ಕೆಲಸದ ಸಣ್ಣಿಯ ಪ್ರಪಂಚ - ಅವಳ ನಾದಿನಿಯ ಪ್ರೇಮ ಪ್ರಸಂಗ, ಗಂಡನ ಆರ್ಭಟ , ಆಚೀಚೆ ಮನೆಯವರ ಪರಾಪರದ ಮಾತುಗಳು ಮುಂತಾದ ವಿವರಗಳಿಂದ ತುಳುಕುತ್ತಿರುತ್ತದೆ. ಜಾತ್ರೆಯ ದಿನದಂದು ಸಣ್ಣಿ ತೋರಿದ ಒಂದು ಸಣ್ಣ ನಿರ್ಲಕ್ಷ , ಅವಳ ನಾದಿನಿಯು ಯಾರೋ ಬ್ರಾಹ್ಮಣರ ಹುಡುಗನ ಜೊತೆ ಓಡಿ ಹೋಗುವುದರೊಂದಿಗೆ ಹೊಸ ರೂಪ ಪಡೆಯುತ್ತದೆ.. ಇನ್ನು ಜಾತಿ ಕಲಹ ಅದೂ ಇದೂ ಅಂತ ಕಾದಂಬರಿ ಮುಂದುವರಿಯುತ್ತದೆ ಎಂದು ಭಾವಿಸಿದವರಿಗೆ ಭಯಂಕರ ನಿರಾಸೆ ಇಟ್ಟಿದ್ದಾರೆ ಲೇಖಕಿ.. ತಂಗಿ ಓಡಿ ಹೋದ ದು:ಖದಲ್ಲಿ ಕುಡಿಯುವುದನ್ನು ಶುರುಮಾಡುವ ಸಣ್ಣಿಯ ಪತಿ ದೇವು, ದಿನಾ ರಾತ್ರಿ ಬಂದು ಹೆಂಡತಿಗೆ ಹೊಡೆಯುವುದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾನೆ..
ಶ್ರೀಮಂತರ ಮಗಳೊಬ್ಬಳು ಮಧ್ಯಮ ವರ್ಗಕ್ಕೆ ಸೊಸೆಯಾಗಿ ಬಂದಾಗ ಏನು ಅನುಭವಿಸುತ್ತಾಳೋ ಅದನ್ನೆಲ್ಲಾ ದಿಗಂಬರನ ಹೆಂಡತಿ ಅರುಂಧತಿ ಅನುಭವಿಸುತ್ತಾಳೆ. ದಿಗಂಬರನ ನಿರ್ಲಕ್ಷ, ಅತ್ತೆಯ ಬೆಚ್ಚು-ಚುಚ್ಚು ನುಡಿಗಳು.. ಇನ್ನೂ ಮಗುವಾಗಿಲ್ಲವೆಂಬ ಮೂದಲಿಕೆಗಳು.. ಅಪ್ಪನ ಮುಂದೆ ಖುಷಿಯ ನಾಟಕಗಳು.. ಇತ್ಯಾದಿಗಳೆಲ್ಲಾ ಅತೀ ಸಹಜವೆಂಬಂತೆ ಮೂಡಿಬಂದಿದೆ, ಎಲ್ಲಾ ನಡೆಯುತ್ತಿದ್ದರೂ ಓದುಗನಿಗೆ ಆಗಬಾರದ್ದೇನೂ ಆಗಿಲ್ಲ ಎಂಬ ಸಮಾಧಾನ ಮೂಡುತ್ತದೆ.. ಅತ್ತೆ-ಸೊಸೆ ಎಂದ ಮೇಲೆ ಇಷ್ಟೂ ಇರದಿದ್ದರೆ ಹೇಗೆ ಎಂಬ ಭಾವ ಮೂಡುವ ಜಾಗದಲ್ಲೇ ಲೇಖಕಿ ಗೆದ್ದಿದ್ದು ಸ್ಪಷ್ಟವಾಗಿರುತ್ತದೆ.. ಕೋಣೆಯಲ್ಲಿ ಹಾವು ಕಂಡ ಆಘಾತದಲ್ಲಿ ಮೂಕಿಯಾಗುವ ಅರುಂಧತಿ, ಕೊನೆ ಕೊನೆಗೆ ಏನೂ ಆಗದ ಸ್ತ್ರೀ ಪಾತ್ರವಿದು ಎಂದೆನಿಸಿದ್ದೂ ಉಂಟು.. ಆಟಕ್ಕಿಲ್ಲ, ಊಟಕ್ಕುಂಟು ಎಂಬಂತಹ ಪಾತ್ರವಾಗಿ ಪರಿವರ್ತನೆಯಾಗಿ ಏನನ್ನೋ ಹೇಳಲು ಹೊರಟ- ಹೇಳಲಾಗದ ಮೂಕ ಪಾತ್ರ ಹೇಳಲು ಇನ್ನೂ ಇದೆ ಎಂಬುದರ ಪ್ರಸ್ತುತಿಯಿರಬಹುದು.
