ಅವನೂ ಅವಳೂ ಹೀಗಿದ್ದರು ...
ಬಳಪಕ್ಕಾಗಿ ಅವನೂ ಅವಳೂ ಜಗಳವಾಡುತ್ತಾರೆ ...ಟೀಚರ್ ಬಯ್ಯುತ್ತಾರೆ...
ಇಬ್ಬರೂ ಅಳುತ್ತಾರೆ...
ಮಣ್ಣಿನಲ್ಲಿ ಇಬ್ಬರೂ ಆಡುತ್ತಾರೆ... ಮೈಗೆಲ್ಲಾ ಮಣ್ಣು ಮೆತ್ತಿಕೊಳ್ಳುತ್ತಾರೆ...
ಆಟ ಮುಂದುವರಿಯುತ್ತದೆ ...
ಕಾಲೇಜಿನಲ್ಲಿ ಅವಳು ಚಿಗರೆಯಂತೆ ಓಡಾಡುತ್ತಾಳೆ... ಆತ ಪ್ರೀತಿಸುತ್ತಾನೆ...
ಅವಳು ಒಪ್ಪುತ್ತಾಳೆ...
ಆತನಿಗೆ ಸಾಕೆನಿಸುತ್ತದೆ ... ಅವಳನ್ನು ನಿರಾಕರಿಸುತ್ತಾನೆ...
ಅವಳೊಬ್ಬಳೇ ಅಳುತ್ತಾಳೆ...
ಅವನ ಮನಸ್ಸಿಗೆ ವಯಸ್ಸಾಗುತ್ತದೆ... ಕ್ಷಮೆ ಕೇಳುತ್ತಾನೆ...
ಅವಳೆದುರು ಅಳುತ್ತಾನೆ...
'ಒಂದಾಗೋಣ ಬಾ..' ಎನ್ನುತ್ತಾನೆ... 'ಕ್ಷಮಿಸಿದ್ದೇನೆ ಹೋಗು'... ಎನ್ನುತ್ತಾಳೆ...
ಮತ್ತೆ ಅವನೇ ಅಳುತ್ತಾನೆ...
ಅವನಿಗೆ 'ಅಯ್ಯೋ' ಎನ್ನುತ್ತಾರೆ ... ಆಕೆಗೆ 'ಛಿ...' ಎನ್ನುತ್ತಾರೆ...
ಅಲ್ಲಿಗೆ ಜೀವನದ ಕಥೆ ಮುಗಿದಿರುತ್ತದೆ...
ರಾತ್ರಿ, ನೀನು ಮತ್ತು ನಾನು
ಅಗಣಿತ ನಕ್ಷತ್ರ
ಸಮೂಹಗಳ
ನಡುವೆಯೂ ಹೊಳೆಯುವ ನಿನ್ನ
ಕಣ್ಣುಗಳು
ರಾತ್ರಿಯಾದಂತೆ ರೆಪ್ಪೆಯನ್ನು ಹೊದ್ದು ಯಾಕೆ ಮಲಗುತ್ತವೆ?
ಅದೇ ಕಾರಣದಿಂದ ಆ
ನಕ್ಷತ್ರಗಳು
ಇನ್ನೂ ಜೋರಾಗಿ ಮಿನುಗುತ್ತಿವೆ..
ಅವು ಹಗಲಲ್ಲಿ ನಿನ್ನ ಮುಂದೆ
ಬರಲಾಗದ
ಹೇಡಿಗಳು...
ಬೆಳ್ಳಿ ಚಂದ್ರ
ತನ್ನ ಪ್ರತಿಬಿಂಬವನ್ನು
ನಿನ್ನ ಮುಖದಲ್ಲಿ ಕಾಣಲು ಪ್ರಯತ್ನಿಸುತ್ತಿದ್ದಂತೆ
ಆ ಹತ್ತಿಯ ಮೋಡಗಳು ಅವನ್ನನ್ನು ಆವರಿಸಿಬಿಡುತ್ತವೆ..
ಆ ಮೋಡಗಳಿಗೇನು
ಕೊಟ್ಟಿರುವೆ
ನಿನ್ನ ಕಾಯಲು?
