ವಾಕ್ಯವೊಂದರ ಕಥೆಗಳು
ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...
ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...
ಪ್ರೀತಿ ಪ್ರೀತಿ ಎಂದು ಕನವರಿಸುತ್ತಲೇ ಇದ್ದ ಪ್ರೇಮಿ ಕೊನೆಗೊಂದು ದಿನ ಪ್ರೀತಿ ಅವನೆದುರಿಗೆ ಬಂದು ನಿಂತಾಗ ಮಾತು ನಿಲ್ಲಿಸಿಬಿಟ್ಟು ಮೂಕನಾದ...
ದಿನವೂ ಬಾತ್ರೂಂಗಾಗಿ ಕ್ಯೂ ನಿಂತು ನಿಂತು ಬೇಸತ್ತ ಹಾಸ್ಟೆಲ್ ಹುಡುಗ ಅಂದು ಮುಂಜಾನೆ ಬೇಗ ಎದ್ದು ಬಾತ್ರೂಂ ಬಳಿ ಕ್ಯೂ ಇಲ್ಲದುದ್ದನ್ನು ನೋಡಿ ವಾಪಾಸ್ ಬಂದು ಮುಸುಕೆಳೆದುಕೊಂಡ...
ಗಿಟಾರ್ ಕಲಿಯುತ್ತೆನೆಂದು ಅಪ್ಪನ ಬಳಿ ಹಣ ಕೇಳಿದ ಮಗನಿಗೆ ಅಪ್ಪ ಹಣ ಕೊಟ್ಟು ತೋಟಕ್ಕೆ ತಂತಿ ಬೇಲಿ ಹಾಕಲು ತಂತಿ ತರುವಂತೆ ಹೇಳಿದ..
ಮೂರುವರ್ಷಗಳಿಂದ ಜೊತೆಗಿದ್ದ, ಪ್ರೀತಿಸಿದ ಹುಡುಗಿಗೆ ಮಾತು ಬರುತ್ತಿಲ್ಲ ಎಂದು ತಿಳಿದ ಮೇಲೆ ಕೈಕೊಟ್ಟ ಹುಡುಗನಿಗೆ ಕಿವಿಯೇ ಕೇಳುತ್ತಿರಲಿಲ್ಲ...
ನಮ್ಮ ಮನೆಯ ಗೋಡೆಯ ಮೇಲಿರುವ ಗೋಲಾಕಾರದ ಗಡಿಯಾರದ ಮುಳ್ಳುಗಳು ಒಬ್ಬರನ್ನೊಬ್ಬರು ಅಗಲಿರಲಾರದೆ ತಾಸಿಗೊಮ್ಮೆ ಒಂದುಗೂಡುತ್ತವೆ...
ಪರಿಚಯದವರು ಸಿಕ್ಕರೆಂದು ಮಾತಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದವಳಿಗೆ ರಸ್ತೆ ಬದಿಗೆ ಸತ್ತು ಬಿದ್ದು ಕೊಳೆತು ನಾರುತ್ತಿದ್ದ ಬೀದಿ ನಾಯಿಯ ವಾಸನೆ ಬರಲೇ ಇಲ್ಲ...
ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...
ಪತ್ರದ ಮೂಲಕವೇ ನಡೆಯುತ್ತಿದ್ದ ಪ್ರೇಮ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆ ಎಂಬ ಭಯದಿಂದ ಅದನ್ನು ನಿಲ್ಲಿಸಿ ಅವರಿಬ್ಬರೂ ಒಂದು ದಿನ ಮನೆ ಬಿಟ್ಟು ಓಡಿ ಹೋದರು..
ಆಫೀಸಿನ ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದವನಿಗೆ ಸಿನಿಮಾಗೆ ಹೋಗಲು ಕಾಯುತ್ತೇನೆ ಎಂದ ಹೆಂಡತಿಯ ನೆನಪಾಗಿ ಮನೆಯ ದಾರಿ ತಪ್ಪಿಹೋಯಿತು...
ಕೈಗೆ ಪೆಟ್ಟು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾದುದರಿಂದ ರೋಗಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ...
ಗಂಡನ ಕಾಟದಿಂದ ಕಣ್ಣಿರಲ್ಲೇ ಮೀಯುತ್ತಿಇರುವ ಸೊಸೆಯ ಕಷ್ಟ ನೋಡಲಾಗದೆ ಅತ್ತೆ ಒಂದು ದಿನ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಳು...
ಸಾಹುಕಾರರಿಗೆ ಬಾಕಿ ಕೊಡಬೇಕಿದ್ದ ಸಾಲಕ್ಕೆ ಪ್ರತಿಯಾಗಿ ಜೀತ ಮಾಡಲೊಪ್ಪಿದ ಆತನಿಗೆ ಸಾಹುಕಾರರನ್ನು ಹೊಡೆಯುವ ಶಕ್ತಿ ಕೊನೆವರೆಗೂ ಬರಲೇ ಇಲ್ಲ...
ವರ್ಣ ನೆರಳು ವಿಯೋಗ ಅರ್ಥ
ವರ್ಣ
ಬೆಳಿಗ್ಗೆಯಿಂದ ಬಿಳಿ ಬಿಳೀ ಮೂಲಂಗಿಗಳನ್ನು ಮಾರುತ್ತ ಕುಳಿತಿದ್ದ ನಾಗಪ್ಪ ಸಂಜೆ ಹೊತ್ತಿಗೆ ಸುಸ್ತಾದಂತಾದರೂ, ಕೊನೆಗುಳಿದ ನಾಲ್ಕನ್ನು ಮಾರಿಯೇ ಹೋಗುವುದೆಂದು ನಿರ್ಧರಿಸಿದ್ದ. ಜನ ತನ್ನ ಬಳಿ ಸುಳಿಯದೇ ಇರುವುದನ್ನು ಗಮನಿಸಿ ನಿರಾಶೆಯಿಂದ ಮೂಲಂಗಿಗಳನ್ನು ದಿಟ್ಟಿಸಿದ. ಸಂತೆ ಪೇಟೆಯ ಧೂಳು ಮೆತ್ತಿಕೊಂಡಂತೆ ಕಂಡಿದ್ದರಿಂದ 'ಉಫ್' ಎಂದು ಊದಿನೋಡಿದ. ಮೂಲಂಗಿಗಳನ್ನು ತನ್ನ ಪಂಚೆಯಿಂದ ಒರೆಸಿದ.ಧೂಳು ಹೋಗಲಿಲ್ಲ. ಕೈಯಲ್ಲಿ ಉಜ್ಜಿದ. ಕುಡಿಯಲೆಂದು ಪಕ್ಕದಲ್ಲಿದ್ದ ತರಕಾರಿಯವ ತಂದಿಟ್ಟುಕೊಂಡಿದ್ದ ನೀರಿಂದ ತೊಳೆದ. ಆಗಲೂ ಧೂಳು ಹೋಗಲಿಲ್ಲ. ತನ್ನ ಕಣ್ಣುಗಳನ್ನೂ ತೊಳೆದುಕೊಂಡು ನೋಡಿದ. ಪಕ್ಕದ ಅಂಗಡಿಯಲ್ಲಿದ್ದ ಮೂಲಂಗಿಗಳನ್ನು ನೋಡಿದ.. ಅವು ಬೆಳ್ಳಗೇ ಇದ್ದವು.. .ಯಾವುದೋ ಶಕ್ತಿ ತನ್ನ ಹಿಂದೆ ನನಗೆ ಕಾಣದೇ ಬಂದು ನಿಂತಂತೆ ಭಾಸವಾಯಿತು.ಹಿಂತಿರುಗಲೂ ಭಯವಾಯಿತು. ದೈನ್ಯನಾಗಿ ಆಕಾಶಮುಖಿಯಾಗಿ ಬಾಯ್ತೆರೆದ. ಸೂರ್ಯನೂ ಕೆಂಪಗಾಗಿ ನಗುತ್ತಿದ್ದ.
ನೆರಳು
ತನ್ನ ಹಿಂದೆ ಬರುತ್ತಿರುವುದು ನಾಯಿಯೋ ಬೆಕ್ಕೋ ಎಂದು ಕತ್ತಲಲ್ಲಿ ಕಾಣದೇ, ಮುಂದೆ ಹೋಗುವ ಆಕೃತಿ ಯಾವುದು ಎಂದು ಗುರುತಿಸಲಾಗದೇ ಆ ಹಿಂದಿರುವ ಪ್ರಾಣಿಯೂ ಹೀಗೆಯೇ ಯೋಚಿಸುತ್ತಿರಬಹುದೆಂದು ಭಾವಿಸಿ ನಾಗಪ್ಪ ಬಿರಬಿರನೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ. ತನ್ನ ಹಾಗೆಯೇ ಇನ್ನೊಂದು ಪ್ರಾಣಿ ತನ್ನೊಡನೆ ಇದೆ ಎಂಬ ಧೈರ್ಯವೇ ಎಂದಿಂಗಿಂತ ಹೆಚ್ಚಿನ ವೇಗಕ್ಕೆ ಕಾರಣವಾಗಿತ್ತು. ಆಕ್ರಮಣ ಮಾಡುವ ಬಯಕೆಯಿದ್ದರೆ ಆ ಪ್ರಾಣಿ ಇಷ್ಟರೊಳಗಾಗಿ ತನ್ನ ಮೇಲೋ ಅಥವಾ ಮಗನಿಗಾಗಿ ಬರುವಾಗ ಕಟ್ಟಿಸಿಕೊಂಡು ತಂದ ಭಜೆಯ ಪರಿಮಳಕ್ಕೆ ಕೈ ಚೀಲದ ಮೇಲೋ ಮುಗಿಬೀಳಬಹುದಾಗಿತ್ತು. ಅಥವಾ ಬೆಳಗಿಂದ ಸಂತೆಯಲ್ಲಿ ಮೂಲಂಗಿ ಮಾರುತ್ತಾ ಕುಳಿತಿದ್ದರಿಂದ ಮೈಗಂಟಿಕೊಂಡ ಅದರ ವಾಸನೆಗೋ, ಇಲ್ಲ ಜಿಡ್ಡು ಜಿಡ್ಡಾದ ಮೈಯಿಂದ ಹರಿದು ಬರುತ್ತಿರುವ ಬೆವರಿನ ವಾಸನೆಗೋ ಹತ್ತಿರ ಬರಲೂ ಹೆದರಿರಬೇಕು ಎಂದಂದುಕೊಳ್ಳುತ್ತಾ ಕಂಕುಳೆತ್ತಿ ಮೂಸಿದ. ವಾಕರಿಕೆ ಬಂದಂತಾಗಿ ತನ್ನ ಮೇಲೇ ಅಸಹ್ಯ ಪಟ್ಟುಕೊಳ್ಳುತ್ತಾ ನಕ್ಕ. ಅಷ್ಟರಲ್ಲಿ ಕಾಲಿಗೆ ಏನೋ ತಗಲಿದಂತಾಗಿ ಹೆದರಿಕೆ ರೋಷಾವೇಷಕ್ಕೆ ತಿರುಗಿ, ಛಂಗನೆ ಪಕ್ಕಕ್ಕೆ ಜಿಗಿದು ದೊಡ್ಡ ಕಲ್ಲೆತ್ತಿಕೊಂಡು ಕಾಲ ಬುಡಕ್ಕೆ ಕೈಯಾಡಿಸಿ, ಯಾವುದೋ ಪ್ರಾಣಿ ಸಿಕ್ಕಂತಾಗಿ ಅದನ್ನು ಹಿಡಿದು ಜಜ್ಜಿ ಜಜ್ಜಿ ಅಪ್ಪಚ್ಚಿ ಮಾಡಿದ..