ಮಧ್ಯಮ ಆರ್ಥಿಕ ವರ್ಗದ ಕುಟುಂಬದಲ್ಲಿನ ಸ್ತ್ರೀ ವ್ಯಾಕುಲಗಳು ಅತ್ತೆ-ಸೊಸೆ ಜಗಳಗಳಲ್ಲಿ, ಸರೋಜಿನಿಯ ಆವೇಶಗಳಲ್ಲಿ, ದಿಗಂಬರನ ಅಸಹಾಯಕತೆಗಳಲ್ಲಿ ವ್ಯಕ್ತವಾದರೆ, ಬಡತನದ ಸ್ತ್ರೀ ಮುಖವು ಸಣ್ಣಿಯ ನರಳಾಟಗಳಲ್ಲಿ , ದೇವು ಬೀಸುವ ಹೊಡೆತಗಳಲ್ಲಿ, ಓಡಿಹೋದ ಮಾಲಾ ಮತ್ತು ನೆರೆಯ ಸೋಮಿ ಜಟ್ಟಮ್ಮರ ಮಾತುಗಳಲ್ಲಿ ಚಿತ್ರಿತವಾಗಿದೆ. ಯಾವಾಗ ಈ ಎರಡೂ ಪ್ರವಾಹಗಳು ಸೇರುತ್ತವೆಯೋ ಆಗ ಕಾದಂಬರಿಯ ಎಲ್ಲಾ ಪಾತ್ರಗಳಿಗೆ ಎರಡೆರಡು ರೆಕ್ಕೆ ಮೂಡುತ್ತದೆ.. ಸರೋಜಿನಿಯ ಮಾತು ಕೇಳಿ , ಸಣ್ಣಿ ತನ್ನ ಹೊಡೆತ ತಪ್ಪಿಸಿಕೊಳ್ಳಲು - ತನ್ನ ಗಂಡನ ಕುಡಿತ ತಪ್ಪಿಸಲೇ ಬೇಕೆಂಬ ನಿರ್ಧಾರ ಮಾಡಿ ಸಾರಾಯಿ ಅಂಗಡಿಗೆ ಬೆಂಕಿ ಹಚ್ಚುತ್ತಾಳೆ.. ಅದನ್ನು ತಿಳಿದ ದೇವು ಅವಳಿಗೆ ಹೊಡೆಯ ಬಂದಾಗ ಬೆಟ್ಟ ಹತ್ತಿ ಓಡಉವ ಸನ್ನಿವೇಶದಲ್ಲಿ ರೆಕ್ಕೆ ಮೂಡಿದಂತಿತ್ತು ಎಂದು ಕಾದಂಬರಿಯ ಅರ್ಥವನ್ನು ಸೂಚ್ಯವಾಗಿ ಬಿಂಬಿಸಿದ್ದಾರೆ.. ಸರೋಜಿನಿಯೂ ಸಹ ಬೆಟ್ಟ ಅಲೆಯುವಾಗೆಲ್ಲಾ ತನಗೆ ಎರಡು ರೆಕ್ಕೆ ಬಂದಂತೆ ಭ್ರಮಿಸುತ್ತಾಳೆ.. ಎರಡು ರೆಕ್ಕೆಯೆಂಬುದನ್ನು ಸ್ವತಂತ್ರದ ಸ್ವಚ್ಚಂದದ ಭಾವವಾಗಿ ಬಳಸಿ ಸುನಂದಾ ಸಾಮಾಜಿಕ ಬದಲಾವಣೆಯ ಹಾದಿಯನ್ನು ಸ್ವಚ್ಛಗೊಳಿಸುತ್ತಾರೆ.
ಸರೋಜಿನಿ ಮದುವೆಯಾಗದೇ ಮಗುವೊಂದನ್ನು ದತ್ತು ತೆಗೆದುಕೊಳ್ಳುವುದು, ಊರವರು ಅದನ್ನು ಆಡಿಕೊಳ್ಳುವುದು , ಅದನ್ನು ಕೇಳಿ ತಾಯಿಗೆ ಹುಚ್ಚು ಹಿಡಿಯುವುದು, ಸಣ್ಣಿ ಕುಡುಕರಿಗೆ ಕಾಡುವುದು, ಸಾರಾಯಿ ಅಂಗಡಿ ಇಟ್ಟಿದ್ದ ಪಚ್ಚನ ಹೆಂಡತಿಯೇ ಅವನನ್ನು ಪೋಲಿಸರಿಗೆ ಹಿಡಿದು ಕೊಡುವುದು, ಹೆಂಡ ಕುಡಿದು ಇನ್ಯಾರೋ ಸಾಯುವುದು, ಹೀಗೆ ಹಲವು ಸರಣಿ ಘಟನೆಗಳು ತಂತಾನೇ ನಡೆದು ಹೊಸ ಬದಲಾವಣೆಗೆ ಕಾರಣವಾಗುತ್ತದೆ. ನಿಧಾನವಾಗಿ ಈ ವಿಷಯಗಳೆಲ್ಲಾ ಸಾಮಾನ್ಯದ ಜೊತೆ ಬೆರೆತು ಸರ್ವಲೀನವಾಗುತ್ತವೆ. ಅಲ್ಲಿಗೆ ಕಾದಂಬರಿಗೆ ಬಿಡುಗಡೆ ಸಿಗುತ್ತದೆ, ಬರೀ ಎರಡು ರೆಕ್ಕೆ ಇರುವ ಹಕ್ಕಿ ಆಗಸದಲ್ಲಿ ಹಂಗಿಲ್ಲದೆ ಹಾರುವುದನ್ನು ಕಂಡ ಮನುಷ್ಯ, ಸ್ವಂತಿಕೆಯಿಂದ ತನ್ನ ಮನಸ್ಸಿಗೆ ಎರಡು ರೆಕ್ಕೆ ಮೂಡಿಸಿ ಹೊಸ ದಿಗಂತದಲ್ಲಿ ಸ್ವಚ್ಛಂದಿಂದ ಹಾರಲಿ ಎಂಬುದನ್ನು ಕಥಾಸಂದೇಶ ಎಂದರೆ ತಪ್ಪಿಲ್ಲ.