ಮೋಡಗಳಿಗೆ
ಲಂಚ
ಕೊಡುತ್ತಿದ್ದ
ಚಂದ್ರ ಸಿಕ್ಕಿಬಿದ್ದು ಜೈಲಲ್ಲಿ
ಊಟವಿಲ್ಲದೆ
ದಿನವೂ ಸಣ್ಣಗಾಗುತ್ತಿದ್ದಾನೆ..
ರಾತ್ರಿಯೆಲ್ಲಾ ಮೈಯೆಲ್ಲಾ
ಕೊರೆಯುವ ಮೂಡಣದ ಚಳಿಗಾಳಿ
ನಿನ್ನ ಕಂಡೊಡನೆ
ಯಾಕೆ ಹಿತವಾಗಿ ಬೀಸುತ್ತದೆ?
ಆ ನಿನ್ನ
ಮುಂಗುರುಳಿಗೆ
ಮುತ್ತಿಕ್ಕುತ್ತಾ...
ನೀನು ಎದ್ದೇಳಬಾರದು ಎಂದಂತೆ
ನನ್ನ ಬಳಿಬಂದು
ನಿನ್ನಿಂದಾಗದು
ಎಂದು
ಹೀಯಾಳಿಸುತ್ತಿದೆ
ನಿದ್ರೆಯಿಲ್ಲದೆ
ಒದ್ದಾಡುತ್ತಿದ್ದ
ನಾನು
ಸಿಟ್ಟು ಬಂದು
ಈ ರಾತ್ರಿ
ನಾನೇನು ಮಾಡುತ್ತಿರುವೆ ಗೊತ್ತೇ?
ನಿನ್ನ
ಮನದ
ಮನೆಯ ಬಳಿಬಂದು
ಬಾಗಿಲು ಬಡಿಯುತ್ತಿರುವೆ
ಕದ
ತೆರೆಯಲಾರೆಯಾ..?
ಗಡ್ಡ
ಸ್ಲೀಪರ್ ಕೋಚಿನ
ಅರ್ಧ ತೆರೆದ ಕಿಟಕಿಯಲ್ಲಿ
ಬಿಕ್ಕಳಿಸುವ ನಕ್ಷತ್ರಗಳು ಬಸ್ಸಿನಷ್ಟೇ
ವೇಗವಾಗಿ ಬರುತ್ತಿವೆ..
ಪಕ್ಕದ ಕರೀ ಟೀ-ಶರ್ಟಿನ,
ಇನ್ನೂ ಗಡ್ಡ ಸರಿಯಾಗಿ ಬರದ
ಮುಖದ
ಮೇಲೆ ಗುಮಾನಿ
ನನ್ನ
ಜೀನ್ಸ್ ಪ್ಯಾಂಟಿನ ಜೇಬಲ್ಲಿದ್ದ ಪರ್ಸ್
ಅಂಗಿ ಕಿಸೆಗೆ ಬರುವಷ್ಟು
ಅವನ ಹೆಡ್ ಫೋನಿನ
ಧ್ವನಿ ಬೇಡ ಬೇಡವೆಂದರೂ ಕಿವಿಗೆ
ಬಡಿದು
ಅಲವರಿಕೆಯಾಗುತ್ತಿದೆ, ಯಾವುದೋ
ಹಾಳು ಪದ್ಯ
ಗಾಳಿಗೆಂದು ಸರಿಸಿದ
ಕಿಟಕಿಯ ಕೆಂಪು ಕರ್ಟನ್
ಬಿಳೀ ಟ್ಯೂಬ್ ಲೈಟ್ಗಳ
ಬೆಳಕು ಹೀರಿ ವಾತಾವರಣವನ್ನು
ಉಗ್ರವಾಗಿಸಿದೆ...
ಊಟಕ್ಕೆ ನಿಲ್ಲಿಸಿದ
ಬಸ್ಸಿನಿಂದಿಳಿದ ಅವನ
ಸೀಟನ್ನು
ಪದೇ ಪದೇ ನೋಡುತ್ತಿದ್ದೆ.
ಅವನ ಬ್ಯಾಗು, ಒಂದು ಕರ್ಚೀಪು
ಒಂದು ಬಿಸ್ಲೇರಿ ಬಾಟಲಿ
ಮತ್ತೆ ಕಾಲು ನೀಡುವಾಗ
ತಾಗಿದ ಅವನ ಬೆರಳು
ಸುಮಾರು ದಿನವಾದರೂ
ಕತ್ತರಿಸದ ಅವನ ಬೆರಲನ್ನು
ಪರಿಚಯಿಸಿತು..