ವಿಯೋಗ
ಗಿಡಮರಗಳ ನಡುವೆಲ್ಲೋ ಚಿಲಿಪಿಲಿಗಳನ್ನು ಕೇಳುತ್ತಾ ಮನೆಕಡೆ ಹೋಗುತ್ತಿದ್ದ ನಾಗಪ್ಪ ತನ್ನವರ ಬಗ್ಗೆ ತನ್ನ ಮನೆಯವರ ಬಗ್ಗೆ ಯೋಚಿಸತೊಡಗಿದ.. ನಾಗಪ್ಪನಿಗೆ ಸತ್ತ ಹೆಂಡತಿಯ ನೆನಪು ಅಷ್ಟೇನೂ ಕಾಡದಿದ್ದರೂ,ಶಾಲೆಯ ಮೂರನೇ ಕ್ಲಾಸಿನ ಹಾಜರಿ ಪುಸ್ತಕದಲ್ಲಿ ಮಾತ್ರ ಸಿಗುವ ತನ್ನ ಮಗನ ಕುರಿತು ಅಗತ್ಯಕ್ಕಿಂತ ಹೆಚ್ಚೇ ಯೋಚಿಸುತ್ತಿರುತ್ತಿದ್ದ.ಶಾಲೆ ತಪ್ಪಿಸುವುದು ಮೊದಮೊದಲು ಬಾಲಿಶವೆಂದುಕೊಂಡರೂ ಈಗೀಗ ಸೋಮಣ್ಣನ ಚಾ ಅಂಗಡಿಯ ಮುಂದೆ ಆಕಾಶ ದಿಟ್ಟಿಸಿತ್ತಾ ಗುಮ್ಮನಂತೆ ಕುಳಿತಿರುತ್ತಿದ್ದ ಮಗನ ಬಗ್ಗೆ ಸಿಟ್ಟು ಬರುತ್ತಿತ್ತು.ಹೇಳುವಷ್ಟೂ ಹೇಳಾಗಿತ್ತು. ನಿನ್ನೆ ಯಾವುದೋ ಶಕ್ತಿ ಆವೇಶವಾದಂತೆ ಮಗನಿಗೆ ಯದ್ವಾ ತದ್ವಾ ಬೈದು ಮನೆಯ ಹೊರಗೇ ರಾತ್ರಿ ಕಳೆವಂತೆ ಮಾಡಿದ್ದ. ಒಂದೂ ಮಾತಾಡದೇ ಮಗನೂ ಹೊರಗೇ ಮಲಗಿದ್ದು ವಿಶೇಷವಾಗಿ ಕಂಡಿತಾದರೂ, ಅಪ್ಪನ ಎದುರು ಉಸಿರೆತ್ತದ ಮಗನ ಗುಣ ಸಮಾಧಾನ ಮಾಡಿತ್ತು. ಲೋಕದ ಜಂಜಾಟಗಳನ್ನೆಲ್ಲಾ ಬಿಟ್ಟು ಸನ್ಯಾಸಿಯಾಗುವ ಬುದ್ಧಿ ಬಂದಂತೆ ಆಡುವ ಆ ಚಿಕ್ಕ ವಯಸ್ಸಿನ ಮಗನ ಬಗ್ಗೆ ಸ್ವಲ್ಪ ಭಯ ಹುಟ್ಟಿದ್ದು ಆಗಲೇ...ಅದಾದ ಮೇಲೆ ಅಪಶಕುನಗಳು ನಡೆದಿದ್ದೇ ಹೆಚ್ಚೋ ಅಥವಾ ನಡೆದ ಘಟನೆಗಳಿಗೆಲ್ಲ ವಿಚಿತ್ರ ಅರ್ಥ ಕಲ್ಪಿಸುವ ವಿಚಾರಗಳು ಬಂದಿದ್ದು ಹೆಚ್ಚೋ ನಾಗಪ್ಪನಿಗೆ ಅರ್ಥವಾಗದೆ ಚಡಪಡಿಸಿದ.ಈ ರೀತಿಯೇ ಮುಂದುವರಿದರೆ ಊರು ಕಾಯುವ ಮಾಸ್ತಿ ಗುಡಿಗೆ ಹೋಗಿ ಹೇಳಿಕೆ ಮಾಡಿಕೊಳ್ಳಬೇಕು ಅಂದುಕೊಂಡ. ಅಲ್ಲೇ ಮಠ ಮಾಡಿಕೊಂಡು ಊರನ್ನು ಹರಸುತ್ತಿರುವ ಸುಕುಮಾರೇಂದ್ರ ಸ್ವಾಮೀಜಿಗಳ ಮುಖ ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಎಲ್ಲೋ ಗೂಗೆ ಕೂಗಿದಂತಾಗಿ, ಮಗನಿಗಾಗಿ ತಂದಿದ್ದ ಭಜೆ ಪೊಟ್ಟಣವನ್ನು ಎದೆಗವುಚಿಕೊಂಡ.
ಅರ್ಥ
ನಾಗಪ್ಪನ ಬಾಲ್ಯವೇನೂ ರೋಚಕತೆಗಳಿಂದ ಕೂಡಿರದಿದ್ದರೂ ನಿರಸವೇನೂ ಆಗಿರಲಿಲ್ಲ. ಶಾಲೆಗೆ ಹೋಗುವ ಸಂದರ್ಭಗಳೇ ಸೃಷ್ಟಿಯಾಗದ ಆ ಕಾಲದಲ್ಲಿ, ದಿನವೂ ಹಾಲು ಕೊಡಲು ಮಾಸ್ತರ ಮನೆಗೆ ಹೋಗುತ್ತಿದ್ದ ನಾಗಪ್ಪ ಮುಚ್ಚಳದ ಅಂಚಿನಿಂದ ಹಾಲುಚೆಲ್ಲದಂತೆ ಹಾಲಿನ ಉಗ್ಗವನ್ನು ಹಿಡಿದುಕೊಂಡು ಹೋಗುವುದೇ ತನ್ನ ಪ್ರತಿಭೆ ಎಂದುಕೊಂಡು ಬಿಗುತ್ತಿದ್ದ. ಮಾಸ್ತರರೂ ಹೆಚ್ಚೇನೂಹೇಳದೆ ತಂದ ಹಾಲು ಸರಿ ಇದೆಯೋ ಗಮನಿಸಿ ಉಗ್ಗ ತೊಳೆದು ಕೊಟ್ಟಾಗ ಅದನ್ನು ವಾಪಸ್ ತೆಗೆದುಕೊಂಡು ಹೋಗಿ ಅಮ್ಮನ ಕೈಮುಟ್ಟಿಸಿದರೆ ಮತ್ತೆ ದಿನವಿಡೀ ನಾಗಪ್ಪ ಏನೂ ಮಾಡುತ್ತಿರಲಿಲ್ಲ. ಮಾಸ್ತರರ ಮನೆಗೆ ನಿತ್ಯವೂ ಹೋಗುತ್ತಿದ್ದ ನಾಗಪ್ಪ, ಮಾಸ್ತರಬಳಿಯಿದ್ದ ಗಡಿಯಾರದ ನೋಡಿ, ಗಂಟೆ ನೋಡುವುದನ್ನು ಕಲಿಯಬೇಕು ಅಂತ ಮಾಸ್ತರ ಬಳಿ ದುಂಬಾಲು ಬಿದ್ದ. ' ಗಂಟೆನೋಡಲು ಬಂದರೆ ಮಾತ್ರ ಈ ಸಲದ ತೇರಿನಲ್ಲಿ ವಾಚು ' ಅಂತ ಅಪ್ಪ ಹೇಳಿದ ಮಾತುಗಳು ಇದಕ್ಕೆ ಕಾರಣವಾದರೂ ಮಾಸ್ತರರಮನೆ ಗಡಿಯಾರ ಪ್ರೇರಣೆಯಾಯಿತು. ಗಡಿಯಾರದಲ್ಲಿ ಎರಡು ಮುಳ್ಳುಗಳನ್ನು ಬಿಟ್ಟರೆ ಉಳಿದ ಸಂಖ್ಯೆಗಳ್ಯಾವುದನ್ನೂಗುರುತಿಸಲು ಬಾರದ ನಾಗಪ್ಪನಿಗೆ ಗಂಟೆ ನೋಡುವುದನ್ನು ಕಲಿತಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಇದಾದ ವಾರದೊಳಗೆಮಾಸ್ತರರ ಬಳಿ ಬಂದು ಅವನು 'ಮಾಸ್ತರರೇ, ನಮ್ಮ ಒಡೆಯರ ಮನೆ ಗಡಿಯಾರದಲ್ಲಿ ಇರೂದು ನಾಲ್ಕೇ ಅಂಕಿ .. ೧೨.. ೩.. ೬.. ಮತ್ತೆ ೯... ನಿಮ್ಮನೆಲ್ಯಾಕೆ ಅಷ್ಟೆಲ್ಲಾ ಅದೆ?' ಅಂತ ಕೇಳಿಯೇ ಬಿಟ್ಟ.. ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿರದ ಮಾಸ್ತರರುಗೊಂದಲಕ್ಕೊಳಗಾದದ್ದನ್ನು ತೋರಗೊಡದೆ ' ಅದೆಲ್ಲಾ ನಂಗೊತ್ತಿಲ್ಲ ... ನಾನು ತ್ರಿಕಾಲಜ್ಞಾನಿ ಅಲ್ಲ .. ನನ್ನ ತಲೆ ತಿನ್ಬೇಡ ' ಅಂದುಬಿಟ್ಟರು. ಮಾಸ್ತರರಿಗೆ ಗೊತ್ತಿಲ್ಲದದ್ದೆನನ್ನೋ ತಾನು ಕೇಳಿಬಿಟ್ಟೆ ಎಂದುಕೊಂಡು ನಾಗಪ್ಪನಿಗೆ ಖುಷಿಯಾಗಿ ಮಾಸ್ತರರ ಮೇಲಿದ್ದಅಭಿಮಾನವೂ ಒಂದು ಸ್ವಲ್ಪ ಕಡಿಮೆಯಾಗಿ ಏನು ಮಾಡಬೇಕೆಂದು ತಿಳಿಯದೆ ಚಡಪಡಿಸಿಬಿಟ್ಟ . ಅದಾದ ಮೇಲೆ ತ್ರಿಕಾಲ ಜ್ಞಾನಅಂದರೇನು ಎಂಬ ಪ್ರಶ್ನೆ ಹೊಸತಾಯಿತಾದರೂ , ಮಾಸ್ತರರ ಮನೆಯ ಗಡಿಯಾರಕ್ಕೆ ದಿನದ ಸಮಯ ಜಾಸ್ತಿ ಯಾಕೆ..? ಅಂತಮಾತ್ರ ಅರ್ಥವಾಗಲಿಲ್ಲ.
ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು
'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ ಆದರೂ ಒಂಭತ್ತೂವರೆಗೇ ಶುರುವಾಗುವ ಟ್ರೀನಿಂಗ್ ಇವತ್ತಿನ ವಿಶೇಷವಾಗಿತ್ತು.
ಬಸ್ ಸ್ಟಾಂಡಿನಲ್ಲಿ ನಿಂತಿದ್ದ ಜನರು ಬಸ್ಸಿಗಾಗಿ ಹೊಂಚುಹಾಕುತ್ತಿದ್ದಾರೆ. ಗಾಳಕ್ಕೆ ಹುಳು ಸಿಕ್ಕಿಸಿ ಮೀನಿಗಾಗಿ ದಂಡೆಯಮೇಲೆ ಕಾಯುತ್ತಿದ್ದವರಂತೆ ಕತ್ತುದ್ದ ಮಾಡಿ ಬಸ್ಸಿನ ಬರುವನ್ನು ಕಾಯುತ್ತಿದ್ದಾರೆ. ಕೆಲವೊಬ್ಬರು ಬಸ್ಸು ಈಗಾಗಲೇ ಹೊರಟು ಹೋಗಿದೆ ಎಂಬ ಅಭಿಪ್ರಾಯದಲ್ಲಿ ರಸ್ತೆಯ ಇನ್ನೊಂದು ಬದಿಗೂ ಕಣ್ಣುಹಾಯಿಸಿ ಬಸ್ಸು ಹೋಗಿರಬಹುದಾದ ಸಾಕ್ಷಿಗಳಿಗೆ ಹುಡೂಕುತ್ತಿದ್ದಾರೆ. ರಶ್ಶಿರಲಿ ಬಿಡಲಿ, ಜಾಗ ಸಿಗಲಿ ಬಿಡಲಿ ಜೋತಾಡಿಕೊಂಡಾದರೂ ಸರಿ; ಬರುವ ಬಸ್ಸಿಗೆ ಹೋಗಲೇ ಬೇಕು ಎಂಬ ತೀರ್ಮಾನದಲಿ ಸಿಗ್ನಲ್ಲಿನ ಹಿಂದುಗಡೆ ಬಸ್ ಪ್ರತ್ಯಕ್ಷವಾಗುವ ಮಹಾಪರ್ವಕ್ಕೆ ಹಪಹಪಿಸುತ್ತಿದ್ದಾರೆ. ಸ್ವಲ್ಪ ಸೆಕೆಯಾಗಿರಬೇಕು.. ಅವರಲ್ಲೊಬ್ಬ ಶರ್ಟ್ ಗುಂಡಿ ಬಿಚ್ಚಿದ್ದಾನೆ.. ಉದ್ದ ತೋಳಿನ ಅಂಗಿ ಕೈಯ ಅಂಚನ್ನು ಹಿಡಿದು ಮೇಲಕ್ಕೆಳೆದುಕೊಂಡಿದ್ದಾನೆ. ’ಬಸ್ ಬರದೇ ಇದ್ದರೆ ನಾಲ್ಕು ಬಾರಿಸಿಬಿಡುತ್ತೇನೆ’ ಎಂಬ ನಿಲುವಿನಲ್ಲಿ ಮುಂದೆ ಬಂದು ನಿಂತಿದ್ದಾನೆ. ಆದರೂ ಬಸ್ ಬರುತ್ತಿಲ್ಲ.