ಶೈಲಿಯಲ್ಲಿ ಸಹಜತೆ, ವಿವರಗಳಲ್ಲಿ ಸೂಕ್ಷ್ಮತೆ ಸುನಂದಾ ಕಥೆಗಳ ಆಕರ್ಷಣೆ. ಮೊದಲ ಕಾದಂಬರಿಯಾದರೂ ಪೂರ್ಣತೆ ಸಾಧಿಸಿದ್ದಾರೆ.. ದಿಗಂಬರನ ಮದುವೆ ವಿವರಗಳಲ್ಲಿ, ಉತ್ತರ ಕನ್ನಡದ ಸಮುದಾಯವೊಂದರ 'ಲಗ್ನ ಚಿತ್ರಣ' ಅಧ್ಬುತವಾಗಿ ಮೂಡಿಬಂದಿದೆ. ಅಂಕೋಲಾದ ಬಂಡೀಹಬ್ಬದ ಪೂರ್ಣ ವಿವರಗಳು ಇಲ್ಲದಿದ್ದರೂ ಕಥೆಗೆ ಪೂರಕವಾಗಿ ಸಿದ್ಧಪಡಿಸಿದ್ದಾರೆ. ಯಶವಂತ ಚಿತ್ತಾಲರಿಗೆ ಹಾಗೂ ಜೆ.ಎಚ್.ನಾಯಕರಿಗೆ ಅರ್ಪಿಸಿದ ಈ ಕಾದಂಬರಿಯ ಮುನ್ನುಡಿಯಲ್ಲಿ ತಾನು ಎಂಟು ತಿಂಗಳು ಈ ಕಾದಂಬರಿಗೆ ತೆಗೆದುಕೊಂಡೆ ಎನ್ನುತ್ತಾರೆ ಸುನಂದಾ.. ಕಾದಂಬರಿಯ ನನಗಿಷ್ಟವಾದ ಪರಿಚ್ಛೇದ ಕೆಳಗಿದೆ:
" ಚೂರೇ ಹೊಯ್ದಾಡುವ ದೀಪದ ಬೆಳಕಿನ ಸನ್ನಿಧಿಯಲ್ಲಿ ಕೂತ ಗಿರಿಯಮ್ಮ ದೇವಿಯ ಕಪ್ಪು ಕಲ್ಲಿನ ವಿಗ್ರಹಕ್ಕೆ ಜೀವವಿದೆ ಅನಿಸಲು ಶುರುವಾಯಿತು ಸಣ್ಣಿಗೆ. ಹಾಗನಿಸಿದ್ದೇ ತಾನಿಲ್ಲಿ ಒಂಟಿಯಾಗಿಲ್ಲ ಎಂಬ ಧೈರ್ಯ ಅವಳನ್ನು ಮುತ್ತಿಕೊಂಡಿತು. ಬಂಭಿಹಬ್ಬಗಳಲ್ಲಿ ಹೀಗೆ ದೇವಿಗೆ ಕಾಯಿ ಒಡೆಯಲು ಅಕ್ಕಪಕ್ಕದ ಸೋಮಿ ಜಟ್ಟಮ್ಮರ ಜೊತೆ ಬಂದಾಗಲೂ ಈ ಗುಡಿ ಇಷ್ಟು ದೊಡ್ಡದಾಗಿ ಕಂಡಿರಲಿಲ್ಲ. ಅಲ್ಲಲ್ಲಿ ಬಾಡಿದ ಹೂವಿನ ರಶಿ, ಮುದ್ದೆ ಮಾಡೊಗೆದ ಕಾಗದ, ಅರ್ಧ ಉರಿದುಳಿದ ಅಗರಬತ್ತಿ, ಮೇಲೆ ಕಟ್ಟಿದ ಬಳ್ಳೀಗೆ ಒಣಹಾಕಿರುವ ಸಣ್ಣ ವಸ್ತ್ರ, ಎಣ್ಣೆಯ ಜಿಗುಟಿನಿಂದ ಕಪ್ಪಾಗಿರುವ ದೀಪವಿಟ್ಟ ಜಾಗೆ, ದೇವಿಯ ಎದುರೇ ಎತ್ತರಕ್ಕೆ ನಿಂತಿರುವ ಗರುಡಗಂಬ ಏನೆಲ್ಲವೂ ಅವಳಿಗೆ ತನ್ನ ಮನೆಯ ಒಂದು ಭಾಗವಾಗಿಯೇ ಕಂಡವು. ಕಾಣೆಯಾದ ಮಾಲಿ ಆ ಕ್ಷಣ ಮರೆತೇ ಹೋಗಿದ್ದಳು."