ನನ್ನ ದೊಡ್ಡ
ಬ್ಯಾಗಿನ ಮೇಲೆ, ಅಡಿಡಾಸ್ ಶೂಗಳ
ಮೇಲೆ ಕಣ್ಣಿಟ್ಟೇ
ರೊಯ್ಯನೆ ಒಳಬರುವ ಗಾಇಗೆ ಕಿವಿ
ಮುಚ್ಚಿದೆ..
ಬೆಳಗಾಯಿತು..
ಅವನೆದ್ದ..
ನಾನಲ್ಲೇ ಇದ್ದೆ..
ಅವನ ಸೀಟಿನಿಂದ
ಐನೂರರ ನೋಟೆತ್ತಿಕೊಂಡಿದ್ದು
ಅದರಲ್ಲಿರುವ ಗಾಂಧೀಜಿ
ಫೋಟೋ ನೋಡೀ ಮಾತ್ರ..
ತೇರಿಗೆಂದು ಊರಿಗೆ ಹೊರಟ
ನನಗೆ ತೇರಿನಲ್ಲಿ
ಎಷ್ಟೋ ಜನ ಸಿಕ್ಕರು..
ಅವನೂ ಸಿಗಬಹುದು..
ಈಗ ಗಡ್ಡ ಬಂದಿರಬಹುದು..
ಅದು ನನಗೆ ಚುಚ್ಚಬಹುದು..
ಪ್ರೇಮ ಪ್ರಕಾಶನ
ನಿನ್ನ ಮನಸಿನ ಪುರವಣಿಗೆ ನಾನು ತಾನೇ ಸಂಪಾದಕ
ಕಣ್ಣ ನೋಟದ ಬರವಣಿಗೆ ಭಾರೀ ಮಧುರ ಮೋಹಕ
ಭಾವ ಪುಟದ ಬಲತುದಿಗೆಲ್ಲಾ ನಿನ್ನ ಹೆಸರ ಅಂಕಿತ
ಸಣ್ಣ ಹಟದ ಪ್ರತಿಕೊನೆಯಲ್ಲೂ ಚಂದ ನಗುವ ಇಂಗಿತ
ಪರಿವಿಡಿಯ ಭಾಗಗಳೆಲ್ಲಾ ಬರೀ ಕನಸಿಗೆ ಮೀಸಲು
ಇರುಳಿಡಿಯ ರಾಗಗಳೆಲ್ಲಾ ನನ್ನ ನಿದಿರೆಗೆ ಕಾವಲು
ಒಂದುಕಡೆಯೂ ಪ್ರಯೋಗವಿಲ್ಲ ಬಳಸಿದಂತ ಪದಗಳ
ಇನ್ನೂಕೂಡಾ ಸುಯೋಗವಿಲ್ಲ ನನ್ನ ಹೃದಯ ಕಳವಳ
ಸುದ್ದಿಯೆಲ್ಲಾ ಮಾಡುವುದಿದೆ, ಮೊದಲು ಇದರ ಹಂಚಿಕೆ
ಸಧ್ಯದಲ್ಲೇ ಬಿಡುಗಡೆಗಿದೆ ಈ ಅಧರದಂಚಿನ ಸಂಚಿಕೆ
ಕುರಿಯಾಗುವುದೆಂದರೆ....
ನಿಜವಾದ ಸಾಪೇಕ್ಷದಲ್ಲಿ
ಸುಳ್ಳೆಲ್ಲವೂ
ಸತ್ಯ
ನಿರಪೇಕ್ಷ ಗೆದ್ದರೂ
ಸಾಪೇಕ್ಷಕ್ಕೇ ಜಯ
ಏಕೆಂದರೆ ನಿರಪೇಕ್ಷ
ಗೆದ್ದಿರುವುದೂ
ಸಾಪೇಕ್ಷತೆಯಲ್ಲೇ..
ಗೀತಾಚಾರ್ಯ ಹೇಳಿದ್ದೂ ಅದನ್ನೇ.