ಅಷ್ಟರಲ್ಲಿ ಒಂದಿಷ್ಟು ಜನ ಬಸ್ಸನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಮಾತನಾಡತೊಡಗಿದ್ದಾರೆ. ಸಾರಾಂಶ್ವಾಗಿ ಬಸ್ಸು ಇವತ್ತು ಬರುವುದೇ ಇಲ್ಲ ಎಂಬ ತೀರ್ಮಾನಕ್ಕೂ ಬಂದವರಂತೆ ಕಾಣುತ್ತಿದ್ದಾರೆ. ಒಂದಿಬ್ಬರು ಆಟೋ ಹಿಡಿದು ಹೋಗುವ ಸಲಹೆ ಕೊಟ್ಟರೇ ಹೊರತು ಯಾರೂ ಹೊರಡಲಿಲ್ಲ.ಇನ್ನೋದಿಷ್ಟು ಜನ ಬಸ್ ಸ್ಟಾಂಡೀನ ಕಡೆಗೇ ಬರುತ್ತಿರುವ ಜನರನ್ನು ನೋಡಿ ’ಛೇ ಫುಲ್ ರಶ್ಶಾಗುತ್ತೆ’ ಎಂದು ಮುಖ ಸಿಂಡರಿಸಿದ್ದಾರೆ. ನಿಂತವರ ವೈಯಕ್ತಿಕ ವಿಚಾರಗಳೆಲ್ಲವೂ ಸೇರಿ ಸಾಮೂಹಿಕ ವೇದನೆಯಾಗಿ ಬಸ್ ಸ್ಟಾಂದಿನಿಂದ ಹೊರಬರುತ್ತಿವೆಯೋ ಎಂಬಷ್ಟು ಅಸಹನೀಯ ಮುಖ ಮಾಡಿ ಎಲ್ಲರೂ ನಿಂತಿದ್ದಾರೆ. ಆಗ ಬಸ್ಸು ಬರುತ್ತದೆ.
ಅದು ಸ್ವಲ್ಪ ಇಳಿಜಾರು ರಸ್ತೆ. ಇಳಿಜಾರಿನ ಪ್ರಾರಂಭದಲ್ಲಿ ಸಿಗ್ನಲ್ ಇದೆ. ಅದರ ಕೆಳಗೆ ಈಗ ಬಸ್ ನಿಂತಿದೆ. ಸಿಗ್ನಲ್ ದಾಟಿದ್ದೇ ಬಸ್ ಸ್ಟಾಂಡು.ಈಗಷ್ಟೇ ಇಲ್ಲಿ ಚಡಪಡಿಕೆ ಪ್ರಾರಂಭವಾಗಿದೆ. ಇಷ್ಟೊತ್ತು ತಮ್ಮ ಜೊತೆಗೇ ಕಾಯುತ್ತಿದ್ದ ಬ್ಯಾಗ್ ಗಳನ್ನು ಮುಟ್ಟಿ ಮುಟ್ಟಿ ಸಿದ್ಧರಾಗುತ್ತಿದ್ದಾರೆ. ಪಕ್ಕದಲ್ಲಿದ್ದವರಿಗಿಂತ ಬೇಗ ಬಸ್ ಹತ್ತಿ ಸೀಟು ಹಿಡಿದು ಕುಳಿತುಬಿಟ್ಟರೆ ಇಳಿಯುವವರೆಗೆ ತೊಂದರೆಯಿಲ್ಲ ಎಂದುಕೊಳ್ಳುತ್ತಲೇ ಸುತ್ತಮುತ್ತಲಿದ್ದವರೆಲ್ಲಾ ಶತ್ರುಪಾಳೆಯದವರಂತೆ ಕಾಣುತ್ತಿದ್ದಾರೆ. ತಮ್ಮ ತಮ್ಮ ಅಸ್ತ್ರಗಳನ್ನು ಕೈಗೆತ್ತಿಕೊಂಡು ದಾಳಿಮಾಡಲು ಸನ್ನದ್ಧರಾದ ಸೈನಿಕರ ಗುಂಪೊಂದು ಈಗ ಬಸ್ ಸ್ಟಾಂಡಿನ ಎದುರಿನ ರಸ್ತೆಯ ಅಂಚಿನಲ್ಲಿದೆ.
ಕೆಲವರಿಗೆ ಆ ಬಸ್ಸಿನ ಬೋರ್ಡು ಅಲವರಿಕೆಯನ್ನುಂಟು ಮಾಡಿದೆ. ತಮಗೆ ಬೇಕಾದ ಊರಿನ ಹೆಸರನ್ನು ಆರಿಸುವ ಕೆಲಸ ಬಂತಲ್ಲಾ ಎಂದು ಬೇಸರಿಸಿಕೊಂಡಿದ್ದಾರೆ. ಕೆಲವರು ಬೋರ್ಡಿನಲ್ಲಿರುವ ಸಂಖ್ಯೆಮಾತ್ರದಿಂದಲೇ ’ಇದು ನಮ್ಮದೇ ಬಸ್’ ಎಂದು ಕಂಡುಹಿಡೀದಿದ್ದಾರೆ. ಸ್ವಲ್ಪ ಅನುಭವಸ್ಥರಂತೆ ಕಾಣುವ ಇನ್ನೊಂದಿಬ್ಬರು ಬಸ್ಸಿನ ಬೋರ್ಡಿನ ಕಡೆ ತಿರುಗಿಯೂ ನೋಡದೇ ತಮ್ಮದೇ ಎಂಬ ನಿರ್ಧಾರಕ್ಕ್ಕೆ ಬಂದಿದ್ದಾರೆ ಹಾಗೂ ಬಸ್ಸು ಇಲ್ಲೇ ಬಂದು ನಿಲ್ಲುತ್ತದೆ ಎಂಬ ತೀವ್ರ ವಿಶ್ವಾಸದಿಂದ ಬಸ್ ಸ್ಟಾಂಡಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ ನಿಂತಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯ ಕೊನೆಯ ಹಂತದ ಸುತ್ತಿಗೆ,ದೂರದಿಂದ ಓಡಿಬಂದು ಗೆರೆಯ ಮೇಲೆ ನಿಂತವರಂತೆ ಇಲ್ಲಿಂದಲೇ ಬಸ್ಸಿನ ಬಾಗಿಲಿಗೆ ಜಿಗಿಯುತ್ತೇನೆ ಎನ್ನುವ ಉತ್ಸಾಹದಲ್ಲಿ ಇನ್ನೂ ಕೆಲವರಿದ್ದಾರೆ. ಬಸ್ಸು ಹಸಿರಾದ ದಾರಿ ಸಂಕೇತವನ್ನು ಹಿಂಬಾಲಿಸಿ ಮುಂದೆ ಬರುತ್ತಲಿದೆ. ಬೋರ್ಡಿನ ಕೇಸರೀ ಬಣ್ಣದ ಅಕ್ಷರಗಳು ದಿಕ್ಕೆಟ್ಟವರಂತೆ ಓಡೂತ್ತಿವೆ. ಪಕ್ಕದಲ್ಲಿ ಸ್ಥಿರವಾಗಿದ್ದ ಅಂಕೆಗಳು ಹಳೇ ಆಫೀಸಿನ ಕಾರಕೂನ ಬರೆದಿಟ್ಟ ಯಾವುದೋ ರಸೀದಿ ಸಂಖ್ಯೆಯಂತೆ ಕಾಣುತ್ತಿವೆ. ವಿಷಾದಭಾವದಲ್ಲಿ ಖೈದಿಯ ಬಿಳೀ ಬಟ್ಟೆಯ ಮೇಲಿನ ಅಪರಾಹಿ ಸಂಖ್ಯೆಯಂತೆಯೂ ಕಂಡು ’ದಾರಿ-ದಾರ್ಶನಿಕ’ರಿಗೆ ಆಹಾರವಾಗಿದೆ.
ನಿಲ್ಲುವ ಮೊದಲೇ ಟುಸ್ ಎಂದು ಹೈಡ್ರಾಲಿಕ್ ಬಾಗಿಲುಗಳು ಬೇರ್ಪಡುತ್ತಿದ್ದಂತೆಯೇ ಬಿಳೀ ಬಣ್ಣದ ಕಂಡಕ್ಟರ್ ಎದುರಾಗುತ್ತಾನೆ.ಉದ್ದ ಜಿಗಿತದವರು, ಅನುಭಸ್ಥರೆಲ್ಲಾ ಈಗಾಗಲೇ ಬಸ್ ಹತ್ತಾಗಿದೆ. ಹಿಂದಿನಸಾಲಿನ ಸೀಟೊ ಬಿಡದಂತೆ ಆಸೀನರಾಗಿದ್ದಾರೆ. ಇದು ತಮ್ಮ ಹಳೇ ತಲೆಮಾರಿನ ಬಳುವಳಿ; ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಬಿದ್ದು ಕೂತಿರುವಂತೆ ಕಾಣುತ್ತದೆ. ಕೆಲವರಂತೂ ಎಷ್ಟೋ ವರ್ಷ ಇಲ್ಲೇ ಕುಳಿತವರಂತೆ ಕಾಣುತ್ತಾರೆ. ಬಸ್ಸು ಹೊಸದು. ’ಹೆಂಗಸರು/ಗಂಡಸರು’ ಎಂದು ಯಾವುದೇ ಸೂಚನೆ ಬರೆಯದೇ ಇದ್ದರೂ ಹಳೇ ಅಭ್ಯಾಸದಂತೆ ಹೆಂಗಸರೆಲ್ಲಾ ಮುಂದೇ ಕುಳಿತಿದ್ದಾರೆ. ಮತ್ತೆ ಟುಸ್ ಎಂದು ಬಾಗಿಲುಗಳು ಮುಚ್ಚುತ್ತಿದಂತೆಯೇ ಓಡಿ ಬಂದ ಒಬ್ಬ.. ’ಇದು ಮಾರೇನಹಳ್ಳಿ ಫ್ಲೈ ಓವರ್ ಮೇಲೆ ಹೋಗುತ್ತಾ?..."
ಎಂದು ಕೇಳುತ್ತಿದ್ದಾನೆ. ಮುಚ್ಚಿಕೊಳ್ಳುತ್ತಿದ್ದ ಬಾಗಿಲುಗಳು ಅವನ ಪ್ರಶ್ನೆ ಒಂದು ಪ್ರಶ್ನೆಯೇ ಅಲ್ಲ ಎಂಬರ್ಥದಲ್ಲಿ ವರ್ತಿಸುತ್ತಾ ಹೊರಗಿನ ಧ್ವನಿಯನ್ನು ಕ್ಷೀಣ ಗೊಳಿಸಿ ಕೊನೆಗೊಮ್ಮೆ ಮಾಯ ಮಾಡಿವೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕೊನೇ ಪ್ರಶ್ನೆಯೊಂದಕ್ಕೆ ಉತ್ತರ ಸಿಗದವನಂತೆ ಮುಖಮಾಡಿ ನಿಂತವನ ಹಿಂದಿಕ್ಕಿ ಬಸ್ಸು ಹೊರಟಾಗ ಪ್ರಯಾಣಿಕರು ಹೊರಜಗತ್ತಿನ ಕೊಂಡಿಯೊಂದರಿಂದ ಸಂಪೂರ್ಣವಾಗಿ ಕತ್ತರಿಸಲ್ಪಡುತ್ತಾರೆ.
ಈ ಹೊಸಾ ಬಸ್ಸಿನ ಬಾಗಿಲುಗಳು ಜಾಸ್ತಿ ಶಬ್ದ ಮಾಡುವುದಿಲ್ಲ. ಸೀಟಿಗಿನ್ನೂ ಎಣ್ಣೆ ವಾಸನೆ ಹಿಡಿದಿಲ್ಲ. ನಿಂತವರು ಜೋತಾಡಲು ಇರುವ ಗಳುಗಳೆಲ್ಲ ಗಟ್ಟಿಮುಟ್ಟಾಗಿವೆ. ಅದಲ್ಲದೆ ರಸ್ತೆ ಕ್ಯಾಮರಾಗಳ ನೇರಪ್ರಸಾರ ಮಾಡುವ ಟೀವಿಯೊಂದುತನ್ನ ಕ್ಯಾಬಿನ್ನಿನೊಳಗೇ ಬಂಧಿಯಾದ ಚಾಲಕನ ಎದುರಿನಲ್ಲಿದೆ. ಕಂಡಕ್ಟರನ ಕೈಯಲ್ಲಿ ಟಿಕೆಟ್ ಕೊಡುತ್ತಾ ಸುರುಳಿ ಬಿಚ್ಚುವ ಪೆಟ್ಟಿಗೆ, ಬೇಡವೆಂದರೂ ನಿಲ್ಲಿಸದ ಎಫ್.ಎಂ ರೇಡಿಯೋ, ಅಗಲ ಗಾಜಿನ ಒಮ್ಮುಖ ಪಾರದರ್ಶಕ ಗೋಡೆಗಳು, ಅವೇ ಬಸ್ಸಿನ ಕಿಟಕಿಗಳು.. ಹವನಿಯಂತ್ರಿತ ವಾತಾವರಣ, ತಮ್ಮ ತಲೆಗೆ ಮಾತ್ರ ಗಾಳಿ ಬಿಟ್ಟಿಕೊಳ್ಳಲು ಪ್ರತಿ ಸೀಟಿನ ಮೇಲೆ ತಂಪು ಪಂಕಗಳ ವ್ಯವಸ್ಥೆ..ಇನ್ನೂ ಏನೇನೋ.. ಡ್ರೈವರ್ ಈಗ ಕಂಡಕ್ಟರನ ಹತ್ತಿರ ಮಾತಾಡುತ್ತಲೇ ಮುಂದಿನ ಸಿಗ್ನಲ್ನಲ್ಲಿ ಬಸ್ಸನ್ನು ನಿಲ್ಲಿಸುತ್ತಾನೆ. ಸಿಗ್ನಲ್ಲ್ನಲ್ಲಿ ಬಂದು ಬಾಗಿಲು ಬಡಿಯುವವರಿಗೆ ’ತೆಗೆಯುವುದಿಲ್ಲ’ ಎಂಬಂತೆ ಕೈಸನ್ನೆ ಮಾಡಿ ತನಗಿರುವ ಅಧಿಕಾರವನ್ನು ಅಥವಾ ಸಾಧ್ಯತೆಯೊಂದನ್ನು ಪ್ರಯೋಗ ಮಾಡಿದ ಕೃಥಾರ್ಥ ಭಾವನೆಗೆ ಗುರಿಯಾದ ವ್ಯಕ್ತಿಯಂತೆ ಚಾಲಕ ಕಾಣುತ್ತಾನೆ.