ಯಾರೋ ಹೆಂಗಸೊಬ್ಬಳು ಬಣ್ಣ ಬಳಿದುಕೊಂಡು ಆಗಸಕ್ಕೆ ಗೋಲಗಳನ್ನು ಎಸೆಯುತ್ತಿರುವ ಅಥವಾ ಆಕಾಶದಿಂದ ಬಂದ ವರ್ತುಲಗಳನ್ನು ಸ್ವೀಕರಿಸುತ್ತಿರುವ ಮುಖಪುಟವೊಂದನ್ನು ವಿನಯ ಕುಮಾರ ಸಾಯ ಚಿತ್ರಿಸಿದ್ದಾರೆ. ಅದಕ್ಕೆ ಸರಿಯಾಗಿ ಕೈಯಲ್ಲಿ ಗೀಚಿದಂತ 'ಬರೀ ಎರಡು ರೆಕ್ಕೆ' ಎಂಬ ತಲೆಬರಹವಿದೆ.. ಕಾದಂಬರಿಯು ತನ್ನ ತೀವ್ರತೆಯ ಘಟ್ಟ ತಲುಪಿದಾಗ ಬರುವ ಎರಡು ಸಾಲುಗಳೂ ಮುಂಪುಟದಲ್ಲಿವೆ. ನೊರೈವತ್ತು ಬೆಲೆಯನ್ನು ನಿಗದಿ ಪಡಿಸಿದ ವಸುಧೇಂದ್ರರ ಛಂದ ಪುಸ್ತಕದ ಚಂದದ ಪುಸ್ತಕ ಬರೀ ಎರಡು ರೆಕ್ಕೆ... ಉತ್ತರ ಕನ್ನಡದ ಲೇಖಕರೆಲ್ಲಾ ಒಂದೇ ತರಹದ ಕಥಾಲೋಕವನ್ನು ಸೄಷ್ಟಿಸುತ್ತಾರಲ್ಲಾ ಯಾಕೆ? ಎಂಬ ಪ್ರಶ್ನೆಗೆ ಉತ್ತರ-ಕನ್ನಡ ಅಂತ ವಿವೇಕ ಶಾನುಭಾಗರು ಹೇಳಿದ್ದರು ಎಂದು ನನಗೆ ಇನ್ಯಾರೋ ಒಮ್ಮೆ ಹೇಳಿದ್ದರು. ಅಂತಹ ಉತ್ತರ ಕನ್ನಡದ ಧ್ವನಿ ಹೊರಡಿಸುವ ಕಾದಂಬರಿಯೊಂದನ್ನು ಯಾವುದರಲ್ಲೂ ಕಡಿಮೆಯಿಲ್ಲದಂತೆ ಬರೆದಿದ್ದಾರೆ ಸುನಂದಾ ಪ್ರಕಾಶ ಕಡಮೆ. ಓದಿ ಮುಗಿಸಿದ ತಕ್ಷಣ ಇದೊಂದು ಸ್ತ್ರೀ-ಕ್ರಾಂತಿಯೊಂದರ ಸಹಜ ಕಥೆ ಎಂದೆನಿಸಿದರೂ ಅದಲ್ಲ ಎನ್ನುವುದು ಮಾರನೇ ಕ್ಷಣಕ್ಕೆ ಹೊಳೆದಿರುತ್ತದೆ. ಇಲ್ಲಿ ಅವ್ಯಕ್ತ ಪಾತ್ರಗಳು ಸೃಷ್ಟಿಸುವ ಭಾವಲೋಕ ಅವರವರ ಜೀವನದಲ್ಲಿ ಪ್ರತ್ಯೇಕವಾಗಿದ್ದರೂ, ಓದುಗನಿಗೆ ಒಂದೇ ಆಗಿರುವುದು ಈ ಕೃತಿಯ ಪ್ಲಸ್ ಪಾಯಿಂಟ್..
ನಾನೂ ಅಪ್ಪನಂತಾಗಬೇಕು..
ನಾನು ಸಣ್ಣವನಿದ್ದಾಗ ಒಂಥರಾ ಕ್ರೀಮ್ ಕಲರಿನ ಉರುಟುರುಟು ಪಾಪಿನ್ಸ್ ನ್ನು ದಿನಾ ಒಂದರಂತೆ ಕೊಡುತ್ತಿದ್ದಾಗಿನದೇ ಅಪ್ಪ ಇವತ್ತಿನ ಫೋನಿನಲ್ಲಿ ಸಿಕ್ಕಾಗಲೂ ಇದ್ದಾನೆ. ನಿನ್ನೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ತನ್ನ ಕವನ ವಾಚಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದನ್ನು ಅದೇ ಹಳೆಯ ಚಿಕ್ಕ ಮಕ್ಕಳ ಮುಗ್ಧತೆಯಲ್ಲಿ ವಿವರಿಸಿದಾಗ ಇವತ್ತೊಂದು ಲೇಖನ ಬರೆಯಲೇ ಬೇಕು ಎಂದು ನಿರ್ಧರಿಸಿ ಬಿಟ್ಟೆ. ಅಪ್ಪನ ಕುರಿತು ಒಂದು ಲೇಖನ ಬರೀಬೇಕು ಅಂತ ಅಂದುಕೊಂಡಿದ್ದಷ್ಟೇ ನಿಜ..ಆದರೆ ಏನು ಬರೆಯಬೇಕು ಎಂಬುದು ಗೊತ್ತಾಗುತ್ತಿಲ್ಲ.. ಎಲ್ಲಿಂದ ಶುರು ಮಾಡಿ ಎಲ್ಲಿ ಮುಗಿಸಲಿ ಎಂಬುದೇ ಒಗಟಾಗಿದೆ.