ಅಪ್ರಿಯವಾದ
ಸತ್ಯವೆಲ್ಲಾ
ಸುಳ್ಳು
ಬಹುಜನ ಪ್ರಿಯ ಸುಳ್ಳಿನಲ್ಲೇ
ಸತ್ಯದ ಜನನ
***
ಬೆಳಗ್ಗೆ ಬಂದ ಮಿಥ್ಯ
ಕರೆಯೊಂದಕ್ಕೆ
ಮರುಳಾಗಿ
ಕುರಿಯಾಗುವುದು
ಸುಳ್ಳಲ್ಲ.
ಆ ಮಿಥ್ಯಕ್ಕೆ ಹಚ್ಚಿದ ಬಣ್ಣ
ಕದಡುವವರೆಗೂ
ಸುಳ್ಳೂ ಸತ್ಯವೇ..
ಕದಡಿದ ನಂತರ
ಓಕುಳಿ.
***
ಕರೆ ಮಾಡಿ ಕುರಿಮಾಡಿದವನ
ಮಿಥ್ಯ ಸಂತೋಷಕ್ಕಿಂತ
ಕುರಿಯಾದವನ
ಬಣ್ಣಗಳೇ
ಹೆಚ್ಚು
ವರ್ಣಮಯ
ಕುರಿಮಾಡಿದವನ
ಕ್ಷಮೆಯಾಚನೆಗಿಂತ
ಆ ದಿನದ
ಸತ್ಯವಾದ
ಮಿಥ್ಯ ಸಂಭ್ರಮದ
ಕುರಿತಾಗಿ
ಕುರಿಯಾದವ
ಅರ್ಪಿಸಿದ ಧನ್ಯವಾದಕ್ಕೇ ಹೆಚ್ಚು
ಬೆಲೆ.
ಕಣ್ಣಿನ ಶಬ್ದ
ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ
ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?
ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ
ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?
ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ
ಕೇಳದ ಸಿಡಿಲಿಗೆ
ಏಳುವ ಅಣಬೆಯ
ಬಾಳನು ತೋರುವುದೇ ಈ ಭಾವ?
ವರ್ಣರಂಜಿತ ಮನದ ಪುಟಗಳ
ತಿಕ್ಕಿ ತಿಕ್ಕಿ ತೊಳೆಯಲಾಗಿದೆ
ವರುಣನಿಂಗಿತ ಅರಿತ ಮೇಘವು
ಬಿಕ್ಕಿ ಬಿಕ್ಕಿ ಅಳುವ ಹಾಗಿದೆ
ಸಣ್ಣ ಹನಿಯೂ
ಬಣ್ಣವಾಗಿ
ಕಣ್ಣ ಸೇರುವುದೇ ಈ ಚಿತ್ರ?
ಸ್ವಪ್ನದ ಲೋಕದ ರಾಗದ ಭಾವಕೆ ಕಣ್ಣಿನ ಶಬ್ದಕೆ
ಮಳೆಯಾಗಿದೆ
ಮಿಂಚಾಗಿದೆ
ಗುಡುಗಾಗಿದೆ..
ಅಂತೂ ಇಳೆ ಹಸಿಯಾಗಿದೆ, ಜೀವ ಖುಷಿಯಾಗಿದೆ.
ನೀನಿಲ್ಲದೆ...
ಭಾರವಾಗಿದೆ ಭಾವಗೀತೆ
ರಾಮನಿಲ್ಲದೆ ನೊಂದ ಸೀತೆ
ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ
ನಿನ್ನ ಸೇರುವ ದಿನದ ತನಕ
ಒಂಟಿ ಜೀವದ ಮನದ ತವಕ
ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ
ಉರಿದು ಸುಡುತಿಹ ಇರದ ಬೇನೆ
ದಿವಸ ಕೊಲ್ಲುವ ಕನಸ ಸೇನೆ
ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ
ಕಾಲವಾಯಿತು ಸೇರಿ ನಾವು
ಮುಳ್ಳು ಗಿಡದಲಿ ನಿಂತ ಹೂವು
ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ
ಎದೆಯ ಸಾಗರದಲೆಯು ಉಕ್ಕಿ
ಮಾರುವೇಷದ ಬಯಕೆ ಹಕ್ಕಿ
ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ
ಎಂದು ಎಲ್ಲಿ ನಮ್ಮ ಭೇಟಿ?