ಇನ್ನು ಹತ್ತಿದವರಿಗೆ ಸೀಟಿಲ್ಲ. ಕುಳಿತವರೆಲ್ಲಾ ತಪಸ್ವಿಗಳಂತೆ, ಏನನ್ನೋ ಜಪಿಸುತ್ತಿರುವಂತೆ ಭಾಸವಾಗುತ್ತಿದೆ. ಯಾರೂ ಸಹ ಯಾರ ಮುಖವನ್ನೂ ನೋಡುತ್ತಿಲ್ಲ. ಪುಸ್ತಕಗಲಲ್ಲೋ, ಪತ್ರಿಕೆಗಳಲ್ಲೋ ಮುಖ ಹುದುಗಿಸಿ, ತಾವು ಯಾರಿಗೂ ಕಾಣುತ್ತಿಲ್ಲ ಎಂಬ ಬಧ್ರತೆಯನ್ನು ಅನುಭವಿಸುತ್ತಿರುವಂತೆ ತೋರುತ್ತದೆ. ನಿಂತವರಲ್ಲಿ ಕೆಲವರು ನಿಂತಿದ್ದೇವಲ್ಲ ಎಂಬ ಕಾರಣಕ್ಕೆ ಹೊರಗಡೆ ದೃಷ್ಟಿ ಹಾಯಿಸಿದ್ದಾರೆ. ಇನ್ನು ಸ್ವಲ್ಪ ಮಂದಿ ತಮ್ಮ ಚೀಲಗಳನ್ನು ಆ ಹೆಗಲಿನಿಂದ ಈ ಹೆಗಲಿಗೆ ವರ್ಗಾಯಿಸುತ್ತಾ ಕಾಲ ಕಳಿಯುತ್ತಿದ್ದಾರೆ. ಕೈಯಲ್ಲಿ ಬ್ಯಾಗ್ ಹಿಡಿದವರು ಕಂಡಕ್ಟರ್ ಬಂದು ಟಿಕೆಟ್ ಅಂದಾಗ ಹಣ ತೆಗೆಯಲು ಪರ್ಸಿಗೆ ಯಾವ ಕೈ ಹಾಕಬೇಕೆಂದು ಗೊತಾಗದೇ ಗೊಂದಲಕ್ಕೀಡಾಗಿದ್ದಾರೆ.’ಬ್ಯಾಗ್ ಅಲ್ ಮೇಲ್ ಇಡಿ.. ಇಲ್ಲಾಂದ್ರೆ ಕೂತವರ ಕೈಗೆ ಕೊಡಿ’ ಅಂದರೆ ಕೇಳುತ್ತಿಲ್ಲ. ಆ ಬ್ಯಾಗುಗಳಲ್ಲಿ ಅವರ ಹೊರಗಿಣುಕಿ ನೋಡುವ ಫೈಲುಗಳಿವೆ.. ಕನ್ನಡ ಶಾಲೆ ಮಾಸ್ತರ್ರು ಅಥವಾ ಅವರವರ ಅಪ್ಪಂದಿರು ಕೊಟ್ಟ ಹಳೇ ಇಂಕ್ ಪೆನ್ ಇದೆ.. ಅಥವಾ ಇರಬಹುದು. ಮನೆಯಿಂದ ಪಂದ ಟಿಫನ್ ಕ್ಯಾರಿಯರ್ ಗಳಿರಬಹುದು. ಅದರಲ್ಲಿ ಬಿಸಿ ಬಿಸಿ ಪುಳಿಯೋಗರೆ ಗೊಜ್ಜಿರಬಹುದು. ಈಗ ಸ್ವಲ್ಪ ತಣ್ಣಗಾಗಿರಬಹುದು. ಅಥವಾ ಬ್ಯಾಗ್ ಖಾಲಿಯೂ ಇರಬಹುದು. ಖಾಲಿತನವಿರಲಿ ಬಿಡಲಿ, ಒಟ್ಟಿನಲ್ಲಿ ಹಿಡೀದವನ ಮನಸ್ಸಿಗೆ ಜೊತೆಯಲ್ಲಿದ್ದೇನೆ ಎಂಬ ನೆಮ್ಮದಿ ಕೊಡುವ ಬ್ಯಾಗುಗಳನ್ನು ಬಿಟ್ಟು ಅವರು ಇರಲಾರರು. ಅದಕ್ಕೇ ಒಂದು ಕೈಲಿ ಬ್ಯಾಗ್ ಹಿಡಿದೇ ಸಾಹಸ ಮಾಡುತ್ತಿದ್ದಾರೆ.
ಬಸ್ಸಲ್ಲಿ ಕುಳಿತವರೆಲ್ಲರೂ ಮೂಕವಿಸ್ಮಿತರು. ಬಸ್ ಹತ್ತುವಾಗ ಮಾತಾಡುತ್ತಿದ್ದವರೂ ಸಹ ಬಸ್ ಹತ್ತಿದ ಮೇಲೆ ಮಾತುಕಳೆದುಕೊಂಡವರಂತೆ, ಪಕ್ಕದಲ್ಲಿದ್ದವ್ರೂ ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಕಂಡಕ್ಟರ್ ಮಾತ್ರ ಆಗಾಗ ಅದೂ ಇದೂ ಅಂತ ಬಡಬಡಾಯಿಸುತ್ತಿದ್ದಾನೆ. ’ಎಲ್ಲಿಗೆ? ಪಾಸು ತೆಗಿರ್ರೀ’ ಎಂದೆಲ್ಲಾ ಮೂಕಿಜನರ ಬಾಯಿಬಿಡಿಸಲು ಪ್ರಯತ್ನಿಸುತ್ತಿದ್ದಾನೆ ಶಾಲಾ ಪರೀಕ್ಷೆ ಕೋಂಎಯಲ್ಲಿ ಪರಿವೀಕ್ಷಕರು ತಿರುಗಿದಂತೆ ಬಸ್ಸಿನ ಉದ್ದಗಲಕ್ಕೂ ಒಮ್ಮೆ ತಿರುಗಿ ಬಂದು ಮತ್ತೆ ಆಸೀನನಾಗುತ್ತಾನೆ. ಈ ಪ್ರಕ್ರಿಯೆ ಬಹಳ ಸಾರಿ ನಡೆದರೂ ಪ್ರತಿ ಸಲವೂ ಹೀಗೆ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲದವನಂತೆಯೇ ಇತ್ತು ಅವನ ಮುಖಭಾವ.
ಹಳೇ ಬಸ್ಸುಗಳಂತೆ ಈ ಬಸ್ಸಿಗೆ ಕಿಟಕಿಗಳೇ ಇಲ್ಲ.. ಕಿಟಕಿ ಸರುಗಳೂ ಇಲ್ಲ.. ಎಲ್ಲಾ ಗಾಜಿನ ಗೋಡೆಗಳು.. ಅದರ ಮೇಲೆ ಅಂಟಿಸಿದ ಬಣ್ಣಬಣ್ಣದ ಅರೆಪಾರದರ್ಶಕ ಜಾಹೀರಾತುಗಳು.. ಒಳಗೆ ಕೂತ ಯಾರಿಗೂ ಈ ಬಣ್ಣಗಳು ಕಾಣುವುದೇ ಇಲ್ಲ..ಇವೆಲ್ಲವನ್ನೂ ಮೊದಲೇ ನೋಡಿದ್ದೇನೆ.. ಏನೂ ವಿಶೇಷವಿಲ್ಲ ಎಂಬಂತಿರುವ ಅವರುಗಳು ನೋಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆಸಕ್ತಿ ತೋರಬಯಸುವ ಮನಸುಗಳೂ ದಾಕ್ಷಿಣ್ಯ ತೋರುತ್ತಿದ್ದಾವೆ... ನಟಿಸುತ್ತಿದ್ದಾವೆ..ಮಾತನಾಡಲು ಕಾರಣವಿದ್ದೂ ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೋ ಎಂದು ಮೌನವ್ರತ ವಹಿಸಿದ್ದಾವೆ.. ಪಕ್ಕದವರ ಪುಸ್ತಕದಲ್ಲಿ ಅಥವಾ ಪತ್ರಿಕೆಯ ಒಳಗೆ ಹಣಕಲು ಅವಕಾಶವಿದ್ದೂ ವಿಚಿತ್ರ ಹಿನ್ನೆಡೆ ಅನುಭವಿಸಿದ್ದಾವೆ. ಎಲ್ಲಿ ಮಾತಾಡಿಬಿಡುತ್ತೇನೋ ಅಥವಾಇಲ್ಲಿ ಇತರರು ಮಾತಾಡಿದ್ದು ಕೇಳಿಬಿಡುತ್ತದೋ ಎಂದು ಭಯಪಟ್ಟಿದ್ದಾವೆ.. ಈ ಭಯವೇ ಕೂತವರ ದಾಕ್ಷಿಣ್ಯವಾಗಿ ಮಾರ್ಪಟ್ಟೀದೆ. ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ, ಮನೆಯಿಂದ ಬರುವಾಗ ಬಿಸಿ ಬಿಸಿ ಕಾದ ಇಸ್ತ್ರಿಪೆಟ್ಟಿಗೆಯಿಂದ ಮುಖಕ್ಕೆ ಇಸ್ತ್ರಿ ಹಾಕಿಕೊಂಡು ಬಂದವರಂತೆ ಕೂತುಬಿಟ್ಟಿದ್ದಾರೆ. ಎಫ್.ಎಮ್ ಮಾತ್ರ ತನಗೆ ಬೆಕಾದ ಹಾಡನ್ನು ತನ್ನ ಪಾಡಿಗೆ ತಾನು ಗುನುಗಿಕೊಳ್ಳುತ್ತಿದೆ. ಆರ್ ಜೆಗಳ ಧ್ವನಿಗಳು ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಅಡಿಕೆಯಿಂದ ಮಧ್ಯೆ ಮಧ್ಯೆ ತೂರಿಬರುತ್ತಿವೆ. ಯಾವುದೇ ಭಾಷೆಯ ಯಾವುದೇ ಹಾಡು ಬಂದರೂ ಜನರದ್ದು ಒಂದೇ ಭಾವ. ಸ್ಥಿತಪ್ರಜ್ಞ ಗಂಭೀರವದನಗಳಿಂದ ಅಲಂಕೃತರಾದ ಪ್ರಯಾಣಿಕರು ಯಾವ ಸಂಗತಿಗಳು ಜರ್ಗಿದರೂ ತಾವಿರುವುದು ಹೀಗೇ ಎಂದು ಕುಳಿತ ರಸ್ತೆ ಬದಿಯ ವಿಗ್ರಹಗಳಿಗೆ ಉಪಮೆಯಾಗುತ್ತಾರೆ.