ನನಗೆ ಅಪ್ಪನಲ್ಲಿ ಎಲ್ಲವೂ ಕಾಣುತ್ತದೆ. ಮಕ್ಕಳು ಹೇಳಿದ್ದಕ್ಕೆಲ್ಲಾ ಹೂಂ ಅನ್ನುವ ಪ್ರೀತಿಯಿದೆ..ಯಾವುದೋ ಮೊಬೈಲಿನಲ್ಲಿ ಬರುವ ಹೊಸ ಆಟವನ್ನು ದಿನಗಟ್ಟಲೆ ಕೂತು ಆಡುವಷ್ಟು ಜೀವನ ಪ್ರೀತಿಯಿದೆ... ಆ ಆಟದ ಪ್ರತಿ ಹಂತವನ್ನು ತನ್ನ ಡೈರಿಯ ಪುಟಗಳಲ್ಲಿ ಕೂತು ಚಿತ್ರಿಸುವ ಆಸಕ್ತಿಯಿದೆ.. ಒಬ್ಬನೇ ಕುಳಿತು ಲಾಪ್ಟಾಪಿನ ಪೇಂಟ್ ಅಪ್ಲಿಕೇಶನ್ ಹುಡುಕಿ ತೆಗೆದು ಬಣ್ಣ ಹಚ್ಚುವ ಉತ್ಸಾಹ ಇದೆ.. ದಿನಂಪ್ರತಿ ಆದ ಕರ್ಚು ವೆಚ್ಚವನ್ನು ಎಲ್.ಐ.ಸಿ ಯ ಡೈರಿಯ ಪುಟದ ತುಂಬಾ ಬರೆದು ಕೂಡಿಸಿ ಕಳೆದು ತಲೆಕೆರೆದುಕೊಳ್ಳುವ ಹುಮ್ಮಸ್ಸಿದೆ.. ದಿನಾ ಫೋನು ಮಾಡಿದರೂ ವಿಷಯಕ್ಕೆ ಕೊರತೆ ಬಾರದಂತ ಮಾತಿದೆ.. ಬೇರೆಯವರು ತಪ್ಪು ಮಾಡಿದಾಗ ಹೆದರಿಸಲು ಮೌನವಿದೆ..
ಇತ್ತೀಚಿಗೆ ಅಂದರೆ ನನಗೆ ಬುದ್ಧಿ ಬಂದಾಗಿನಿಂದ (?), ಅಪ್ಪ ಕವಿತೆ ಬರೆದಾಗ ಮೊದಲು ಓದುವುದು ಸುಮಾರಿಗೆ ನಾನೆ.. ಒಂದೊಂದು ಸಲ ತಂಗಿ.. ಓದಾದ ಮೇಲೆ ಅಪ್ಪ ಹೇಗಿದೆ ಅಂತೆಲ್ಲ ಕೇಳುವುದಿಲ್ಲ.. ಚೆನ್ನಾಗಿದೆ ಅಂದರೆ ನಮಗರ್ಥವಾದ ಅದರ ಭಾವವನ್ನು ಕೇಳಬಹುದು.. ಇಲ್ಲದಿದ್ದರೆ ಅದೂ ಇಲ್ಲ.. ಸಾಲು ಸಾಲು ಕವಿತೆಗಳನ್ನು ಬರೆದು ಸುಮ್ಮನೆ ಡೈರಿ ತುಂಬಿಸಿದ್ದಾನೆಯೇ ಹೊರತು, ಇದು ತಾನು ಬರೆದ ಕೃತಿ ಎಂದಾಗಲೀ, ತನ್ನ ರಚನೆಯೆಂದಾಗಲೀ ಅದನ್ನು ಹೊರಜಗತ್ತಿಗೆ ಪರಿಚಯಿಸಿ ಬೀಗುವ ಗೊಡವೆಗೇ ಹೋಗಿಲ್ಲ.. ಹೌದು ಅಪ್ಪನ ಕೆಲಸದ ರೀತಿಯೇ ಹಾಗೆ.. ತಾನು ಇಂತಹುದೊಂದನ್ನು ಮಾಡಿದ್ದೇನೆ ಎಂದು ಯಾವತ್ತೂ ಹೇಳಿದವನಲ್ಲ.. ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುತ್ತಿರುವವನು ನನ್ನಪ್ಪ. ಉಮರ ಖಯ್ಯಾಮನ ಯಾವುದೋ ಕೃತಿಯೊಂದನ್ನು ಕನ್ನಡೀಕರಿಸಿದ್ದು.. ಕಾಳಿದಾಸ ಋತು ಸಂಹಾರವನ್ನು ಪ್ರಾಸಬದ್ಧವಾಗಿ ಚಂದೋಬದ್ಧವಾಗಿ ಅನುವಾದಿಸಿದ್ದು, ಎಂ.ಎನ್ ವ್ಯಾಸರ ಸ್ನಾನ ಕಥಾಸಂಕಲನವನ್ನು ಸಂಸ್ಕೃತಕ್ಕಿಳಿಸಿದ್ದು ಇದ್ಯಾವುದನ್ನೂ ಯಾರಿಗೂ ಗೊತ್ತಿಲ್ಲದಂತೆ ಮುಗಿಸಿ ಬದಿಗಿಟ್ಟಿರುವ ಅಪ್ಪನಿಗೆ, ಯಾರ ಪ್ರಶಂಸೆಯೂ ಬೇಕಾಗಿಲ್ಲ.. ಬರೆದದ್ದನ್ನು ಇನ್ನೂ ಚೆನ್ನಾಗಿ ತನ್ನ ಗುಂಡು ಗುಂಡು ಮುದ್ರಣಲಿಪಿಯಲ್ಲಿ ಬರೆದಿಡುವುದೋ, ಅಥವಾ ಟೈಪ್ ರೈಟರಿನಲ್ಲಿ ಕೀ ಕುಟ್ಟಿ ಕುಟ್ಟಿ ಹಾಳೆ ತುಂಬಿಸಿಡುವುದೋ ಮಾಡಿ ಅದರಲ್ಲಿ ಸಂತೃಪ್ತಿ ಕಾಣುವವನು ಅಪ್ಪ.
