ಶೂನ್ಯ ಪೂರ್ಣ :: ಪದ್ಯಾಣ ಗೋವಿಂದ ಭಟ್ಟ
ಮಾರ್ಚ್ ಏಳು ೨೦೧೧ ರಲ್ಲಿ ನಡೆದ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚಿಸಿದ್ದ ಕವಿತೆ.
ನಾನೊಂದು ಬಂಡೆಗಲ್ಲು
ಶಿಲ್ಪಿ ಕಣ್ಣಿಗೆ ಬೀಳಲಿಲ್ಲ, ಚಾಣದೇಟು ತಿನ್ನಲಿಲ್ಲ,
ಗುಡಿಯೊಳಗೆ ನಿಲ್ಲಲಿಲ್ಲ, ಯಾರ ಕಣ್ಣನೂ ತುಂಬಲಿಲ್ಲ
ಗಾಳಿ ತಾಗದ ಮೋಡದ ಒಂದು ತುಂಡು ನಾನು
ಅನ್ನವಾಗಲಿಲ್ಲ ಹಸಿದವಗೆ, ನೆರಳೂ ನೀಡಲಿಲ್ಲ
ಚಿಪ್ಪಿನೊಳು ಸೇರದ ಸ್ವಾತಿಯ ಮಳೆಯ ಹನಿ ನಾನು
ತರುಣಿಯ ಎದೆ ಮೇಲೆ ನಲಿದಾಡಲಿಲ್ಲ, ಕಡಲಾಗಲಿಲ್ಲ
ಕಾಡಲ್ಲರಳಿನಿಂತ ಕುಸುಮ ನಾನು
ದುಂಬಿ ಹಾಡಲಿಲ್ಲ, ಕಾಯಿಯಾಗಲಿಲ್ಲ, ಮುಡಿಯೇರಲಿಲ್ಲ
ಮಿದು ಬೆರಳಾಡದ ತಂತಿ ನಾನು
ವೀಣೆ ಬಿಗಿಯಲಿಲ್ಲ,ರಾಗವಾಗಲಿಲ್ಲ
ಎಣ್ಣೆ ಸಿಗದ ಉರಿಬೆಂಕಿ ನಾನು
ದೀಪವಾಗಲಿಲ್ಲ ದಾರಿ ತೋರಲಿಲ್ಲ ಬೆಳಕಾಗಲಿಲ್ಲ
ಮಂತ್ರ ಸ್ಪರ್ಷಿಸದ ನೀರು ನಾನು
ತೀರ್ಥವಾಗಲಿಲ್ಲ, ಕೊಳೆಯನ್ನು ತೊಳೆಯಲಿಲ್ಲ
ಚಾಮರ ಸೋಕದ ಗಾಳಿ ನಾನು
ಬೆವರೊರೆಸಲಿಲ್ಲ, ಉಸಿರಾಗಲಿಲ್ಲ, ಬೀಸಲಿಲ್ಲ
ಅರ್ಥ ಜೊತೆಗಿರದ ಶಬ್ದ ನಾನು
ರಸಿಕರೆದೆ ತುಂಬೋ ಕಾವ್ಯವಾಗಲಿಲ್ಲ, ಆಕಾಶವಾಗಲಿಲ್ಲ
ಮುಳ್ಳುಗಳಳತೆಗೆ ಸಿಗದ ಅಖಂಡ ಕಾಲ ನಾನು
ಗಡಿಯಾರ ಸಿಗಲಿಲ್ಲ
ಎಲ್ಲೂ ನಿಲ್ಲಲಿಲ್ಲ, ಇತಿಹಾಸವಾಗಲಿಲ್ಲ
ಭಜಕರಿಲ್ಲದ ದೇವ ನಾನು
ಪೂಜೆ ಸಿಗಲಿಲ್ಲ, ವರವ ಕೊಡಲಿಲ್ಲ
ಹೀಗೆ, ಜನರ ಶಾಪಕ್ಕೆ ತುತ್ತಾಗಿ
ಶಿಲ್ಪಿ ಕಣ್ಣಿಗೆ ಬೀಳದ ಹೆಬ್ಬಂಡೆಯಾದೆ, ಗಾಳಿ ಬೀಸದ ಕಡೆಯ ತುಂಡು ಮೋಡವಾದೆ
ಚಿಪ್ಪ ಸೇರದ ಸ್ವಾತಿ ಮಳೆಯ ಹನಿಯಾದೆ, ಕಾಡಲ್ಲರಳಿನಿಂತ ಕುಸುಮವಾದೆ
ಮಿದುಬೆರಳುಗಳಾಡದ ತಂತಿಯಾದೆ, ಎಣ್ಣೆ ಸಿಗದ ಉರಿ ಬೆಂಕಿಯಾದೆ
ಮಂತ್ರ ಸ್ಪರ್ಷವಿಲ್ಲದ ನೀರಾದೆ, ಚಾಮರ ಸೋಂಕದ ಗಾಳಿಯಾದೆ
ಅರ್ಥ ಜೊತೆಗಿರದ ಶಬ್ದವಾದೆ, ಮುಳ್ಳಳತೆಗೆ ಸಿಗದ ಕಾಲವಾದೆ, ಭಜಕರಿಲ್ಲದ ದೇವನಾದೆ
ಏನೂ ಇಲ್ಲದ ಎಲ್ಲವೂ ಆದೆ
ಶೂನ್ಯನಾದೆ
ಪೂರ್ಣನಾದೆ