ಮುಂದಿನ ಸರ್ಕಲ್ಲಿನಲ್ಲಿ ಮತ್ತೆ ಸಿಗ್ನಲ್ಲು.. ಹಸಿರಿಂದ ಕೆಂಪಗಾಗುವ ಹಂತದಲ್ಲಿ.. ಬಸ್ಸಿನ ವೇಗೋತ್ಕರ್ಷ ಹೆಚ್ಚುತ್ತಿದೆ. ರೊಯ್ಯನೆ ಸರ್ಕಲ್ ದಾಟುತ್ತಿದ್ದಂತೆಯೇ ಎದುರಿಗೆ ಮೋಟರ್ ಬೈಕ್ ಸವಾರನೊಬ್ಬ ಅಡ್ಡ ಬಂದ.. ಬಸ್ಸಿಗೆ ಬಡಿದೇ ಬಿಟ್ಟ ಎಂಬಷ್ಟರಲ್ಲಿ ಹಾರಿಕೊಂಡ.. ಬಿದ್ದ.. ಬಸ್ಸಿನಲ್ಲಿ ಕೆಲವು ಜನ ಎದ್ದು ನಿಂತಿದ್ದಾರೆ.. ಗೋಡೆಗಳಂತಿದ್ದ ಕಿಟಕಿಯಲ್ಲಿ ಕಣ್ಣಿಟ್ಟಿದ್ದಾರೆ. ಬಿದ್ದವನ ಬಳಿ ಗುಂಪು ಸೇರಿತು.. ಬಿದ್ದವ ಈಗ ಏಳುತ್ತಿದ್ದಾನೆ.. ಬಸ್ ಬಳಿಗೇ ದುರುಗುಟ್ಟಿ ನೋಡುತ್ತಿದ್ದಾನೆ.. ಏನೋ ಕೂಗುತ್ತಿದ್ದಾನೆ.. ಸಿಟ್ಟಿನಲ್ಲಿ ತುಟಿಗಳು ಅದುರುತ್ತಿವೆ.. ಕೈ ಮೇಲೆತ್ತಿ ಬಸ್ ನಿಲ್ಲಿಸಲು ಕಿರುಚುತ್ತಾ ಬರುತ್ತಿದ್ದಾನೆ.. ಅವನು ಕೂಗಿದ್ದು ಮಾತ್ರ ಬಸ್ಸಿನಲ್ಲಿರಿವ ಯಾರಿಗೂ ಕೇಳುತ್ತಿಲ್ಲ.. ಬಯ್ಯುತ್ತಿರಬೇಕು ಅಂದುಕೊಂಡಿರಬೇಕು.. ಮೂಕಿ ಚಿತ್ರ ನೋಡಿದಂತೆ ಅವರವರ ಮನಸ್ಸಿಗೆ ಬಂದಂತೆ ಅಂದುಕೊಂಡು ಅಯ್ಯೋ ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಡ್ರೈವರ್ ಮಾತ್ರ ಹೆದರಿಕೆಯಿಂದ ವೇಗವನ್ನು ಇನ್ನೂ ಹೆಚ್ಚಿಸುತ್ತಲೇ ಇದ್ದಾನೆ.. ಬಿದ್ದವ ಸಣ್ಣವನಾಗುತ್ತಾ ಆಗುತ್ತಾ ಕೊನೆಗೊಮ್ಮೆ ಮಾಯವಾಗುವ ಹೊತ್ತಿಗೆ ಬಸ್ಸು ದಿನವೂ ಹೊಗುವ ದಾರಿ ಬಿಟ್ಟು ಯಾವುದೋ ಒಳ ದಾರಿ ಹಿಡಿದು ನುಗ್ಗಿತ್ತು.
ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕೆಂಪು ಧ್ವಜ ಸಿಕ್ಕಿಸಿದ ಬೈಕುಗಳಲ್ಲಿ ಹಿಂಬಾಲಿಸುತ್ತ ಬಂದ ಹಲವರಲ್ಲಿ ಬಿದ್ದವನೂ ಇದ್ದಾನೆ!! ಚಾಲಕನ ಎದೆ ಧಸ್ ಎನ್ನುತ್ತದೆ. ಧಸ್ ಎಂದದ್ದು ಎಲ್ಲರಿಗೂ ಕೇಳಿದಂತೆ ಕುಳಿತವರೆಲ್ಲಾ ಕಂಗಾಲಾಗುತ್ತಾರೆ. ರೋಷಾವೇಷಗಳಿಂದ ತನ್ನನ್ನು ಬೀಳಿಸಿದ ಬಸ್ಸನ್ನು ಮುತ್ತಲು ಬರುವ ಉಮೇದಿಯಲ್ಲಿ ಅವನ ಮುಖ ಕೆಂಪಾಗಿದೆ. ಇಷ್ಟು ಹೊತ್ತು ತಟಸ್ಥವಾಗಿದ್ದ ಬಸ್ಸಿನ ಒಳಗಿನ ಲೋಕದಲ್ಲಿ ತಣ್ಣನೆಯ ಹೆದರಿಕೆಯ ಅಲೆಯೊಂದು ಎದ್ದು ಕೂತಿದೆ. ಅಕ್ಕ ಪಕ್ಕದವರ ಮುಖ ನೋಡಿ ಭಯವನ್ನೂ ಆತಂಕವನ್ನೂ ಹಸ್ತಾಂತರಿಸುತ್ತಾ ಅದರಲ್ಲೇ ನೆಮ್ಮದಿ ಕಂಡಂತೆಲ್ಲಾ ಆಗುವ ಭಾವನೆ ಎಲ್ಲರ ಮುಖವನ್ನು ಅಲಂಕರಿಸಿದೆ. ಬಸ್ಸಿನ ವೇಗವನ್ನು ಹೆಚ್ಚಿಸುತ್ತಾನೆ ಚಾಲಕ. ಗುಂಪು ಹಿಂಬಾಲಿಸುತ್ತಲೇ ಇದೆ. ಬಲಗಡೆಯ ಕ್ರಾಸಿನಲ್ಲಿ ಬಸ್ ತಿರುಗುತ್ತಿದ್ದಂತೆ ದೊಡ್ಡದೊಂದು ಕಲ್ಲು ಬಸ್ಸಿಗೆ ಬಡಿಯುತ್ತದೆ. ಗಾಜು ಪುಡಿಪುಡಿಯಾಗಿ ಕಲ್ಲು ಒಳನುಗ್ಗುತ್ತದೆ.. ಚಾಲಕ ಇನ್ನೂ ವೇಗ ಹೆಚ್ಚಿಸಿದ್ದಾನೆ.. ಗುಂಪು ನಿಧಾನವಾಗಿ ದೂರವಾಗುತ್ತಿದೆ.. ಬಿದ್ದ ಕಲ್ಲು ಬಸ್ಸಿನ ಒಳ ಜಗತ್ತಿನ ಪರಿಚಯವಿಲ್ಲದೆ ಸುಮ್ಮನೆ ಬಿದ್ದುಕೊಂಡಿದೆ.
ಕಲ್ಲು ಬಿದ್ದದ್ದೇ ತಡ ಇಷ್ಟೊತ್ತಿಲ್ಲದ ಹೊರ ಜಗತ್ತು ಒಡೆದ ಕಿಟಕಿಯಲ್ಲೇ ಒಳನುಗ್ಗುತ್ತದೆ.ಮತ್ತೆ ಆಫೀಸಿನ,ಫೈಲುಗಳ,ಬ್ಯಾಗುಗಳ,ಪೆನ್ನುಗಳ,ಟಿಫಿನ್ ಕ್ಯಾರಿಯರ್ ಗಳ ವಿಚಾರಗಳ ಆವರಣವನ್ನು ಛೇದಿಸಿ ಹೊರಗಿನ ಸದ್ದೆಲ್ಲವೂ ಒಳಗೆ ತುಂಬಿಕೊಳ್ಳುತ್ತಾ ಹೋಗುತ್ತದೆ. ’ಸಧ್ಯ ಕಲ್ಲು ಯಾರಿಗೂ ಬಡಿಯಲಿಲ್ಲ’ ಎಂದು ಸಮಾಧಾನದಿಂದ ಪಕ್ಕದವರ ಮುಖ ನೋಡುತ್ತಾರೆ. ’ಅರೆ ಇಷ್ಟೊತ್ತು ಇಲ್ಲಿ ಕೂತಿದ್ದು ನೀವೇನಾ,, ಗೊತ್ತೇ ಆಗಲಿಲ್ಲ’ ಎಂಬ ಭಾವನೆ ಇಬ್ಬರಲ್ಲೂ ಮೂಡುತ್ತದೆ. ಕೆಲವೊಬ್ಬರು ಮೊಬೈಲು ಕಿವಿಗಿಟ್ಟು ಜೋರಾಗಿ ಯಾರ ಜೊತೆಯೋ ನಡೆದ ಘಟನೆಯ ವಾರ್ತಾಪ್ರಸಾರ ನಡೆಸಿದ್ದಾರೆ.ಒಟ್ಟಿನಲ್ಲಿ ಯಾವುದೋ ವರ ಸಿಗುತ್ತಿರುವ ಹಾಗೆ ಪದೇ ಪದೇ ಆ ಒಡೆದ ಕಿಟಕಿ ಗಾಜನ್ನೇ ನೋಡುತ್ತಿದ್ದಾರೆ. ಪುಸ್ತಕಗಳಲ್ಲಿ ತಲೆ ಹುದುಗಿಸಿದವರೆಲ್ಲರೂ ಎಫ್.ಎಂ ಹಾಡಿಗೆ ತಲೆ ತೂಗುತ್ತಿದ್ದಾರೆ. ತಮ್ಮ ಬ್ಯಾಗುಗಳನ್ನು ಹೆಚ್ಚು ಒತ್ತಿಕೊಂಡು ನಿಂತಿದ್ದವರು ಕೂತವರ ಕೈಗೆ ಕೊಟ್ಟು ’ಸ್ವಲ್ಪ ಹಿಡ್ಕೊಳ್ಳಿ’ ಅಂದಿದ್ದಾರೆ. ಕುಳಿತವರು ’ಏನೋ ಆಗುತ್ತದೆ ಅಂದುಕೊಂಡಿದ್ದೆವು.. ಸದ್ಯ ಏನೂ ಆಗಲಿಲ್ಲ’ ಎನ್ನುತ್ತಾ ಬ್ಯಾಗು ಇರಿಸಿಕೊಂಡಿದ್ದಾರೆ. ಬ್ಯಾಗುಗಳ ಆತ್ಮೀಯತೆ ಅವರಿಗೂ ಇಷ್ಟವಾಗುತ್ತದೆ. ’ಯಾರೂ ಹೆದ್ರಬೇಡಿ.. ಏನೂ ಅಗಿಲ್ಲ’ ಎಂದು ಕಂಡಕ್ಟರ್ ಮಾತನ್ನು ಹಾರಿಸುವ ಯತ್ನದಲ್ಲಿದ್ದಾನೆ. ಆಗಲೇ ಕಂಡಕ್ಟರ ನೆರಮನೆಯ ಸಂಬಂಧಿಕನಂತೆ ಕಾಣುತ್ತದೆ. ವೇಗವನ್ನು ಹೆಚ್ಚಿಸುತ್ತಲೇ ಇದ್ದ ಚಾಲಕ ನೂರು ಮೀಟರ್ ಓಟಕ್ಕೆ ಮೊದಲು ಸೂಚನೆಗಾಗಿ ಕಾಯುತ್ತಿರುವವರಂತೆ ಮೈ ಬಗ್ಗಿಸಿ ಗಾಡಿ ಓಡಿಸುತ್ತಿದ್ದಾನೆ. ಬಸ್ಸು ಈಗ ಹಳೇ ಪರಿಚಯದ ಗೆಳೆಯನ ಮನೆಯಂತೆ ಕಾಣುತ್ತಿದೆ. ಆತಂಕ, ಗಾಬರಿ,ಕೋಪಗಳೆಲ್ಲಾ ಹೊಸ ಉಲ್ಲಾಸವಾಗಿ ನಗು ಬರುತ್ತಿದೆ. ಗಾಜು ಚೂರಾಗಿ ನಿರ್ಮಾಣವಾದ ಕಿಟಕಿಯಿಂದ ಸೂರ್ಯ ಬಿಸಿಲು ಕೋಲನ್ನು ನುಗ್ಗಿಸಿದ್ದಾನೆ. ಬಿಸಿಗಾಳಿ ಒಳಬರುತ್ತಿದೆ. ಅದರ ಬೆಚ್ಚನೆಯ ಅನುಭಾವಕ್ಕೆ ನೈಸರ್ಗಿಕ ಅನಿಲದ ಆಸ್ವಾದನೆಗೆ ಮುಖ ಕೊಟ್ಟವರು ಹಲವರು.