ನಮ್ಮ ಮನೆಯಲ್ಲಿ, ನಾ ಹುಟ್ಟುವುದಕ್ಕಿಂತ ಮುಂಚಿನ ಸುಧಾ ತರಂಗ ಮಯೂರಗಳು ಕೆಲವಿವೆ.. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಹಳೇ ಕೆಲವು ಅಂಕಣಗಳ ಕಟ್ಟಿಂಗುಗಳು ಯಾವುದೋ ಪ್ಲಾಸ್ಟಿಕ್ ಚೀಲದಲ್ಲಿ ಬಿದ್ದಿದೆ. ಇದಕ್ಕೆಲ್ಲಾ ಅಪ್ಪನೇ ಕಾರಣ. ಪದಬಂಧ, ಸುಡೊಕು, ಯಾವುದೇ ಎಲ್ಲಿ ಕಂಡರೂ ಪೆನ್ನು ಹಿಡಿದು ಕೂತು ಬಿಡುವ ಅಪ್ಪನಿಗೆ ಎಲ್ಲವುದರಲ್ಲೂ ಆಸಕ್ತಿ ಇದೆ.. ಕ್ರಿಕೆಟ್ ಬಂದಾಗ ಬಾಲಿಗೆ ಬಾಲ್ ಲೆಕ್ಕ ಹಾಕಿ ನೋಡಿದರೂ, ಕ್ರಿಕೆಟ್ ಇಲ್ಲದಿದ್ದರೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನೂ ಅದೇ ಆಸಕ್ತಿಯಲ್ಲಿ ನೋಡುತ್ತಾನೆ. ಅನಿಮಲ್ ಪ್ಲಾನೆಟ್ ನ ಪ್ರತೀ ಪ್ರಾಣಿಯ ಚಲನೆಯನ್ನು ಮಕ್ಕಳ ಬೆರಗು ಕಣ್ಣಿಂದ ವೀಕ್ಷಿಸಿ ವಾಹ್ ವಾಹ್ ಎನ್ನುತ್ತಾನೆ. ಅಮ್ಮ ನೋಡುವ ಧಾರಾವಾಹಿಯ ಕಥೆಯೂ ಅಪ್ಪನಿಗೆ ಗೊತ್ತಿರುತ್ತದೆ. ನೆರೆಮನೆಯ ಮಕ್ಕಳ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗೆ ಅಪ್ಪನ ತಯಾರಿ ಅವರಿಗಿಂತ ಜೋರಾಗಿರುತ್ತದೆ. ನಾವು ಮನೆಗೆ ಲ್ಯಾಪ್ ಟಾಪ್ ತೆಗೆದುಕೊಂಡು ಹೋದಾಗ ಅಪ್ಪನಿಗದು ಹಬ್ಬ.. ಭಾಷೆ ತಿಳಿಯದ ತೆಲಗು ಚಿತ್ರಗಳನ್ನೂ ಮಗಳ ಜೊತೆಗೆ ಕೂತು ಮೂರು ತಾಸು ನೋಡಿ ಚೆನ್ನಾಗಿದೆ ಎಂದು ತಲೆ ಆಡಿಸುತ್ತಾನೆ. ಇಂಗ್ಲಿಷ್ ಕೀಬೋರ್ಡಿನಿಂದ ಮೂಡುವ ಕನ್ನಡ ಅಕ್ಷರಗಳನ್ನು ತದೇಕದೃಷ್ಟಿಯಿಂದ ನೋಡಿ, ಬರೆಯುವವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾನೆ.. ಈಗಿನ ಕಾಲದವರಂತೆ ಯೋಚಿಸುವ ಅಪ್ಪ ಕಾಲಕ್ಕೆ ತಕ್ಕಂತೆ ಹೊಂದಿಕೊಂಡಿದ್ದಾನೆ,, ನನ್ನ ಹಾಗೆ ಫ್ರೆಂಚ್ ಗಡ್ಡ ಬಿಟ್ಟಿದ್ದಾನೆ.. (ಅಥವಾ ಅವನ ಹಾಗೆ ನಾನು)
ಅಪ್ಪ ಹೆದರಿಸುವುದು ಮೌನದಿಂದ.. ನಾನು ತಂಗಿ ಜಗಳ ಮಾಡಿಕೊಂಡು, ದೊಡ್ಡವನಾದ ನನಗೇ ಶಿಕ್ಷೆ ಕೊಡುವ ಪರಿಸ್ಠಿತಿ ಸೃಷ್ಟಿಯಾದಾಗೆಲ್ಲಾ ನನಗೆ ಸಿಗುತ್ತಿದ್ದುದು ಅದೇ ಅಪ್ಪನ ಮೌನ. ಅಪ್ಪ ನಿನ್ ಜೊತೆ ಮಾತಾಡುವುದಿಲ್ಲ ಎಂದರೆ ಸಾಕು.. ನನಗಾಗಲೀ ತಂಗಿಗಾಗಲೀ ಬಹುದೊಡ್ಡ ಶಿಕ್ಷೆಯಾಗಿತ್ತು.. ಆ ಶಿಕ್ಷೆ ಎರಡು ಮೂರು ದಿನಗಳ ವರೆಗೆ ಮುಂದುವರಿಯುತ್ತಿದ್ದುದು