ನಿನ್ನ ಗೀತೆಗೆ ನನ್ನ ಧಾಟಿ
ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ
ಕರೆ
ಗೂಡಲ್ಲಿ ಮರಿಯಗಿ
ಬಾನಲ್ಲಿ ಗರಿಯಾಗಿ
ಕಾನಲ್ಲಿ ಝರಿಯಾಗಿ
ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ
ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ
ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ
ನೋಡುತ್ತಲೇ ಬೆರಗಾಗಿ
ಕಾಡುತ್ತಿರೋ ಗುರಿಯಾಗಿ
ಆಗಸದಿ ಸೆರೆಯಾಗಿ
ಮಿರಿ ಮಿರಿ ಮಿರಿ ಮಿರಿ ಮಿನುಗುವ ಬಾ
ಸುದ್ದಿಕಟ್ಟೆಯ ಮರವು ಕೂಡಾ ವಿದ್ಯಮಾನದ ಗುರುತು ಮರೆತಿದೆ
ಶಶಿಯ ವದನದ ಕಲೆಗಳಿಂದು ನಿದ್ದೆ ಮಾಡದೆ ಎದ್ದು ಕುಳಿತಿವೆ
ದೈವದತ್ತ ವರವಾಗಿ
ಭವಿತವ್ಯದ ಪರವಾಗಿ
ಕೊನೆಯಿಲ್ಲದ ಸಿರಿಯಾಗಿ
ಸರಿ ಸರಿ ಸರಿ ಸರಿ ಕರಗುವ ಬಾ
ಮೇಲ್ಸೇತುವೆಯ ಕೆಳಗೊಂದು ಸ್ಮಶಾನ ..
ನಗರದ ಕೆಲಭಾಗಗಳಲ್ಲಿ
ಜೀವಂತ ಹೆಣಗಳು
ಕೈಯಲ್ಲಿ ಮೊಬೈಲು
ಹಿಡಿದು ಹೊರಟಿವೆ..
ಸಿಕ್ಕ ಸಿಕ್ಕ ನಂಬರುಗಳನ್ನು
ಒತ್ತುತ್ತಾ
ಫೋನು ಮಾಡುತ್ತಾ
’ಹಲೋ’ ಎಂದರೆ ಮಾತಾಡದೆ
ಗುಮ್ಮಗಳಾಗಿವೆ.
ಅವುಗಳನ್ನು ಹೂಳುವವರಿಲ್ಲದೆ
ಸುಡುವವರಿಲ್ಲದೆ
ಅನಾಥವಾಗಿ
ಅಲೆಯುತ್ತಿರುವುದರಿಂದ
ಟ್ರಾಫಿಕ್ ಜಾಮ್ ಆಗಿದೆ
ರಾತ್ರಿ ಹನ್ನೊಂದಾದರೂ
ಮುಚ್ಚದ
ಕೆಲ ಆಫೀಸುಗಳಿಂದ
ಇನ್ನೂ ಕೆಲವು ಹೊರಬಂದಿವೆ.
ಸ್ವರ್ಗ ಮೇಲಿದೆ ಎಂದು ಯಾರೋ
ಹೇಳಿದ್ದಾರೆ, ಅದಕ್ಕೇ
ಅವು ಫ್ಲೈಓವರ್ ಹತ್ತಿ ಹೊರಟಿವೆ
ಅರ್ಧಕಟ್ಟಿದ ಮೇಲ್ಸೇತುವೆಯ
ಇನ್ನೊಂದೆಡೆ ಬಿದ್ದು
ಸಾಯುತ್ತಿದ್ದಾವೆ.
ಅವು ಈಗ
ಸತ್ತ ಹೆಣಗಳು
ಜೀವಂತ ಭೂತಗಳು.