ಬಸ್ಸು ಕೊನೆಗೂ ತಿರುಗಿ ತಿರುಗಿ ತನ್ನ ಹಳೇ ಹಾದಿಗೆ ಬರುತ್ತದೆ. ದಾರಿಯನ್ನು ವೇಳೆಯಲ್ಲಿ ಅಳೆಯುವವರು ಹತ್ತು ನಿಮಿಷ ಲೇಟಾಯ್ತು ಅಂದಿದ್ದಾರೆ. ಆ ಕಿಡಿಗೇಡಿಗಳ ಗುಂಪು ದೂರಾಗಿರುವುದನ್ನು ಧೃಢಪಡಿಸಿಕೊಂಡ ಚಾಲಕ ನಿಧಾನವಾಗಿ ಸಮಚಿತ್ತಕ್ಕೆ ಮರಳುತ್ತಿದ್ದಾನೆ. ಮುಂದಿನ ಶ್ತಾಪಿನಲ್ಲಿ ಬಸ್ ನಿಲ್ಲಿಸಿ ಬಾಗಿಲು ತೆರೆಯುತ್ತಾನೆ.’ಟುಸ್’ ಎಂದ ಬಾಗಿಲುಗಳು ಈಗ ಮಹತ್ವವನ್ನು ಕಳೆದುಕೊಂಡಿವೆ. ಕುಳಿತವರು,ನಿಂತವರು,ಜೋತುಬಿದ್ದವರಿಗೆಲ್ಲಾ ಬೆಕಾದ ಹೊರಸಂಪರ್ಕ ಒಡೆದ ಕಿಟಕಿಯಿಂದಲೇ ಲಭ್ಯವಾಗಿದೆ. ಈಗ ಬಾಗಿಲ ಹೊರಗೆ ಸಿಮೆಂಟ್ ಚೀಲವನ್ನು ಹಿಡಿದ ಅಪ್ಪ, ಪುಟ್ಟ ಮಗನೊಡನೆ ನಿಂತಿದ್ದಾನೆ. ಗಾರೆ ಕೆಲಸಕ್ಕೆ ಬೆಕಾದ ಕೆಲವು ಪರಿಕರಗಳು ಚೀಲದ ಹರುಕು ಬದಿಯಿಂದ ಹೊರಗಿಣುಕುತ್ತಿವೆ. ’ಎಲೆಕ್ಟ್ರಾನಿಕ್ ಸಿಟಿ..? ಎಷ್ಟು?’ ಅಪ್ಪ ಕೇಳುತ್ತಾನೆ. ಮಗ ಒಳನುಗ್ಗಲು ಒಂದು ಕಾಲು ಫೂಟ್ ಬೋರ್ಡಿನ ಮೇಲೆ ಇಟ್ಟಾಗಿದೆ. ’ಇಪ್ಪತ್ತೈದು’ ಕಂಡಕ್ಟರ್ ಎನ್ನುವಷ್ಟರಲ್ಲೇ ಡ್ರೈವರ್ ಬಾಗಿಲು ಮುಚ್ಚಿದ್ದಾನೆ. ಅಪ್ಪ ಮಗನನ್ನು ಹೊರಗೆಳೆದುಕೊಳ್ಳುತ್ತಾನೆ. ಬಸ್ ವೇಗ ಗಳಿಸುತ್ತಿದೆ. ’ ಅದಕ್ಕೆ ಇಪ್ಪತ್ತೈದಂತೆ.. ಬೇರೆ ಬಸ್ಸಿಗೆ ಹೋಗೋಣ..’ ’ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು’ ಮಗು ಹಠಹಿಡಿದಂತೆ ಕಾಣುತ್ತಿದೆ.. ಅಪ್ಪ ಬರುತ್ತಿಲ್ಲ.. ಮಗನನ್ನೂ ಬಿಡುತ್ತಿಲ್ಲ. ಅಪ್ಪನ ಕೈಯಿಂದ ತಪ್ಪಿಸಿಕೊಂಡು ಬಸ್ ಹಿಂದೆಯೇ ಮಗ ಓಡಿ ಬರುತ್ತಿರುವುದನ್ನು ಬಸ್ಸಿನಲ್ಲಿ ಯಾರೋ ನೋಡಿದ್ದಾರೆ.. ಮತ್ತು ಎಲ್ಲರಿಗೂ ತೋರಿಸಿದ್ದಾರೆ. ’ನಾನೂ ಬರ್ತೀನಿ’ ಎಂದು ಕೂಗುತ್ತಾ ಬರುತ್ತಿರವ ಅವನನ್ನು ಬಾ ಬಾ ಎಂದು ಕೂಗುತ್ತಿದ್ದಾರೆ. ಅವನು ಕೈ ಮೇಲೆ ಮಾಡಿ ಬಸ್ಸನ್ನು ಸಮೀಪಿಸುತ್ತಿದ್ದಂತೆಯೇ ಜನ ಒಡಕು ಕಿಟಕಿಯಲ್ಲಿ ಕೈ ಹಾಕಿ ಅವನನ್ನು ಎತ್ತಿ ಒಳಕ್ಕೆಳೆದುಕೊಳ್ಳುತ್ತಾರೆ. ಬಸ್ಸಿನೊಳಗಿಂದಲೇ, ಅದೇ ರಂಧ್ರದಲ್ಲಿ ತಲೆ ಹೊರಗೆ ಹಾಕಿ ಅಪ್ಪನನ್ನೂ ಕರೆಯುತ್ತಿದ್ದಾನೆ. ನಡೆಯುತ್ತಿದ್ದ ಘಟನೆ ನೋಡಿ ದಂಗಾದ ಅಪ್ಪ ಈಗ ಬಸ್ಸಿನ ಹಿಂದೆಯೇ ಓಡಿ ಬರುತ್ತಿದ್ದಾನೆ...
ಜ್ಯೋತಿಷೋರ್ಮಾ ತಮರ್ಗಮಯ
ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ ಧಾರಾವಾಹಿ ನೋಡುತ್ತಿರುವಾಗ ಹೇಳದೇ ಕೇಳದೇ ಕರೆಂಟು ಹೋಗಿದ್ದರಿಂದ ಆಗಿದ್ದು ಭವತ್ಪ್ರಭುವಿಗೆ.. ಈ ಭವತ್ಪ್ರಭುವಿನ ಹೆಸರೇ ಸೂಚಿಸುವಂತೆ ಅವನದ್ದು ಸ್ವಲ್ಪ ಹಳೆಯ ಜನಾಂಗ.. ಸುಮಾರು ಐವತ್ತೆರಡು ವಯಸ್ಸಿರಬಹುದು. ಅವನ ಬಣ್ಣ , ದೇಹರಚನೆ, ತಲೆಗೂದಲು ಇತ್ಯಾದಿಗಳ ವಿವರವನ್ನು ಈ ಕಥೆ ಯಾಕೆ ಹೇಳುವುದಿಲ್ಲ ಎಂದರೆ ’ಬೇಕಾಗಿದ್ದಾರೆ’ ಎಂದು ಪತ್ರಿಕೆಗಳಲ್ಲಿ ಪ್ರಿಂಟ್ ಹಾಕಿಸುವ ಯಾವ ಪ್ರಮೇಯವೂ ಇಲ್ಲ. ಭವತ್ಪ್ರಭುವಿನ್ನೂ ಕಳೆದು ಹೋಗಿಲ್ಲ. ಮತ್ತು ಅವನು ಯಾರಿಗೂ ಬೇಕಾಗಿಲ್ಲ. ಅವನೇ ಬರೆದು ಕೊಳ್ಳುವಂತೆ ಅವನೊಬ್ಬ ಭ್ರಮಾಜೀವಿ. ತಾನಾಯಿತು ತನ್ನ ಕಥೆಯಾಯಿತು ಎಂದು ಒಂದು ಬದಿಗೆ ಇದ್ದು ಬಿಡುವ ವ್ಯಕ್ತಿ. ಹ್ಮಂ.. ಬರೆದುಕೊಂಡಿದ್ದಾನೆ ಎಂದಾಗ ನೆನಪಾಯಿತು. ಭವತ್ಪ್ರಭು ತನ್ನ ಡೈರಿಯನ್ನು ಬಿಟ್ಟು ಬೇರೆ ಏನನ್ನೊ ಬರೆದಿಲ್ಲ. ಹೆಚ್ಚೆಚ್ಚು ಎಂದರೆ ಸುಧಾದಲ್ಲಿ ಪದಬಂಧ ತುಂಬಿರಬಹುದು ಅಷ್ಟೇ. ಅವನಿಗೆ ಓದುವಾಗ ಮಾತ್ರ ಕನ್ನಡಕ ಬೇಕಾಗುತ್ತದೆ. ಸಮೀಪವೋ ದೂರದ್ದೋ ದೃಷ್ಟಿ ದೋಷವಿದೆ ಅಂತ ಕಾಣುತ್ತದೆ. ಮತ್ತು ಅವನಿಗೆ ಜನರು ಏಕವಚನದಲ್ಲಿ ಕರೆದರೆ ಬೇಸರವಾಗುವುದಿಲ್ಲ.
ಇದಕ್ಕೂ ಮೊದಲು ಕರೆಂಟ್ ಇತ್ತು.. ಫ್ಯಾನ್ ಹಾಕಿಕೊಂಡು ಅದರ ಕರಕರವೋ ಗರಗರವೋ ಸದ್ದಿಗೆ ಗಮನ ಕೊಡದೇ ಭವತ್ಪ್ರಭು ಅವನ ಮನಸ್ಸಿಗೆ ಬಂದ ಹಾಡು ಗುನುಗುತ್ತಾ ಟಿವಿ ನೋಡುತ್ತಿದ್ದ.. ಫಟ್ ಎಂದು ಕರೆಂಟು ಹೋಯಿತು.. ಫ್ಯಾನು ನಿಧಾನವಾಗಿ ತಿರುಗುತ್ತಾ ನಿಲ್ಲುವ ಹಂತಕ್ಕೆ ಬರುತ್ತಿತ್ತು. ಕೊಂಯ್ ಎಂದು ಶಬ್ಧ ಮಾಡಿ ನಿಂತಿತು. ಆಗ ಅವನಿಗೆ ಅರಿವಿಗೆ ಬರತೊಡಗಿತ್ತು ಕರೆಂಟು ಹೋಗಿದೆ ಎಂದು. ಅವನ ಗುನುಗಿನ ಹಾಡಿಗೆ ಧಾಟಿ ತಪ್ಪಿದಂತಾಯಿತು. ಓಹೋ ಎಂದು ಅಚೀಚೆ ನೋಡುತ್ತಾ ಹಾಡು ನಿಲ್ಲಿಸಿದ. ನೀರವ ಮೌನ. ಮತ್ತೆ ಹಾಡು ಪ್ರಾರಂಭಿಸಲು ಯತ್ನಿಸಿದರೆ ಆ ಲಯ ಅಥವಾ ಏಕತಾನತೆ ಅವನಿಗೆ ಬರಲೇ ಇಲ್ಲ.. ಕರೆಂಟ್ ಇದ್ದಾಗ ಅಥವಾ ಆ ಫ್ಯಾನಿನ ಗರಗರದ ನಡುವೆ ಬಂದ ಆಲಾಪ ಇದು ಇಲ್ಲದಿರುವಾಗ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಥಟ್ಟನೆ ಭವತ್ಪ್ರಭುವಿನ ಚಿತ್ತಕ್ಕೆ ಮೂಡಿತು. ಭ್ರಮಾಜೀವಿ ಎಂದು ಮೊದಲೇ ಬರೆದ ಕಾರಣ ಇದರಲ್ಲಿ ಜಾಸ್ತಿ ಆಶ್ಚರ್ಯ ಇಲ್ಲದಿದ್ದರೂ ಕುತೂಹಲ ಮಾತ್ರ ಅವನಿಗೆ ಅವನ ಮೇಲೇ ಮೂಡಿತು. ಆ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ. ತಾನು ತಿಳಿದಿದ್ದ ಫ್ಯಾನು ಕೇವಲ ಗಾಳಿ ಪಂಕವಲ್ಲ.. ಅದು ಬೇರೇನೋ ಇದೆ ಎಂದು ಉತ್ತರದ ಹತ್ತಿರದ ಸಮಾಧಾನ ರೂಪವನ್ನು ಭ್ರಮಿಸಿಕೊಂಡ.
ಹೀಗೆ ಕರೆಂಟು ಹೋಗಿದ್ದೇ ತಡ.. ಭವತ್ಪ್ರಭು ಕವಿಯಾಗುತ್ತಾನೆ.. ನಿಧಾನವಾಗಿ ಎದ್ದು ಒಂದು ಕೈಯಲ್ಲಿ ಸುತ್ತಿದ್ದ ಲುಂಗಿಯ ಗಂಟನ್ನು ಹಿಡಿದು,ಇನ್ನೊಂದು ಕೈಯಲ್ಲಿ ಗೋಡೆಯನ್ನು ಬಳಚುತ್ತಾ ಅಡುಗೆ ಮನೆಗೆ ಹೋಗಿ ಮೇಣದ ಬತ್ತಿಯನ್ನು ತಂದ. ತನ್ನ ಮಲಗುವ ಕೋಣೆಯ ಟೇಬಲ್ಲಿನ ತುದಿಗೆ ಮೇಣದ ಬತ್ತಿಯನ್ನು ಅಂಟಿಸಿಕೊಂಡು ಅದರ ಜ್ವಾಲೆ ಕರಗಿಸುವ ಎತ್ತರವನ್ನು ಅಳೆಯುತ್ತಾ ಕುರ್ಚಿಯ ಮೇಲೆ ಕುಳಿತ. ಕೂರುವಾಗ ಕುರ್ಚಿಯನ್ನು ಎಳೆದದ್ದರಿಂದ ಬ್ರೋಂ ಎಂದು ಕುರ್ಚಿಯ ಕಾಲು ಅರಚಿತು. ಭವತ್ಪ್ರಭುವಿಗೆ ಅದು ಭಯ ತಂದಿರಬೇಕು. ಒಂದು ಸಲ ಸುತ್ತಲೂ ನೋಡಿ, ಮತ್ತೆ ಮೇಣದ ಬತ್ತಿಯನ್ನೇ ದಿಟ್ಟಿಸುತ್ತಾ ಕುಳಿತ. ಈಗ ಅವನಿಗೆ ಒಂಥರಾ ನೆಮ್ಮದಿ. ಜಂಜಾಟಗಳ ಹಿಡಿತದಿಂದ ತಪ್ಪಿಸಿಕೊಂಡ ಸ್ವರ್ಗ ಸುಖ, ಮುಕ್ತತೆಯ ಅನುಭವ..