ವಿಶೇಷ.. ಅದೆಷ್ಟೇ ದಿನ ನಡೆದರೂ ದಿನಾ ರಾತ್ರಿ ಮಲಗಲು ನನಗೆ ಅಪ್ಪನ ಮಗ್ಗುಲೇ ಬೇಕಾಗಿತ್ತು.. ಅಪ್ಪ ’ಭಾವ’ಜೀವಿ.. ಆದರೆ ತನ್ನ ಭಾವನೆಗಳನ್ನು ಉಳಿದವರ ಮೇಲೆ ಎಂದೂ ಪ್ರಯೋಗಿಸಿಲ್ಲ.. ಸಂತೋಷಕ್ಕೆ ಸಣ್ಣ ನಗು, ದುಃಖಕ್ಕೆ ಸಣ್ಣ ಮೌನ.. ಅಷ್ಟೆ.. ಅಪ್ಪನಿಂದ ಹೊರಬರುವುದು. ಸಿಟ್ಟು ಬಂದ ಘಟನೆಗಳು ಸೊನ್ನೆಯೆನ್ನಬಹುದು. ಬಂದರೂ ಅದು ಸಾತ್ವಿಕವಾದದ್ದು. ಅರ್ಥವಿಲ್ಲದ ತನಗೆ ಸಂಬಂಧವಿರದ ವಿಚಾರಗಳಿಗೆ ಅಪ್ಪ ತಲೆಹಾಕಿದ್ದೇ ಇಲ್ಲ ಅನಿಸುತ್ತದೆ. ಅದಕ್ಕೇ ಇರಬೇಕು ಅಪ್ಪ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿರುವುದು.
ಅಪ್ಪ ಇಂಚುಪಟ್ಟಿಯಿಲ್ಲದೆ ನೇರ ಗೆರೆ ಹಾಕಬಲ್ಲ. ಪೋಸ್ಟ್ ಕಾರ್ಡಿನಲ್ಲಿ ಯಾವ ಗ್ರಾಫಿಕ್ಸ್ ಡಿಸೈನರ್ರೂ ಮಾಡಲಾಗದಂತ ರೇಖಾವಿನ್ಯಾಸ ಮಾಡಬಲ್ಲ. ಹಳೇ ಸ್ಟಾಂಪ್ ಸೈಜಿನ ಫೋಟೋಗಳನ್ನು ಚೌಕ ಚೌಕ ಹಾಕಿ ದೊಡ್ಡದು ಮಾಡಿ ಬಿಡಿಸಬಲ್ಲ. ಖಾಲೀ ಡೈರಿಗಳನ್ನು ಧೂಳು ಹಿಡಿಯದಂತೆ ಬಂದೋಬಸ್ತ್ ಮಾಡಿ ಕಪಾಟಿನಲ್ಲಿ ಎಷ್ಟುವರ್ಷಗಳಾದರೂ ಕಾದಿರಿಸಬಲ್ಲ.. ನವವಿವಾಹಿತರ ಹೆಸರನ್ನು ಜೋಡಿಸಿ ಕವಿತೆ ಬರೆದು ಅದಕ್ಕೆ ಅಂದದ ಫ್ರೇಮ್ ಹಾಕಿಸಿ ಉಡುಗೊರೆ ಕೊಡಬಲ್ಲ. ಸಾಮಾಜಿಕ, ರಾಜಕೀಯದಂತ ವಸ್ತುಗಳಿಗೂ ಭಾವಲೇಪನ ಮಾಡಿ ತನ್ನ ಶೈಲಿಯಲ್ಲಿ, ತತ್ವಹೇಳುವ ಪ್ರಬಂಧ ರಚಿಸಬಲ್ಲ. ಅಪ್ಪನ ಡೈರಿಗಳ ಬಗ್ಗೆ ಹೇಳಲೇ ಬೇಕು.. ಅದು ಡೈರಿಯೇ ಆದರೂ ಅದರಲ್ಲಿ ಇರುವುದು ಮಾತ್ರ ಖರ್ಚು ವೆಚ್ಚ.. ಬಲತುದಿಗೆ ವ್ಯಯವಿದ್ದರೆ, ಎಡಬದಿಗೆ ಆಯ. ಕೂಡಿಸಿ ಕಳೆದಾಗ ಕಿಸೆಯಲ್ಲಿರುವ ಮೊತ್ತಕ್ಕೆ ತಾಳೆಯಾಗಬೇಕು, ಇಲ್ಲವಾದಲ್ಲಿ ಅಪ್ಪ ಮನೆಯವರೆಲ್ಲರ ತಲೆ ತಿನ್ನುತ್ತಾನೆ.. ಕೊನೆಗೆ ಬ್ಯಾಗಿನಲ್ಲೋ, ಕಪಾಟಿನಲ್ಲೋ ವ್ಯತ್ಯಾಸ ಪತ್ತೆಯಾದಾಗ ಡೈರಿ ಮುಚ್ಚಿಡುತ್ತಾನೆ. ಇನ್ನೊಂದು ವಿಚಾರ. ಆ ಡೈರಿಗಳಲ್ಲಿ ಆ ಹೊತ್ತಿನ ವಿಶೇಷವೂ ಇರುತ್ತದೆ. ’ಗಣರಾಜ್ಯೋತ್ಸವ’ ದಂದು ಡೈರಿಯಲ್ಲಿ ಧ್ವಜ ಹಾರಾಡಿದರೆ, ಚೌತಿಯಲ್ಲಿ ಗಣಪತಿ ಆಕಾರದ ಲಿಪಿಯಲ್ಲಿ ’ಗಣೇಶ ಚತುರ್ಥಿ’ ಎಂದು ಬರೆದಿರುತ್ತದೆ. ಕೊನೆ ಕೊಯಿಲು, ಗೊಬ್ಬರ ಕಂಬಳ, ಎಲೆ ಬಳ್ಳಿ ನೆಟ್ಟಿದ್ದಕ್ಕೂ ಡೈರಿಯಲ್ಲಿ ಜಾಗವಿದೆ.