ಡೈರಿ ಮಿಲ್ಕು, ಕ್ಲಾಸ್ ರೂಮು ಮತ್ತು ಗೊತ್ತಿಲ್ಲದವನು
ದೃಶ್ಯ ೧ ’ಇದು ಶುದ್ಧ ಸುಳ್ಳು’ ’ಯಾಕೆ’ ’ಯಾಕೋ ಹಾಗನಿಸ್ತು’ ’ಮತ್ತೆ ಹಾಗಾದ್ರೆ ನೀನು ..’ ’ನಾನಲ್ಲ’ ’ಮತ್ಯಾರು?’ ’ಗೊತ್ತಿಲ್ಲ’ ದೃಶ್ಯ ೨ ’ಅದರರ್ಥ ಅವನಿಗೆ ನಾ ಬೇಕಾಗಿಲ್ಲ’ ’ಪರಿಚಯವೇ ಆಗಿಲ್ಲ ಅಂತಿ..?’ ’ಹೂಂ’ ’ಡೈರಿ ಮಿಲ್ಕ್ ಯಾಕೆ ಕೊಟ್ಟ?’ ’ದೇವ್ರಿಗೇ ಗೊತ್ತು’ ’ಯಾವ್ ದೇವ್ರು?’ ’ಸಾಕ್ ಸುಮ್ನಿರೇ.. ತಮಾಷಿ ಮಾಡ್ಬೇಡ’ ದೃಶ್ಯ ೩ ’ಯಾಕೇ?’ ’ಮೂರನೇ ಪೀರಿಯಡ್ ಬಂಕಾ?’ ’ಇಲ್ಲ ..ಹೋಗ್ಬೇಕು’ ’ಮತ್ತಿನ್ನೂ ಇಲ್ಲೇ ಕೂತಿದ್ದೀಯಾ?’ ’ನಿಂಗೇನು?’ ’ಯಾಕೇ.. ಅವನು ಬಂದಿಲ್ವಾ?’ ’ಬಂದಿದ್ದ.. ಅದಕ್ಕೆ..’ ’ಏನಾಯ್ತು?’ ’ಏನೂ ಆಗಿಲ್ಲ.. ’ ದೃಶ್ಯ ೪ ’ನಮಸ್ಕಾರ ಸರ್..’ ’ಏನಮ್ಮಾ? ಸಮಾಚಾರಾ?’ ’ಏನಿಲ್ಲ.. ಮೂರನೇ ಪಿರಿಯಡ್ ಇದ್ಯಾ ಸರ್?’ ’ಯಾಕ್ರೀ.. ಬೇಡ್ವೇನ್ರೀ?’ ’ಹಾಗಲ್ಲ ಸರ್.. ಅದು..’ ’ಏನದು?’ ’ಏನಿಲ್ಲ ಸರ್’ ದೃಶ್ಯ ೫ ’ನಾನೊಂದು ತೀರ ನೀನೊಂದು ತೀರಾ..’ ’ಕತ್ತೆ.. ಹಾಡ್ ಹೇಳಬೇಡ’ ’ಯಾಕೆ?’ ’ಎಲ್ಲರಿಗೂ ಕೇಳುತ್ತೆ..’
ಸಂಕ್ರಾಂತಿಯಂದದರೂ some-ಕ್ರಾಂತಿಯಾಗಲಿ..!!
ಚಳಿಯಲೆಯ ಸಾಗರದಿ ದಿನಮಣಿಯ ಆಗಮನ ಸಪ್ತವರ್ಣದ ಕಿರಣ ರಂಗವಲ್ಲಿಯ ಕವನ ಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನ ಶೂನ್ಯಪರ್ವದ ಸಮಯ ಈ ಚಲನವಲನ
ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣ ಉತ್ತರಾಯಣ ಜನನ ದಕ್ಷಿಣಾಯಣ ಮರಣ ಹಳೆ ಸೂರ್ಯ ಹಳೆ ಭೂಮಿ ಹೊಸ ಲಯದ ಭ್ರಮಣ ಶುಭವ ತರಲೆಲ್ಲರಿಗೆ ಮಕರ ಸಂಕ್ರಮಣ
ಪಥಗೀತ
ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತ
ಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ
ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆ
ಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ, ಬೆಚ್ಚಿ ಕೂತಿದೆ ಹೃದಯ ವೀಣೆ
ಕಲಬೆರಕೆ ಕನಸುಗಳು ಕಲಸಿದಂತಹ ಬದುಕು, ಆಗಿ ಹೋಗಿದೆ ಅಸ್ತವ್ಯಸ್ತ
ಇಷ್ಟುದಿನ ಸಲಹಿರುವ, ಕೈಹಿಡಿದು ನಡೆಸಿರುವ, ಹಸ್ತದಿಂದಲೇ ಶಾಪಗ್ರಸ್ತ
ಉಳಿಯ ಝಳಪಿಸಿ ಶಿಲ್ಪಿ ಹೊಡೆಯದಿದ್ದರೆ ಚಾಣ, ಶಿಲ್ಪವಾಗುವುದೇಗೆ ಕಲ್ಲು?