ಮೇಜಿನ ಡ್ರಾಯರ್ನಲ್ಲಿ ಇಂಗ್ಲಿಷ್ ಪೇಪರಿನ ಬಾಯಿಂಡ್ ಹಾಕಿದ್ದ ಎಲ್ಲೈಸಿ ಡೈರಿಯೊಂದನ್ನು ತೆಗೆದು ಕುಳಿತಾಗ ಭವತ್ಪ್ರಭು ಥೇಟ್ ದಾರ್ಶನಿಕನಂತೆ ಕಾಣುತ್ತಿದ್ದ.. ಅದೇ ಅದೇ ಅವನ ಡೈರಿ.. ಹೀಗೆ ಕರೆಂಟು ಹೋದಾಗೆಲ್ಲಾ ಮೇಣದ ಬತ್ತಿ ಹಚ್ಚಿಟ್ಟು ಅದು ಕರಗುವವರೆಗೂ ಕಾಯುತ್ತಾ, ಅದು ಆರಿದ ಮೇಲೆ ತೆಗೆದು ಕೂರುವುದು ಇದೇ ಡೈರಿಯನ್ನು. ಅದು ಕತ್ತಲ ಪುಸ್ತಕ. ಅಂದರೆ ಕತ್ತಲೆಯಲ್ಲಿ ಮಾತ್ರ ಅದನ್ನು ಉಪಯೋಗಿಸುತ್ತಾನೆ ಭವತ್ಪ್ರಭು. ಉಪಯೋಗ ಅಂದರೆ ಬರೆಯುವುದು ಮಾತ್ರ.. ಈವರೆಗೆ ಬರೆದಿದ್ದನ್ನು ಒಮ್ಮೆಯೂ ಓದಿಲ್ಲ.. ಯಾರಿಗೂ ಓದಲೂ ಕೊಟ್ಟಿಲ್ಲ.. ಏಕೆಂದರೆ ಅದು ಹೊರಗೆ ಬರುವುದೇ ಕತ್ತಲೆಯಲ್ಲಿ.. ಆ ಡೈರಿಗೊಂದು ಬುಕ್ ಮಾರ್ಕಿಗೆಂದು ಹಳದೀ ಬಣ್ಣದ ಒಂದು ದಾರವಿದೆ. ಆ ಕತ್ತಲಲ್ಲಿ ಅದರ ಹಳದಿ ಬಣ್ಣ ಭವತ್ಪ್ರಭುವಿಗೆ ಯಾವ ಸಹಾಯ ಮಾಡದಿದ್ದರೂ ಅದನ್ನು ಅವನು ಬಹಳವಾಗಿ ಉಪಯೋಗಿಸುತ್ತಾನೆ. ಡೈರಿಯಲ್ಲಿ ಎಲ್ಲಿಯವರೆಗೆ ಬರೆದಿತ್ತು ಎಂಬುದನ್ನು ಅದು ಸದಾ ಸೂಚಿಸುವಂತೆ ಪ್ರತಿ ಬರಹದ ನಂತರ ಅದನ್ನು ಆ ಪುಟಕ್ಕೆ ಇಟ್ಟು ಮುಚ್ಚಿಡುತ್ತಾನೆ. ಅವನು ಕತ್ತಲೆಯಲ್ಲಿ ಮಾತ್ರ ಈ ಡೈರಿಯನ್ನು ಬರೆಯುವುದರಿಂದ ಆ ಬುಕ್ ಮಾರ್ಕ್ ಇಲ್ಲದೇ ಹೋದರೆ ಅವನಿಗೆ ಎಲ್ಲಿಂದ ಬರೆಯಬೇಕು ಎಂಬುದು ಗೊತ್ತಾಗುವುದಿಲ್ಲ. ಮತ್ತು ಇದೇ ಕಾರಣಕ್ಕೆ ಅವನು ಪ್ರತಿಸಲ ಹೊಸ ಪುಟದಿಂದಲೇ ಅದರಲ್ಲೂ ಎಡ ಮಗ್ಗುಲಲ್ಲೇ ಬರೆಯಲು ಆರಂಭಿಸುತ್ತಾನೆ. ಈಗ ಸದ್ಯಕ್ಕೆ ಮೇಣದ ಬತ್ತಿ ಆರುವುದನ್ನೇ ಕಾಯುತ್ತಿದ್ದಾನೆ..
ಮೇಣದ ಬತ್ತಿಯೆಂದ ಮೇಲೆ ಅದು ನಿಧಾನವಾಗಿಯೇ ಕರಗುತ್ತದೆ. ಭವತ್ಪ್ರಭುವಿಗೆ ಆ ಕುರಿತಾಗಿ ಏನೂ ಬೇಸರವಿಲ್ಲ.. ಈ ಮೇಣದ ಬತ್ತಿ ಕರಗುವುದರ ಒಳಗೇ ಕರೆಂಟು ಏನಾದರೂ ಬಂದು ಬಿಟ್ಟರೆ ಆ ದಿನ ಆತ ಡೈರಿ ಬರೆಯುವುದಿಲ್ಲ. ಹೀಗಾಗಿ ಅವನ ಡೈರಿಯನ್ನು ಯಾರಾದರೂ ಓದಿದರೆ ಯಾವ್ಯಾವ ದಿನ ಕರೆಂಟು ಮೇಣದ ಬತ್ತಿ ಕರಗುವುದರ ಒಳಗೇ ತಿರುಗಿ ಬಂದಿತ್ತು ಎನ್ನುವುದು ಬಹಳ ಬೇಗ ಗೊತ್ತಾಗುತ್ತದೆ. ಒಂದು ದೀಪದ ಹುಳು ಜ್ವಾಲೆಯ ಬಳಿಬಂದು ಕಮಾನಿನಂತೆ ಸುತ್ತಲೂ ಜಿಗಿದು ಮೈ ಸುಟ್ಟುಕೊಂಡು ನೆಲಕ್ಕೆ ಬಿತ್ತು. ಭವತ್ಪ್ರಭುವಿಗೆ ಮಜ. ಅದರ ರೆಕ್ಕೆಯನ್ನು ನಿಧಾನವಾಗಿ ಎತ್ತಿ ದೀಪದ ಮೇಲೆ ಬೀಳಿಸಿದ. ಫರ್ ಎಂದು ಇಡಿಯಾಗಿ ಸುಟ್ಟು ಅದು ಮಾಯವಾಗಿ ಹೋಯಿತು.. ಅವನಿಗೆ ಇನ್ನೂ ಮಜ ಬಂತು. ಇನ್ನೊಂದು ಹುಳುವಿಗಾಗಿ ಹುಡುಕಿದ.. ಸಿಗಲಿಲ್ಲ.. ಕೈಯಲ್ಲಿ ಹಿಡಿದಿದ್ದ ಪೆನ್ನಿನ ತುದಿಯನ್ನು ಬೆಂಕಿಗೆ ತಾಗಿಸಿದ. ತಾಗಿಸಿದ ವೇಗದಲ್ಲೇ ಹಿಂದಕ್ಕೆ ಎಳೆದು ತುದಿಯನ್ನು ಮುಟ್ಟಿದ. ಮಾತ್ರವೇ ಬಿಸಿ ತಾಗಿದ ಅದು ಬೆಚ್ಚನೆಯ ಹಿತವನ್ನು ಕೊಟ್ಟಿತು. ಭವತ್ಪ್ರಭುವಿಗೆ ಮತ್ತೆ ಮಜ. ಮತ್ತೆ ಬೆಂಕಿಗೆ ಹಿಡಿದ,, ಈ ಸಲ ಜಾಸ್ತಿ ಬಿಸಿಯಾಗಿರಬಹುದು ಅನಿಸುತ್ತದೆ.. ಕೈಯಲ್ಲಿ ಮುಟ್ಟಲೇ ಇಲ್ಲ.. ಮೊನೆ ಹೋಗಿರಲೂಬಹುದೆಂದು ಟೇಬಲ್ ಲ್ಯಾಂಪಿನ ಕೆಳಗಿದ್ದ ಹಳೇ ನ್ಯೂಸ್ ಪೇಪರಿನ ಅಂಚಿಗೆ ಗೀಚಿದ.. ಒಂದೆರಡು ಬಾರಿ ಗರಗರ ಎಂದು ಶಬ್ದ ಮಾಡಿ ಬರೆಯಿತು.. ಅಬ್ಬ ಏನೂ ಆಗಿಲ್ಲ ಎಂಬ ಸಮಾಧಾನದೊಂದಿಗೆ ಪೆನ್ನಿಗೆ ಮುಚ್ಚಳ ಹಾಕಿ ಪಕ್ಕಕ್ಕೆ ಎಸೆದ.
ಭವತ್ಪ್ರಭುವಿನ ವಯಸ್ಸು ಈಗ ಐವತ್ತೆರಡು ಅಂದರೆ ಸುಮಾರು ಇಪ್ಪತ್ತಾ ಎರಡು ವರ್ಷಗಳ ಹಿಂದೆ, ಅವರ ಮನೆಯ ಲ್ಯಾಂಡ್ ಲೈನಿಗೆ ಒಂದು ಕರೆ ಬಂತು. ’ನಿಮಗೆ ಗಂಡು ಮಗು ಆಗಿದೆ.. ನಿಮ್ಮತ್ತೆಯವರು ನಿಮಗೆ ತಿಳಿಸಿ ಅಂತ ಈ ನಂಬರ್ ಕೊಟ್ರು.. ಬೇಗ ಬರ್ಬೇಕಂತೆ’ ಅಂತ ಯಾರೋ ಹೇಳಿ ಫೋನಿಟ್ಟರು.. ಡೇಟ್ ಕೊಟ್ಟಿದ್ದಕ್ಕಿಂತ ಎರಡು ದಿನ ಮುಂಚೆಯೇ ಆಯಿತಲ್ಲ ಎಂದುಕೊಳ್ಳುತ್ತಾ ಆಸ್ಪತ್ರೆ ತಲುಪಿದಾಗ ಸುಮಾರು ಆರು ಗಂಟೆ ಸಂಜೆ.. ಒಂಥರಾ ಉದ್ವೇಗದಲ್ಲಿ ’ಗಂಡಸರು’ ಎಂದು ಬರೆದಿದ್ದ ಶೌಚಾಲಯಕ್ಕೆ ಧಾವಿಸಿ, ಅದೇ ಉದ್ವೇಗದಲ್ಲಿ ಹೊರಬಂದು ಮೂರನೇ ಮಹಡಿ ಮೆಟ್ಟಿಲು ಹತ್ತತೊಡಗಿದ. ಕಡು ನೀಲಿ ಕರ್ಟನ್ ಹಿಂದೆ ಮಲಗಿದ್ದ ಹೆಂಡತಿ ಮತ್ತು ಮಗುವನ್ನು ಒಂದೇ ಸಲ ನೋಡಿ, ಮಗನನ್ನು ಎತ್ತಿಕೊಂಡ.. ಕಾಕತಾಳೀಯವಾಗಿ ಥಟ್ಟನೆ ಕರೆಂಟು ಹೋಯಿತು. ಆಸ್ಪತ್ರೆ ಹಳೆಯದಾಗಿದ್ದರಿಂದಲೋ ಅಥವಾ ಇವರ ರೂಮು ಹತ್ತಾರು ರೂಮುಗಳ ಮಧ್ಯೆ ಇದ್ದುದರಿಂದಲೋ ಜಾಸ್ತಿ ಬೆಳಕಿರಲಿಲ್ಲ.. ಕರೆಂಟು ಬರುವವರೆಗೆ ಊ ಊ ಹಿ ಹಿ ಎಂಬ ವಿಚಿತ್ರ ಧ್ವನಿಗಳನ್ನು ಹೊರಡಿಸುತ್ತಾ ಮಗನನ್ನು ಕೈಯೆಂಬ ತೊಟ್ಟಿಲಲ್ಲೇ ತೂಗತೊಡಗಿದ..ಒಂದೈದು ನಿಮಿಷಗಳಾದ ಮೇಲೆ ಜನರೇಟರ್ರೋ ಅಥವಾ ನಿಜವಾಗಿ ಕರೆಂಟು ಬಂತೋ, ರೂಮಿನ ದೀಪ ಹತ್ತಿಕೊಂಡಿತು. ಮಗುವನ್ನು ಹೆಂಡತಿಯ ಕೈಯಲ್ಲಿಟ್ಟು ಮೆಚ್ಚುಗೆಯ ನೋಟ ಬೀರಿದ. ಮಗುವನ್ನು ಎತ್ತಿಕೊಂಡ ಹೆಂಡತಿ ಕಿಟಾರನೆ ಕಿರುಚುತ್ತಾ ಅಳತೊಡಗಿದಳು.. ಮಗು ಸತ್ತು ಹೋಗಿತ್ತು..