ಅಪ್ಪನಿಗೆ ಭರ್ಜರಿ ತಾಳ್ಮೆಯಿದೆ.. ಜೊತೆಗೆ ಬದುಕಿನ ರಸಿಕತೆಯಿದೆ.. ಸೆಂಟ್ ಹೊಡೆದುಕೊಂಡು, ಒಂದಿಷ್ಟು ಫೇರ್ ಅಂಡ್ ಲವ್ಲಿ ಹಚ್ಚಿಕೊಂಡು ಎಂದಿನ ಶೈಲಿಯ ತಿಳಿಬಣ್ಣದ ಅಂಗಿ ಹಾಕಿ, ಪೆನ್ನಂತೆ ಕಿಸೆಗೆ ಸಿಕ್ಕಿಸಿಕೊಳ್ಳುವ ಗೂಡಿಂದ ಬಂಗಾರದ ಫ್ರೇಮಿನ ಕನ್ನಡಕವನ್ನು ಮೂಗಿನ ಮೇಲಿಟ್ಟು, ಒಂದು ಸಲ ಸೈಡ್ ಫೋಸಿನಲ್ಲಿ ನಿಂತು ಕನ್ನಡಿ ಮುಂದೆ ನಿಲ್ಲುವ ಅಪ್ಪನಿಗೀಗ ಐವತ್ತೆರಡು ತುಂಬಿದೆ,, ಮೊನ್ನೆ ಮಾರ್ಚ್ ಆರಕ್ಕೆ. ಫೋನ್ ಮಾಡಿ ಶುಭಾಷಯಗಳನ್ನು ಹೇಳುವಾಗ ನಮ್ಮ ಅಪ್ಪ-ಮಗನ ವಾತ್ಸಲ್ಯವನ್ನು ಮೀರಿದ ಆತ್ಮೀಯತೆಯ ಸಂಬಂಧದಲ್ಲಿ ಇದೆಲ್ಲಾ ಕೃತಕ ಅನಿಸಿತು. ಅಪ್ಪನ ಧನ್ಯವಾದಗಳು ಎಂಬ ಮಾತಿನಲ್ಲೂ ಅಲವರಿಕೆಯಿತ್ತು. ನಿಜ ನಮ್ಮಿಬ್ಬರಿಗೆ ಅದು ಬೇಕಾಗಿಲ್ಲ. ಈ ಬರಹವೂ ನಮ್ಮ ಭಾವವನ್ನು ಹೆಚ್ಚಾಗಲೀ ಕಡಿಮೆಯಾಗಲೀ ಮಾಡುವುದಿಲ್ಲ.
ಅಪ್ಪ ನಮಗೆ ಹೀಗಿರಿ ಎಂದು ಹೇಳಿಲ್ಲ, ಅವನು ಹಾಗಿದ್ದು ತೋರಿಸಿದ್ದಾನೆ. ಮೌನದಲ್ಲೂ ಮಾತಾಡುವ ಅಪ್ಪನ ಎಲ್ಲಾ ಗುಣಗಳೂ ನನಗೆ ಬೇಕು.. ನಾನೂ ಅಪ್ಪನಾಗಬೇಕು. ಕೂದಲು ನಿಲ್ಲದ ತಲೆ ಮತ್ತು ಡಯಾಬಿಟೀಸ್ ಬಿಟ್ಟು...
ಪುಷ್ಪಾವರಣವನ್ನು ಸರಿಯಾದ ಲೇಖನದಿಂದ ಆರಂಭಿಸಿದ್ದೇನೆ ಎಂದುಕೊಂಡಿದ್ದೇನೆ. ನಿನ್ನೆ ವಾಚಿಸಿದ ಅಪ್ಪನ ಕವನವನ್ನು ಸಾಲದ ಸಾಲಿನಲ್ಲಿ ಪ್ರಕಟಿಸಿದ್ದೇನೆ. ಆದರೆ ಅದು ಸಾಲವಲ್ಲ.. ಮಗನಾಗಿ ನನ್ನ ಹಕ್ಕು.