ದಿನದಿನವೂ ಕರಗುವನು ಶುಕ್ಲಪಕ್ಷದ ಚಂದ್ರ, ಕಲೆಗಳಿವೆ ಶಶಿವದನದಲ್ಲೂ
ಇಳಿದು ಬರಬಹುದೀಗ ಇಳೆಯ ಬೆಳಗುವ ಬೆಳಕು ಶಕ್ತಿ ಮೂಲದ ಕೇಂದ್ರದಿಂದ
ಉತ್ತರಿಸಬೇಕಿಲ್ಲ ಕ್ಲಿಷ್ಟಕರ ಪ್ರಶ್ನೆಗಳ, ಕತ್ತರಿಸು ಕತ್ತಲೆಯ ಬಂಧ
ಕಾಲು ಬಂದ ಕವಿತೆ
ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆ
ನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದು
ಗುಲಾಬಿ ಬಣ್ಣದ ಕಾಲು ಬಂತು..
ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತು
ಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂ
ಇದ್ದವು.
ಇದೇನಪ್ಪಾ , ಕವಿತೆಗೆಲ್ಲಾ ಕಾಲು
ಬಂದುಬಿಟ್ಟಿದೆ, ಇನ್ನೂ ಕವಿತೆ ಪೂರ್ಣ ಬೇರೆ ಆಗಿಲ್ಲ
ಎಂದು ಆಲೋಚಿಸುತ್ತಿದ್ದಂತೆ
ಕವಿತೆ ಎದ್ದು ಹೊರಟು
ಬಿಟ್ಟಿತು
ಈಗ ತಾನೇ ಹುಟ್ಟಿದ ಕಾಲು
ಎಲ್ಲಾದ್ರೂ ಎಡವಿ ಬಿದ್ದುಬಿಟ್ಟೀತು
ಅಯ್ಯಯ್ಯೋ ಎಂದುಕೊಂಡು
ಆ ಕತ್ತಲಲ್ಲಿ ಅದನ್ನೇ ಹಿಂಬಾಲಿಸಿದೆ
ನೋಡಿದರೆ, ಈ ಕವಿತೆ ದೂರ ಓಡುತ್ತಿತ್ತು..
ಕತ್ತಲಲ್ಲೂ ಕಾಣುವಂತೆ..
ಹೆಸರಿಡಿದು ಕರೆಯೋಣ ಎಂದರೆ
ಇನ್ನೂ ಹೆಸರು ಇಟ್ಟಿಲ್ಲ..
ಪೂರ್ಣವೇ ಆಗಿಲ್ಲ ಅಂತೀನಿ..
’ಕಾಣೆಯಾಗಿದೆ’ ಎಂದು ನಾಳೆ
ಪೇಪರಿನಲ್ಲಿ ಹಾಕಿದರಾಯಿತು ಎಂದು ಮನೆಗೆ ಬಂದು ಮಲಗಿದೆ
ಬೆಳಿಗ್ಗೆ ಎದ್ದು ನೋಡಿದರೆ..
ಪಠ್ಯ ಪುಸ್ತಕ ಸಮಿತಿಯವರು
ಬಂದು ಬೈದರು
ಆ ನನ್ನ ಕವಿತೆ ಮೂರನೇ ಕ್ಲಾಸ್
ಪುಸ್ತಕದಲ್ಲಿ ಹೋಗಿ ಕೂತುಬಿಟ್ಟಿದೆಯಂತೆ..
ಬಿ.ಎ. ಅಂತಿಮ ತರಗತಿಯವರಿಗೂ
ಕಷ್ಟ ಅರ್ಥವಾಗುವುದು..ಮೂರನೇ ಕ್ಲಾಸ್ ಮಕ್ಕಳು
ಅಳುತ್ತಿದ್ದಾರಂತೆ..
ಪೆನ್ಸಿಲ್ನಲ್ಲಿ ಬರೆದಿದ್ದರೆ ಅಳಿಸಬಹುದಿತ್ತೇನೋ..
ಹಾಳಾದ್ ಪೆನ್ನಲ್ಲಿ ಬರೆದುಬಿಟ್ಟೆ..