ಮೇಣದ ಬತ್ತಿ ಆರಿದ್ದೇ ತಡ ಭವತ್ಪ್ರಭು ಎಲ್ಲಿಲ್ಲದ ಉತ್ಸಾಹ ತುಂಬಿಕೊಂಡು ಡೈರಿಯನ್ನು ತೆಗೆದ. ಅದರ ಬಿಳಿಹಾಳೆಗಳಿಗೆ ಕಣ್ಣು ಹೊಂದಿಸಿಕೊಂಡು ಪುಟದ ಆರಂಭವನ್ನಷ್ಟೇ ಗುರುತು ಮಾಡಿಕೊಂಡ. ಅವತ್ತಿನ ಡೇಟ್ ಹಾಕಿ ಬರೆದ. - ನಾನು ಬೆಳಕಿನಿಂದ ಕತ್ತಲೆಯೆಡೆಗೆ ಹೋಗುತ್ತೇನೆ. ಬೆಳಕು ಎಲ್ಲವನ್ನೂ ತೋರಿಸುತ್ತದೆ. ಇವತ್ತು ಶನಿವಾರ. ಉಪ್ಪಿಟ್ಟು ತಿನ್ನುವಾಗ ಕಲ್ಲು ಸಿಕ್ಕಿದ್ದರಿಂದ ಹೊಟೆಲ್ ನವನಿಗೆ ಉಗಿದಿದ್ದೇನೆ ( ಮೂರು ರೂಪಾಯಿ ಕಡಿಮೆ ಕೊಟ್ಟಿದ್ದೇನೆ ]. ದೀಪದ ಹುಳುವನ್ನು ಕೊಂದೆ. ಮತ್ತು ಇನ್ನೊಂದಕ್ಕಾಗಿ ಹುಡುಕುತ್ತಿದ್ದೇನೆ. ಕತ್ತಲೆ ನಮಗೆ ಬೇಕಾಗಿದ್ದನ್ನು ಭ್ರಮಿಸಲು ಅವಕಾಶ ಕೊಡುತ್ತದೆ. ಅದಾಗಿ ಇದು ಹೀಗೆ ಎಂದು ಹೇಳುವುದಿಲ್ಲ. ಹೀಗಾಗಿ ಕತ್ತಲೆಯಲ್ಲಿ ನಾನು ಉತ್ಸುಕನಾಗುತ್ತೇನೆ ಅನಿಸುತ್ತದೆ. ನಾನು ಭ್ರಮಾಜೀವಿ. ನಾನು ಯಾರಿಗೂ ಬೇಕಾದವನಲ್ಲ. ಇನ್ನು ಹತ್ತು ನಿಮಿಷಗಳಲ್ಲಿ ಕರೆಂಟು ಬರದಿದ್ದರೆ ಮತ್ತೆ ಬರೆಯುತ್ತೇನೆ. - ಈ ರೀತಿ ಬರೆದು ಗುರುತಿಗೆ ಪೆನ್ನಿನ ತುದಿಯನ್ನು ಕೊನೆಯ ಪೂರ್ಣವಿರಾಮದಲ್ಲೇ ಇಟ್ಟು ಹತ್ತು ನಿಮಿಷಗಳವರೆಗೆ ಕಾಯುತ್ತಾ ಕುಳಿತ.
ಇದನ್ನೆಲ್ಲಾ ಗಮನಿಸಿದಾಗ ಮೊದಲ ಕೆಲ ಸಾಲುಗಳಲ್ಲಿರುವ ಭವತ್ಪ್ರಭುವಿನ ವಿವರಣೆ ಸತ್ಯ ಅನಿಸುತ್ತದೆ. ಅವನು ಹುಚ್ಚ ಅಂತಲೂ ಕೆಲವರಿಗೆ ಅನಿಸದ್ದುಂಟು. ಅವನ ಹೆಂಡತಿ ಸತ್ತು ಸುಮಾರು ಹತ್ತು ವರ್ಷಗಳಾಗಿದೆ. ’ಅವಳನ್ನೂ ಭವತ್ಪ್ರಭುವೇ ಕೊಂದಿದ್ದು’ ಎಂದು ಕೋರ್ಟ್ನಲ್ಲಿ ಅವನ ಅತ್ತೆ ಅರ್ಥಾತ್ ಅವನ ಹೆಂಡತಿಯ ತಾಯಿ ಅಳುತ್ತಾ ಹೇಳಿದಾಗ ಜಡ್ಜ್ ಸಾಹೇಬರು ’ಅವಳನ್ನೂ ಅಂದರೆ ಇನ್ಯಾರ್ಯಾರನ್ನು ಕೊಂದಿದ್ದಾನೆ ಇವ?’ ಅಂತ ಕೇಳಿದ್ದರಂತೆ. ಆಗ ಏನೂ ಉತ್ತರಕೊಡದೆ ಇದ್ದುದರಿಂದ ಆ ಕೇಸು ಅಲ್ಲಿಗೆ ಮುಚ್ಚಿಹೋಗಿತ್ತು.. ಆವತ್ತಿನಿಂದ ಅವರ ಮನೆಗೆ ಯಾರೂ ಬಂದಿಲ್ಲ. ಮೊದಲೆಲ್ಲಾ ಅವನ ಹೆಂಡತಿಯನ್ನು ಮಾತನಾಡಿಸಲು ಬರುತ್ತಿದ್ದ ನೆರೆಹೊರೆಯವರು ಇತ್ತೀಚಿಗೆ ತಿರುಪತಿ, ಹರಿದ್ವಾರ,ಕಾಶೀ ಯಾತ್ರೆ ಇತ್ಯಾದಿಗಳಲಿ ಭಯಂಕರ ಕಾಲ ವ್ಯಯಿಸುತ್ತಿದುದರಿಂದ ಭವತ್ಪ್ರಭುವನ್ನು ಆ ಭವತ್ಪ್ರಭು ಚೆನ್ನಾಗೇ ಇಟ್ಟಿದ್ದಾನೆ ಎಂದು ಭ್ರಮಿಸಿ ಇತ್ತ ಕಡೆ ತಲೆಯೇ ಹಾಕಲಿಲ್ಲ. ಹತ್ತು ನಿಮಿಷವಾಯಿತು.
ಮತ್ತೆ ಬರೆದ - ’ನಾಳೆ ಇದೇ ಸಮಯಕ್ಕೆ ಕರೆಂಟು ಹೋಗುತ್ತದೆ ಎಂದ ಪೇಪರಿನಲ್ಲಿ ಬಂದಿದೆ. ಸರೋಜಾದೇವಿಯವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ. ನಾನು ಮತ್ತು ಇತರರು ಸ್ವಾರ್ಥಿಗಳು. ಉದಾಹರಣೆಗೆ, ನನಗೆ ಬೇರೆ ಯಾರೂ ಬೇಕಾಗಿಲ್ಲ ಮತ್ತು ನಾನೂ ಯಾರಿಗೂ ಬೇಕಾಗಿಲ್ಲ. ಹೀಗಾಗಿ ನಾನೂ ಸ್ವಾರ್ಥಿ, ಇತರರೂ ಸ್ವಾರ್ಥಿಗಳು. ಈ ಬೆಳಕು ಎಲ್ಲರನ್ನೂ ತೋರಿಸುತ್ತದೆ. ಹೀಗಾಗಿ ಬೆಳಕನ್ನು ನಾನು ದ್ವೇಷಿಸುತ್ತೇನೆ. ಮತ್ತು ಆ ದ್ವೇಷದಿಂದಲೇ ಕತ್ತಲೆಯನ್ನು ಪ್ರೀತಿಸುತ್ತೇನೆ. ಕತ್ತಲೆ ಎಂದರೆ ಕರ್ರಗಿಲ್ಲ. ಅದು ಬೆಳ್ಳಗಿದೆ. ಕತ್ತಲೆಯ ಮೇಲೆ ಬೆಳಕು ಚೆಲ್ಲಿದಾಗ ನಮಗೆ ನಾವು ಕಾಣುತ್ತೇವೆ. ಬಿಸಿಲಲ್ಲಿ ನಮ್ಮ ಎಡಕ್ಕೋ ಬಲಕ್ಕೋ ಇರುವ ನೆರಳು ಕತ್ತಲೆಯಲ್ಲಿ ಜೀವ ಬಂದು ನಮ್ಮೊಳಗೇ ಹುದುಗಿಕೊಂಡು ಒಂದಾದಂತೆ. ಇವತ್ತಿಗೆ ಇಷ್ಟೇ ಸಾಕು. ಕರೆಂಟು ಬಂದ ಮೇಲೆ, ಈ ವಾರದ ಪದಬಂಧ ತುಂಬಬೇಕು. .’
ದೂರದಲ್ಲಿ ಮೂಲೆಯಲ್ಲಿ ಎರಡು ಜಿರಲೆ ಮರಿಗಳು ಗುಸುಗುಸು ಮಾಡಿದಂತೆ ಕಂಡಿತು. ಅದನ್ನೇ ನೋಡುತ್ತಾ ಕುಳಿತ ಭವತ್ಪ್ರಭುವಿಗೆ ಕಣ್ಣು ನೋವು ಬಂದಂತೆ ಆಯಿತು. ಆದರೂ ಮೀಸೆಯಾಡಿಸುತ್ತಾ ಪುಟಪುಟನೆ ಓಡಾಡುವ ಜಿರಲೆಗಳು ಈಗ ಸುಂದರವಾಗಿ ಕಾಣುತ್ತಿದ್ದವು. ಏನೋ ಕತ್ತಲ ಸಂಭ್ರಮದಲ್ಲಿ ಆಚೀಚಿಗೆ ಜಿಗಿದಾಡುವ ಅವುಗಳು ಕರೆಂಟು ಬಂದರೆ ಅಷ್ಟು ಚೆನ್ನಾಗಿ ಕಾಣುವುದಿಲ್ಲ ಎಂದುಕೊಂಡ. ಭವತ್ಪ್ರಭುವಿನ ಕೈಯಳತೆಷ್ಟು ದೂರವಿದ್ದರೂ ಉದಾಸೀನತೆಯಿಂದ ಅವುಗಳನ್ನು ಹೊಡೆಯಲಿಲ್ಲ. ಕರೆಂಟೇನಾದರೂ ಇದ್ದಿದ್ದರೆ ಅವು ಇಷ್ಟೊತ್ತಿಗಾಗಲೇ ಸತ್ತು ಹೋಗಿರುತ್ತಿದ್ದವು. ಗಡಿಯಾರ ಒಂಭತ್ತಾದದ್ದನ್ನು ರೇಡಿಯಂನಲ್ಲಿ ಮಿಂಚಿಸಿತು. ’ಮುಕ್ತ ಮುಕ್ತ’ ನೆನಪಾಯಿತು. ಕರೆಂಟು ಬಂದ ತಕ್ಷಣ ಟಿ.ವಿ. ಹಚ್ಚಬಹುದು ಎಂದು ರಿಮೋಟು ಹುಡುಕುತ್ತಾ ಹಾಲಿಗೆ ಬಂದ. ಸೋಫಾದ ಅಂಚಿನಲ್ಲೆಲ್ಲೋ ಬಿದ್ದಿದ್ದ ರಿಮೋಟಿಗಾಗಿ ಕೈಹಾಕಿ, ಅಲ್ಲಿರುವುದು ರಿಮೋಟು ಹೌದೆಂದು ಖಾತ್ರಿಪಡಿಸಿಕೊಂಡ. ಅಷ್ಟರಲ್ಲಿ ಕರೆಂಟು ಬಂತು. ಟಿ.ವಿ. ಹಚ್ಚಿ ಮೊದಲಿನ ಆಸನ ಆಸಕ್ತಿಗಳನ್ನೇ ಇಟ್ಟುಕೊಂಡು ಕೂತ ಭವತ್ಪ್ರಭುವಿಗೆ ಆ ವಾರವಿಡೀ ಮತ್ತೆಂದೂ ಜಿರಲೆಗಳಾಗಲೀ, ದೀಪದ ಹುಳುಗಳಾಗಲೀ, ಫ್ಯಾನಾಗಲೀ, ಆಲಾಪವಾಗಲೀ ಮತ್ತೆ ಭೇಟಿಯಾಗಲೇ ಇಲ್ಲ.
ಅಂದರೆ..