ಅಲ್ಲ, ನಂಗೇನು ಗೊತ್ತಿತ್ತು..
ಹೀಗೆ ಕವಿತೆಗೆಲ್ಲಾ ಕಾಲು ಬಂದು ಓಡಿಹೋಗುತ್ತದೆ ಎಂದು..
ಹೇಗೂ ಮುಂದಿನವರ್ಷ ಸಿಲೆಬಸ್ ಬದಲಾಗುತ್ತದೆ
ಆವಾಗ ಕಿತ್ತು ಹಾಕಿದ್ರಾಯ್ತು ಅಂತ ಬೈದವರಿಗೇನೋ
ಸಮಾಧಾನ ಮಾಡಿದೆ..
ಆದರೆ ಒಂದು ವರ್ಷದ ತರುವಾಯ..
ನನ್ನ ಕವಿತೆ ಮತ್ತೆ ಸಿಕ್ಕಿತು..
ಈಗ ಗುರ್ತವೇ ಸಿಗ್ತಿಲ್ಲ..
ಕವಿತೆಯ ಕಾಲಿಗೆ ಬೆಳ್ಳಿ ಗೆಜ್ಜೆ..
ಆ ಕವಿತೆ ಈಗ ಸಿನಿಮಾ ಸೇರಿದೆಯಂತೆ..
"ಯಾರೇ ಕವಿತೆ, ನಿನ್ನ ಸಿನಿಮಾ ಹಾಡು
ಮಾಡ್ದೋರು" ಎಂದು ಕೇಳಲಾಗಿ,
"ನೀ ಬರೆದ ಚಂದಕ್ಕೆ, ನನ್ನನ್ನು
ಸಿನಿಮಾ ಹಾಡು ಯಾರ್ ಮಾಡ್ತಾರೆ..
ನಿನ್ ಬಿಟ್ ಓಡಿ ಹೋಗಿದ್ದಕ್ಕೆ
ಯಾವ್ದೋ ಹಾಡಿನ ಮಧ್ಯೆ
ಕೋರಸ್ ಆಗಿ ಸೇರಿಕೊಂಡಿದ್ದೇನೆ.."
ಹೀಗೆಂದು ಹೇಳುತ್ತಾ ಬೆಳೆದ ಪಾದದ ಕವಿತೆ
ತನ್ನನ್ನು ಪೂರ್ಣ
ಮಾಡುವ ಕವಿಯನ್ನರಸುತ್ತಾ
ಹಾರಿಹೋಯಿತು..
ಹೋಗಿದ್ದು ಎಲ್ಲಿಗೆ ?
ಬಲ್ಬಿನ ಒಳಗಿನ
ಜೋತಾಡುವ ಸುರುಳಿ
ಟಂಗಸ್ಟನ್ ಲೋಹಗಳು
ಕಾಯುತ್ತಿಲ್ಲ
ಕರಿ ಬುರುಡೆಯ
ಫ್ಯಾನಿನ ರೆಕ್ಕೆಗಳು
ಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ.
ಫ್ಲ್ಯಾಷಿಂಗ್ ಸ್ಯೂಸಿನ
ರಾಶಿ ರಾಶಿ ಪಟ್ಟಿಗಳನ್ನು
ಹೊತ್ತ ಪಟ್ಟೆ ಪಟ್ಟೆ ಚಾನೆಲ್ ಗಳು
ಮುಸುಕು ಹಾಕಿಕೊಂಡಿವೆ
ಫಿಲಿಪ್ಸಿನ ಹಳೆ ರೇಡಿಯೋದಲ್ಲಿ
ಕೂಗುತ್ತಿದ್ದ ಸ್ಪೀಕರಿನ
ಚುಂಬಕಗಳು
ಈಗ ಪಿಸುಗುಡುತ್ತಲೂ ಇಲ್ಲ.
ಚಾರ್ಜಿಗಿಟ್ಟ ಮೊಬೈಲಿನಲ್ಲಿ
ಎದ್ದೆದ್ದು ಕುಣಿಯುತ್ತಿದ್ದ
ಶಕ್ತಿಕಡ್ಡಿಗಳು ಸ್ತಬ್ಧವಾಗಿವೆ
ಅಂದರೆ ಈಗ ಕರೆಂಟು ಹೋಗಿದೆ
ಎಲ್ಲಿಗೆ?